ಸಾರಾಂಶ
ತರೀಕೆರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಗಮಕ ಸಾಹಿತ್ಯ ಸಮ್ಮೇಳನ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ತರೀಕೆರೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಗಮಕ ಸಾಹಿತ್ಯ ಸಮ್ಮೇಳನ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದ್ದಾರೆ.ಭಾನುವಾರ ಪತ್ರಿಕೆಯೊಂದಿಗೆ ಮಾತನಾಡಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಒಳಗೊಂಡಂತೆ ಇಡೀ ಜಿಲ್ಲೆಯ ಹಳ್ಳಿ ಹೋಬಳಿ, ಪಟ್ಟಣ ಮತ್ತು ತಾಲೂಕು ಕೇಂದ್ರಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಪದಾಧಿಕಾರಿಗಳು, ಜಿಲ್ಲೆಯ ಜನತೆಯ ಹಾಗೂ ಸಾಹಿತ್ಯಾಭಿಮಾನಿಗಳ ಸಂಪೂರ್ಣ ಸಹಕಾರದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಮಹಿಳಾ ಸಾಹಿತ್ಯ ಸಮ್ಮೇಳನ, ದಾಸ ಸಾಹಿತ್ಯ ಸಮ್ಮೇಳನ, ವಚನ ಸಾಹಿತ್ಯ ಸಮ್ಮೇಳನ, ಮಹಿಳಾ ಜಾನಪದ ಸಮ್ಮೇಳನ, ರಾಜ್ಯದಲ್ಲೇ ಪ್ರಥಮ ಬಾರಿಗೆ ಚಿಕ್ಕಮಗಳೂರು-ಚಿತ್ರದುರ್ಗ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಾಹಿತ್ಯ ಸಮ್ಮೇಳನ, ತಾಲೂಕು ಸಮ್ಮೇಳನಗಳನ್ನು ಹೋಬಳಿ ಸಮ್ಮೇಳನ ಹಾಗೂ ನಿರಂತರವಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, ದತ್ತಿ ಉಪನ್ಯಾಸಗಳನ್ನು, ಕಥಾ ಹಾಗೂ ಕಾವ್ಯ ಕಮ್ಮಟ, ವಿಚಾರ ಸಂಕಿರಣಗಳನ್ನು, ಕವಿಗೋಷ್ಠಿಗಳನ್ನು ಹೆಚ್ಚು ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಿರ್ವಹಿಸಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಬಳಿಗೆ ಕರೆದೊಯ್ಯುವ ಕಾರ್ಯ ನಿರ್ವಹಿಸಲಾಗಿದೆ ಎಂದು ಹೇಳಿದ್ದಾರೆ.ಪ್ರಪ್ರಥಮ ಗಮಕ ಸಾಹಿತ್ಯ ಸಮ್ಮೇಳನ ಆಯೋಜಿಸುವ ಆಶಯ ಜಿಲ್ಲೆಯಲ್ಲಿ ಕರ್ನಾಟಕ ಕಥಾ ಮಂಜರಿ ಮಹಾ ಕಾವ್ಯದ ಕತೃ ಕುಮಾರವ್ಯಾಸ ಮಹಾ ಕವಿ ವಂಶಜರು ನಮ್ಮ ಜಿಲ್ಲೆಯವರು, ದೇವನೂರು ಲಕ್ಷ್ಮೀಶ ಮಹಾ ಕವಿ ನಮ್ಮ ಜಿಲ್ಲೆಯವ ರಾಗಿದ್ದು, ಜೈಮಿನಿ ಭಾರತದ ಕಥಾ ಪ್ರಸಂಗಗಳನ್ನು ಕುರಿತು ನಮ್ಮ ಜಿಲ್ಲೆಯ ಗಮಕ ಸಾಹಿತ್ಯದ ಗಮಕ ವಾಚನ ಮತ್ತು ವ್ಯಾಖ್ಯಾನ ಮಾಡುವ ಸಾಹಿತಿಗಳು ಜಿಲ್ಲೆಯಲ್ಲಿ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಮಹಾ ಕವಿ ಕುಮಾರವ್ಯಾಸರ ಕರ್ನಾಟಕ ಕಥಾ ಪ್ರಸಂಗಗಳ ಗಮಕ ವಾಚನ ಮತ್ತು ವ್ಯಾಖ್ಯಾನ ಮಾಡುವಲ್ಲಿ ನಮ್ಮ ಜಿಲ್ಲೆಯ ಗಮಕ ಸಾಹಿತಿಗಳ ಕೊಡುಗೆಆಪಾರವಾಗಿದೆ ಎಂದು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಮಾಡುವವರು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದು, ಇವರು ಎಲೆ ಮರೆ ಕಾಯಿಯಂತೆ ಗಮಕ ಸಾಹಿತ್ಯ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಗಮಕ ವಾಚನ ಮತ್ತು ವ್ಯಾಖ್ಯಾನ ಮಾಡುವ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗಮಕ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಈ ಸಮ್ಮೇಳನವನ್ನು ಹೆಚ್ಚು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.ಅತ್ಯಂತ ಪ್ರಾಚೀನ ಮತ್ತು ಅಮೂಲ್ಯವೂ ಆದ ಗಮಕ ಸಾಹಿತ್ಯದ ಕಡೆಗೆ ಯುವಕರನ್ನು ಆಕರ್ಷಿಸುವ ಹಿನ್ನಲೆಯಲ್ಲಿ ಸಮ್ಮೇಳನ ಆಯೋಜಿಸಿ, ಸಮ್ಮೇಳಿನದಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ, ಗಮಕ ಸಾಹಿತ್ಯ ಕುರಿತು ವಿಚಾರ ಗೋಷ್ಠಿ ಏರ್ಪಡಿಸಿ ಸಮ್ಮೇಳನದಲ್ಲಿ ಗಮಕ ಸಾಹಿತ್ಯದ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಈ ಕುರಿತು ಸಮ್ಮೇಳನದ ಸ್ಥಳ, ಸಮ್ಮೇಳನಾಧ್ಯಕ್ಷರ ಸರ್ವ ಸಮ್ಮತ ಆಯ್ಕೆ, ಇತ್ಯಾದಿ ಎಲ್ಲ ಪ್ರಕ್ರಿಯೆಗಳ ಬಗ್ಗೆ ಅತಿ ಶೀಘ್ರದಲ್ಲೇ ಸಾಹಿತ್ಯಾಭಿಮಾನಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.-----------ಫೋಟೋ ಇದೆಃ25ಕೆಟಿಆರ್.ಕೆ.209ಃ ಕಸಾಪ ಜಿಲ್ಲಾಧ್ಯಕ್ಷರು ಸೂರಿ ಶ್ರೀನಿವಾಸ್