ಸಾರಾಂಶ
ಕರ್ನಾಟಕದಲ್ಲಿ ಸ್ತ್ರೀ ಭ್ರೂಣ ಹತ್ಯೆ, ಬಾಲ್ಯವಿವಾಹ, ಗರ್ಭಧಾರಣೆಗಳ ಪ್ರಕರಣಗಳು ಮಿತಿಮೀರಿವೆ ಎಂದು ಎಐಎಂಎಸ್ಎಸ್ ಅಖಿಲ ಭಾರತ ಉಪಾಧ್ಯಕ್ಷೆ ಡಾ. ಸುಧಾ ಕಾಮತ್ ಕಳವಳ ವ್ಯಕ್ತಪಡಿಸಿದರು.
ಮೈಸೂರು : ಕರ್ನಾಟಕದಲ್ಲಿ ಸ್ತ್ರೀ ಭ್ರೂಣ ಹತ್ಯೆ, ಬಾಲ್ಯವಿವಾಹ, ಗರ್ಭಧಾರಣೆಗಳ ಪ್ರಕರಣಗಳು ಮಿತಿಮೀರಿವೆ ಎಂದು ಎಐಎಂಎಸ್ಎಸ್ ಅಖಿಲ ಭಾರತ ಉಪಾಧ್ಯಕ್ಷೆ ಡಾ. ಸುಧಾ ಕಾಮತ್ ಕಳವಳ ವ್ಯಕ್ತಪಡಿಸಿದರು.
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಆಯೋಜಿಸಿರುವ 2 ದಿನಗಳ ರಾಜ್ಯ ಮಟ್ಟದ ಕಾರ್ಯಕರ್ತೆಯರ ಶಿಬಿರದಲ್ಲಿ ಶನಿವಾರ ಮಾತನಾಡಿದ ಅವರು, ಬಾಲ್ಯ ವಿವಾಹದಿಂದ ಚಿಕ್ಕ ಹೆಣ್ಣು ಮಕ್ಕಳು ಗರ್ಭ ಧರಿಸುತ್ತಿದ್ದಾರೆ. ಇಂತಹ ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುವ ಈ ಮಕ್ಕಳ ಸಾಮಾಜಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ಸದೃಢವಾಗಿರುವುದಿಲ್ಲ. ಇಂತಹ ಹೆಣ್ಣು ಮಕ್ಕಳಿಗೆ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿ ಹೊರೆಸುವುದು, ಅವರ ಸಾಮಾಜಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದರು.
ಹೆಣ್ಣೆಂದರೆ ತಾತ್ಸಾರವಾಗಿ ಕಾಣುವ ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಗವನ್ನು ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ಚಿವುಟಿ ಹಾಕಲಾಗುತ್ತಿದೆ. ಗರ್ಭದಿಂದ ಹಿಡಿದು ಹೆಣ್ಣು, ಜನಿಸಿ ಸಾಯುವವರೆಗೂ ಅವಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಎದುರಿಸಲು ಇಂದಿನ ಮಹಿಳಾ ಸಮೂಹ ವೈಚಾರಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಸದೃಢತೆಯಿಂದ ಪುರುಷ ಪ್ರಧಾನ ಧೋರಣೆಗಳನ್ನು ಹೆಮ್ಮೆಟ್ಟಿಸಿ ಮುನ್ನಡೆಯಬೇಕಿದೆ ಎಂದು ಅವರು ಕರೆ ನೀಡಿದರು.
ಎಐಎಂಎಸ್ಎಸ್ ರಾಜ್ಯಾಧ್ಯಕ್ಷೆ ಎಂ.ಎನ್. ಮಂಜುಳಾ ಮಾತನಾಡಿ, ಸಮಾಜದಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದಕ್ಕೆ ಚಿತ್ರದುರ್ಗದಲ್ಲಿ ಬಲವಂತವಾಗಿ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿ ವಿವಾಹವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸಿದ ಪ್ರಕರಣ ಈ ಸಮಸ್ಯೆಗೆ ಹಿಡಿದ ಕನ್ನಡಿಯಂತಿದೆ ಎಂದರು.ಇಷ್ಟಾದರೂ ವಿಧಾನಸೌಧದಲ್ಲಿರುವ ನಮ್ಮ ಆಳ್ವಿಕರಿಗೆ ಈ ಸಮಸ್ಯೆ ತೀವ್ರತೆ ಅರ್ಥ ಆಗುತ್ತಿಲ್ಲವೇ? ಸರ್ಕಾರಗಳು ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆಗಳಿಗೆ ಮಾತ್ರ ಸೀಮಿತವಾಗುತ್ತಿದೆ ಹೊರತು ತಾವು ಹೇಳಿದಂತೆ ನುಡಿಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಹೆಣ್ಣು ಹುಟ್ಟುವುದಕ್ಕೂ ನಿರಾಕರಿಸುವ ಈ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ. ಹೆಣ್ಣು ಹುಟ್ಟಿದ ಮೇಲೆ ಅವಳಿಗೆ ಒಂದು ಗೌರವಯುತವಾದ ಜೀವನವನ್ನು ರೂಪಿಸಿಕೊಳ್ಳುವುದು ಒಂದು ದೊಡ್ಡ ಸವಾಲೇ ಆಗಿದೆ. ತನ್ನ ಹುಟ್ಟನ್ನು ಖಾತ್ರಿ ಪಡಿಸಿ ನಂತರ ಬದುಕನ್ನು ಕಟ್ಟಿಕೊಳ್ಳವಲ್ಲಿ ಹೆಣ್ಣು ಪ್ರತಿ ಹಂತದಲ್ಲೂ ಹೆಣಗಾಡುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳಿಗೆ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುವವರೆಗೂ ಮಹಿಳೆಯರು ಒಗ್ಗಟ್ಟಾಗಿ ಆಗ್ರಹಿಸಬೇಕಿದೆ.
ಆ ನಿಟ್ಟಿನಲ್ಲಿ ಸಂಘಟಿತರಾಗುವುದು ಅಗತ್ಯ ಎಂದು ಅವರು ಹೇಳಿದರು.ರಾಜ್ಯ ಉಪಾಧ್ಯಕ್ಷೆ ಜಿ.ಎಸ್. ಸೀಮಾ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಎಸ್. ಶೋಭಾ, ರಾಜ್ಯ ಸಮಿತಿ ಸದಸ್ಯರು, 20 ಹೆಚ್ಚು ಜಿಲ್ಲೆಗಳ ಪ್ರತಿನಿಧಿಗಳು, 600 ಹೆಚ್ಚು ರೈತಾಪಿ, ಉದ್ಯೋಗಸ್ಥ ಮಹಿಳೆಯರು, ಗೃಹಿಣಿಯರು, ವಿದ್ಯಾರ್ಥಿನಿಯರು ಇದ್ದರು.