ದ್ರಾವಿಡ್, ಪಡುಕೋಣೆ ಮಾದರಿ ಅಕಾಡೆಮಿ ಸ್ಥಾಪಿಸುವ ಗುರಿ

| Published : May 03 2024, 01:00 AM IST

ಸಾರಾಂಶ

ಅಂತರ ರಾಷ್ಟ್ರೀಯ ಕ್ರೀಡಾಪಟುಗಳಾದ ರಾಹುಲ್ ದ್ರಾವಿಡ್‌, ಪ್ರಕಾಶ ಪಡುಕೋಣೆ ಅಕಾಡೆಮಿ ಮಾದರಿಯಲ್ಲೇ ದಾವಣಗೆರೆಯಲ್ಲೂ ಅಕಾಡೆಮಿ ಸ್ಥಾಪಿಸುವ ಮೂಲಕ ಇಲ್ಲಿನ ಮಕ್ಕಳು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಗುರಿ ಹಾಗೂ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದೇನೆ. ಕ್ಷೇತ್ರದ ಮತದಾರರು ಮತ ನೀಡುವ ಮೂಲಕ ಆಶೀರ್ವದಿಸಿ, ಸಂಸದನಾಗಲು ಅ‍ವಕಾಶ ಮಾಡಿಕೊಡಬೇಕು ಎಂದು ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮನವಿ ಮಾಡಿದರು.

- ವಿದ್ಯಾರ್ಥಿ, ಯುವಜನರು, ರೈತರು, ಕಾರ್ಮಿಕರ ಹಿತಕಾಯಲು ಬದ್ಧ: ಜಿ.ಬಿ.ವಿನಯಕುಮಾರ ಭರವಸೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಅಂತರ ರಾಷ್ಟ್ರೀಯ ಕ್ರೀಡಾಪಟುಗಳಾದ ರಾಹುಲ್ ದ್ರಾವಿಡ್‌, ಪ್ರಕಾಶ ಪಡುಕೋಣೆ ಅಕಾಡೆಮಿ ಮಾದರಿಯಲ್ಲೇ ದಾವಣಗೆರೆಯಲ್ಲೂ ಅಕಾಡೆಮಿ ಸ್ಥಾಪಿಸುವ ಮೂಲಕ ಇಲ್ಲಿನ ಮಕ್ಕಳು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಗುರಿ ಹಾಗೂ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದೇನೆ. ಕ್ಷೇತ್ರದ ಮತದಾರರು ಮತ ನೀಡುವ ಮೂಲಕ ಆಶೀರ್ವದಿಸಿ, ಸಂಸದನಾಗಲು ಅ‍ವಕಾಶ ಮಾಡಿಕೊಡಬೇಕು ಎಂದು ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮನವಿ ಮಾಡಿದರು.

ದಾವಣಗೆರೆ ತಾಲೂಕಿನ ದೊಡ್ಡ ಬೂದಿಹಾಳ, ಅರಸಾಪುರ, ಕೋಡಿಹಳ್ಳಿ, ಚಿಕ್ಕ ಬೂದಿಹಾಳ, ದೊಡ್ಡಬಾತಿ, ಹರಿಹರ ತಾ. ದೊಗ್ಗಳ್ಳಿ ಗ್ರಾಮಗಳಲ್ಲಿ ಗುರುವಾರ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ರಾಹುಲ್ ದ್ರಾವಿಡ್, ಪ್ರಕಾಶ ಪಡುಕೋಣೆ ಮಾದರಿಯಲ್ಲೇ ಇಲ್ಲಿಯೂ ಅಕಾಡೆಮಿ ಸ್ಥಾಪಿಸಿ, ಮಕ್ಕಳು, ಯುವಜನರಿಗ ಉತ್ತಮ ಭವಿಷ್ಯ ಕಟ್ಟಿಕೊಡುವ ಗುರಿ ಇದೆ ಎಂದರು.

