ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ ಸರ್ಕಾರದ ‘ವಿಕಸಿತ್ ಭಾರತ್ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ 2025 ಕೂಡಲೇ ವಾಪಸ್ ಪಡೆಯಬೇಕು. ಹಾಗೂ ನರೇಗಾ ಯೋಜನೆಯಡಿ ಕನಿಷ್ಠ 200 ದಿನಗಳ ಉದ್ಯೋಗ ಖಾತ್ರಿಪಡಿಸಿ, ದಿನಕ್ಕೆ ₹600 ಕೂಲಿ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಮಾತನಾಡಿ, ನರೇಗಾ ಕಾಯ್ದೆಯಡಿ ಕೆಲಸ ಕೇಳಿದ 15 ದಿನಗಳಲ್ಲಿ ಉದ್ಯೋಗ ನೀಡುವುದು ಪಂಚಾಯಿತಿಯ ಕಾನೂನುಬದ್ಧ ಕರ್ತವ್ಯವಾಗಿತ್ತು. ಆದರೆ, ಹೊಸ ಕಾಯ್ದೆ ಇದನ್ನು ಸರ್ಕಾರದ ‘ದಾನ’ದಂತೆ ಮಾರ್ಪಡಿಸಿದೆ. ವರ್ಷಕ್ಕೆ 125 ದಿನಗಳ ಉದ್ಯೋಗ ನೀಡುವುದಾಗಿ ಸರ್ಕಾರ ಸುಳ್ಳು ಪ್ರಚಾರ ಮಾಡುತ್ತಿದೆ. ನರೇಗಾ ಯೋಜನೆಗೆ ಕೇಂದ್ರವೇ ಪೂರ್ಣ ಧನಸಹಾಯ ನೀಡುತ್ತಿತ್ತು. ಆದರೆ, ಈಗ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸು ಹಂಚಿಕೆಯನ್ನು 60:40 ಅನುಪಾತಕ್ಕೆ ಬದಲಾಯಿಸಲಾಗಿದೆ. ಇದರಿಂದ ರಾಜ್ಯ ಬಜೆಟ್ಗೆ ಹೊರೆಯಾಗಲಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಂಘಟನೆ ಸಹ ಕಾರ್ಯದರ್ಶಿ ನಾಗರಾಜ್ ರಾಮಗೊಂಡನಹಳ್ಳಿ, ಜಿಲ್ಲಾ ಸಮಿತಿ ಸದಸ್ಯರಾದ ಸತೀಶ್ ಕೈದಾಳೆ, ಮಂಜಪ್ಪ ಸಿಂಗಟಗೆರೆ, ಶಿವಣ್ಣ ಹನುಮನಹಳ್ಳಿ, ವಿಜಯಮ್ಮ ಹೊನ್ನೂರು, ಎಲ್ಲಪ್ಪ ದ್ಯಾಮನಳ್ಳಿ, ಕುಬೇರಪ್ಪ, ಚಂದ್ರಪ್ಪ, ನೂರಾರು ಕೃಷಿ ಕಾರ್ಮಿಕರು, ರೈತರು ಭಾಗವಹಿಸಿದ್ದರು.- - -
(ಬಾಕ್ಸ್) * ಬೇಡಿಕೆಗಳೇನೇನು? - ವಿಬಿ ಜಿ ರಾಮ್ ಜಿ ಕಾಯ್ದೆ-2025 ಕೂಡಲೇ ಸಂಪೂರ್ಣ ವಾಪಸ್ ತೆಗೆದುಕೊಳ್ಳಬೇಕು.
- ನರೇಗಾ ಕೆಲಸದ ದಿನಗಳನ್ನು ವರ್ಷಕ್ಕೆ 200 ಮಾನವ ದಿನಗಳಿಗೆ ಹೆಚ್ಚಿಸಬೇಕು.
- ದಿನದ ಕನಿಷ್ಠ ಕೂಲಿಯನ್ನು ₹600ಕ್ಕೆ ಖಾತ್ರಿಪಡಿಸಬೇಕು.- ಕಣ್ಣಿನ ಸ್ಕ್ಯಾನಿಂಗ್ ಮಾದರಿಯನ್ನು ತಕ್ಷಣ ಕೈಬಿಟ್ಟು, ಹಳೆಯ ‘ಗ್ರೂಪ್ ಫೋಟೊ’ ಮಾದರಿಯನ್ನೇ ಮುಂದುವರಿಸಬೇಕು.
- ರಾಜ್ಯ ಸರ್ಕಾರ ಗ್ರಾಮೀಣ ಬಡಜನರಿಗೆ ತಕ್ಷಣವೇ ಉದ್ಯೋಗ ಒದಗಿಸಲು ಪರ್ಯಾಯ ಕ್ರಮ ಕೈಗೊಳ್ಳಬೇಕು- - -
(ಟಾಪ್ ಕೋಟ್) ಕಾರ್ಮಿಕರ ಹಾಜರಾತಿಗಾಗಿ ಜಾರಿಗೆ ತಂದಿರುವ ಕಣ್ಣಿನ ರೆಟಿನಾ ಸ್ಕ್ಯಾನಿಂಗ್ ಪದ್ಧತಿಯು ಅತ್ಯಂತ ಖಂಡನೀಯ. ಕಠಿಣ ಶ್ರಮದ ಕೆಲಸ ಮಾಡುವ ಬಡಕಾರ್ಮಿಕರಿಗೆ ತಾಂತ್ರಿಕ ದೋಷಗಳಿಂದಾಗಿ ಹಾಜರಾತಿ ದಾಖಲಾಗುತ್ತಿಲ್ಲ. ಉನ್ನತ ಅಧಿಕಾರಿಗಳಿಗೂ ಇಲ್ಲದ ಈ ಕಟ್ಟುನಿಟ್ಟಿನ ನಿಯಮವನ್ನು ಬಡ ಕಾರ್ಮಿಕರ ಮೇಲೆ ಹೇರಿ, ಅವರು ವಾರಗಟ್ಟಲೇ ಮಾಡಿದ ಕೆಲಸದ ಕೂಲಿಯಿಂದ ವಂಚಿತರಾಗುವಂತೆ ಮಾಡಲಾಗುತ್ತಿದೆ.- ಮಧು ತೊಗಲೇರಿ, ಜಿಲ್ಲಾಧ್ಯಕ್ಷ, ಎಐಕೆಕೆಎಂಎಸ್.
- - --19ಕೆಡಿವಿಜಿ38: ದಾವಣಗೆರೆ ಜಿಪಂ ಆವರಣದಲ್ಲಿ ಎಐಕೆಕೆಎಂಎಸ್ ಸಂಘಟನೆ ನೇತೃತ್ವದಲ್ಲಿ ವಿಬಿ ಜಿ ರಾಮ್ ಜಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.