ಪೌರನೌಕರರ ಹೋರಾಟಕ್ಕೆ ಎಐಬಿಎಸ್ಪಿ, ಜೆಡಿಎಸ್ ಬೆಂಬಲ

| Published : May 29 2025, 02:36 AM IST

ಸಾರಾಂಶ

ರಾಮನಗರ: ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಪೌರ ನೌಕರರ ಹೋರಾಟಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಾಗೂ ಜೆಡಿಎಸ್ ಬೆಂಬಲ ಸೂಚಿಸಿತು.

ರಾಮನಗರ: ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಪೌರ ನೌಕರರ ಹೋರಾಟಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಾಗೂ ಜೆಡಿಎಸ್ ಬೆಂಬಲ ಸೂಚಿಸಿತು.

ನಗರದ ನಗರಸಭೆ ಮುಂದೆ ಪೌರ ನೌಕರರು ಹಮ್ಮಿಕೊಂಡಿರುವ ಧರಣಿಯಲ್ಲಿ ಎಐಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ಶ್ರಮ ಜೀವಿಗಳಾಗಿದ್ದಾರೆ. ನಾಗರಿಕ ಸಮಾಜ ಎಚ್ಚರಗೊಳ್ಳುವ ಮುನ್ನವೇ ಬೀದಿಗೆ ಇಳಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಗಾಳಿ, ಚಳಿ, ಮಳೆ ನೋಡದೆ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

ರಾಮನಗರ ಜಿಲ್ಲೆ ಸೇರಿದಂತೆ ಇಡೀ ರಾಜ್ಯಾದ್ಯಂತ ಪೌರ ಕಾರ್ಮಿಕರು ತಮ್ಮ ಕೆಲಸ ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಿಗೆ ಬೆಂಬಲ ಸೂಚಿಸಿ ಯಾವೊಬ್ಬ ಶಾಸಕ ಹಾಗೂ ಸಂಸದರು ಈ ತನಕ ಪ್ರತಿಭಟನಾ ಸ್ಥಳಕ್ಕೆ ತೆರಳಿಲ್ಲ. ಇದು ಅವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.

ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಜ್ಯೋತಿ ಸಂಜೀವಿನಿ, ಕೆಜಿಐಡಿ, ಸೇರಿದಂತೆ ಸರಕಾರಿ ನೌಕರರಿಗೆ ಸಲ್ಲುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಬೇಕು. ಇಲ್ಲಿದಿದ್ದಲ್ಲಿ ಸಮುದಾಯ ಮತ್ತು ಹೋರಾಟಗಾರರು ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜ್ಯ ಮಟ್ಟದಲ್ಲಿ ಹೋರಾಟಕ್ಕೆ ಅವರ ಜೊತೆ ನಿಲ್ಲುವುದಾಗಿ ಎಂ.ನಾಗೇಶ್ ಎಚ್ಚರಿಕೆ ನೀಡಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ ಮಾತನಾಡಿ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ವ್ಯವಸ್ಥೆಯ ನೌಕರರು, ವಾಹನ ಚಾಲಕರು, ಲೋಡರ್ ಗಳು ಕ್ಲೀನರ್‌ಗಳು, ಯುಜಿಡಿ ಸಹಾಯಕರು ಸೇರಿದಂತೆ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ದಿನಗೂಲಿ ನೌಕರರನ್ನು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕಿರಣ್, ರಮೇಶ್, ಪ್ರವೀಣ್, ಪ್ರದೀಪ್, ಮೆಳ್ಳಹಳ್ಳಿ ವಿಜಿ ಕುಮಾರ್, ಬಿಡದಿ ಪುರಸಭೆ ಮಾಜಿ ಸದಸ್ಯ ಬಿ.ಎಂ.ರಮೇಶ್ ಪಾಲ್ಗೊಂಡಿದ್ದರು.

28ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ನಗರಸಭೆ ಕಚೇರಿ ಆವರಣದಲ್ಲಿ ಪೌರ ನೌಕರರು ನಡೆಸುತ್ತಿರುವ ಧರಣಿಯಲ್ಲಿ ಎಐಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ಮಾತನಾಡಿದರು.