ಇಡೀ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಐಟಿ-ಬಿಟಿ, ಆಹಾರ ಸಂಸ್ಕರಣಾ ಘಟಕ, ಆಗ್ರೋ ಇಂಡಸ್ಟ್ರೀಸ್, ಅಡಿಕೆ, ಮೆಕ್ಕೆಜೋಳ, ಭತ್ತ ಸೇರಿದಂತೆ ಇತರೆ ಬೆಳೆಗಳ ಸಂಶೋಧನಾ ಕೇಂದ್ರ, ಚಾಕೊಲೇಟ್, ಪೇಂಟಿಂಗ್ ಸೇರಿ ಅಡಿಕೆ ಸಂಬಂಧಿತ ಕೈಗಾರಿಕೆ, ಅಡಿಕೆ ಉಪ ಉತ್ಪನ್ನಗಳ ಕೈಗಾರಿಕೆ, ಜವಳಿ ಪಾರ್ಕ್, ಟೆಕ್ಸ್‌ಟೈಲ್ಸ್ ಉದ್ಯಮಕ್ಕೆ ಉತ್ತೇಜನ ನನ್ನ ಪ್ರಮುಖ ಆದ್ಯತೆಗಳು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ನ್ಯಾಷನಲ್ ಇನ್ ಸ್ಟೆಂಟ್ ಡಿಸೈನ್ ಸಂಸ್ಥೆ, ಏತ ನೀರಾವರಿ, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತಗೊಳಿಸಬೇಕು. ಈ ಕಾರ್ಯ ಆಗಬೇಕಾದರೆ ನನ್ನನ್ನು ಲೋಕಸಭೆ ಆಯ್ಕೆ ಮಾಡಿ, ಕಳಿಸಿಕೊಡಿ ಎಂದು ಕೋರಿದರು.

ದೊಡ್ಡಬೂದಿಹಾಳ್ ಗ್ರಾಮದ ಸಿದ್ಧಪ್ಪ, ಮುರುಗೇಶ, ಚಂದ್ರಪ್ಪ, ಈಶಣ್ಣ, ಗೌಡ್ರ ಸಿದ್ಧಬಸಪ್ಪ, ಕುಮಾರ, ಪ್ರವೀಣಕುಮಾರ, ಸೋಮಣ್ಣರ ಬಸಣ್ಣ, ಗಿರೀಶ, ಹನುಮಂತಣ್ಣ, ಕೋಡಿಹಳ್ಳಿ ಗ್ರಾಮದ ಆನಂದ, ಕುಮಾರ, ದುರುಗೇಶ, ಹರೀಶ, ಮಧು, ಪ್ರದೀಪ, ಚಿಕ್ಕಬೂದಿಹಾಳು ಗ್ರಾಮದ ಹನುಮಂತಪ್ಪ, ರುದ್ರಪ್ಪ, ಪ್ರಕಾಶ, ಸಣ್ಣರುದ್ರಪ್ಪ, ಪ್ರಕಾಶ, ಅನಂತ, ಮಹೇಶ, ಗಿರೀಶ, ಬಸವರಾಜ್, ಅಣ್ಣಪ್ಪ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಮತ್ತಿತರರು ಪಾಲ್ಗೊಂಡಿದ್ದರು.

- - -

ಬಾಕ್ಸ್

"ಇಬ್ಬರ ಜಗಳದಲ್ಲಿ ಲಾಭಕ್ಕಾಗಿ ಬಂದಿಲ್ಲ "

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳ ನಡುವಿನ ಜಗಳದಲ್ಲಿ ಪಕ್ಷೇತರ ಅಭ್ಯರ್ಥಿ ಲಾಭ ಪಡೆಯುತ್ತಾರೆಂಬ ಭಾವನೆ ಜನರಲ್ಲಿದೆ. ಆದರೆ, ನಾನು ನನ್ನದೇ ಆದ ತತ್ವ, ಸಿದ್ಧಾಂತ, ವ್ಯಕ್ತಿತ್ವ ಹೊಂದಿದ್ದೇನೆ. ಇಬ್ಬರ ಜಗಳದಲ್ಲಿ ಮೂರನೇಯವನಾಗಿ ಲಾಭ ಪಡೆಯಲು ಬಂದವನು ನಾನಲ್ಲ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಸ್ಪಷ್ಟಪಡಿಸಿದರು.

ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು ಇಡಬೇಕು. ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬುದೇ ನನ್ನ ಗುರಿ. ಇಬ್ಬರ ಜಗಳದ ಮಧ್ಯೆ ಲಾಭ ಮಾಡಿಕೊಳ್ಳಬೇಕೆಂಬ ಲೆಕ್ಕಾಚಾರದವನು ನಾನಲ್ಲ. ಕೈಗಾರಿಕೆಗಳನ್ನು, ಸಂಸ್ಥೆಗಳನ್ನು ದಾವಣಗೆರೆಗೆ ತರಬೇಕು. ಇದೇ ಉದ್ದೇಶ ಎಂದು ಹೇಳಿದರು.

- - - -2ಕೆಡಿವಿಜಿ5, 6, 7:

ದಾವಣಗೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮತಯಾಚಿಸಿದರು.