ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕಲುಷಿತ ಸಮಾಜದ ಉದ್ಧಾರಕ್ಕೆ ಕಲೆ ಮುಖ್ಯ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಹೇಳಿದರು.ಅಕ್ಷರನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಅಕ್ಷರನಾದ ಪಬ್ಲಿಕೇಷನ್ಸ್ ಮತ್ತು ಜಿಲ್ಲಾ ಕಸಾಪ ವತಿಯಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕವಿ ಕಾವ್ಯ ಕಥಾ ಸಂಗಮ- ನಾಲ್ಕನೇ ಆವೃತ್ತಿಯನ್ನು ಉದ್ಘಾಟಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜ ನಾನಾ ರೀತಿಯಲ್ಲಿ ಕಲುಷಿತವಾಗಿದೆ ಎಂದು ವಿಷಾದಿಸಿದರು.
ಅಕ್ಷರ ಎಂದರೇ ಸಾಹಿತ್ಯ. ನಾಶವಿಲ್ಲದ್ದು ಎಂದರ್ಥ. ನಾದ ಎಂದರೇ ಸಂಗೀತ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಸೇರುತ್ತದೆ. ಸಂಸ್ಕೃತಿ ಬಹಳ ವ್ಯಾಪಕವಾದುದು. ಎಲ್ಲವನ್ನು ಒಳಗೊಳ್ಳುವಂಥದ್ದು. ಸಂಸ್ಕೃತಿ ಎಂದರೇ ಮಾಧುರ್ಯ, ಬೆಳಗು. ಮಾಧುರ್ಯದ ಬೆಳಗನ್ನು ಅನುಭವಿಸಬೇಕು ಎಂದರು.ಅಕ್ಷರನಾದ ಸಂಸ್ಥೆಯು 175 ಕೃತಿಗಳನ್ನು ಪ್ರಕಟಿಸಿರುವುದು ಅಸಾಧಾರಣ ಸಾಧನೆ. ಈ ಕಾರ್ಯವನ್ನು ಸಾರಸ್ವತ ಸೇನಾ ಕಾರ್ಯ ಎನ್ನಬಹುದು. ಸೇನೆ ಎಂದರೆ ಶತ್ರು ನಿಗ್ರಹಕ. ಪುಸ್ತಕ ಸೈನ್ಯ ಇದ್ದರೆ ಕೆಡಕುಗಳ ನಿವಾರಣೆ ಮಾಡಬಹುದು. ಪುಸ್ತಕಗಳು ನವ ಸಮಾಜ ಕಟ್ಟುವ ಇಟ್ಟಿಗೆಗಳಿದ್ದಂತೆ. ಬುಕ್ಸ್ ಆರ್ ಬ್ರಿಕ್ಸ್ ಎಂಬುದು ನನ್ನದೇ ಮಾತು. ಸಮಾಜ ನಿರ್ಮಾಣಕ್ಕೆ ಜ್ಞಾನನಿಧಿ. ಪ್ರತಿನಿಧಿ, ಸಂವಿಧಾನ ನಿಧಿ ಎಂದೂ ಹೇಳಬಹುದು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಉಪಾಧ್ಯಕ್ಷ ಟಿ. ತ್ಯಾಗರಾಜ್, ಸಮರ್ಪಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಾಹಿತಿಗಳಾದ ಪಂಡಿತ ಭೀಮರಾವ್ ಅವಜಿ, ಪುಷ್ಪಾ ನಾಗತಿಹಳ್ಳಿ, ಶ್ವೇತಾ ಪ್ರಕಾಶ್, ಕರುನಾಡ ಕನ್ನಡ ಕಲಾ ಸಿರ ಬಳಗದ ಸಂಸ್ಥಾಪದ ರಾಜ್ಯಾಧ್ಯಕ್ಷ ಸಿ.ಎಂ. ಅಂಬರೀಶ್ ಮುಖ್ಯಅತಿಥಿಗಳಾಗಿದ್ದರು.ಶ್ರುತಿ ಮಧುಸೂದನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಧುಸೂದನ್ ಆಚಾರ್ಯ ಆಶಯ ಭಾಷಣ ಮಾಡಿದರು. ಸಿಂಚನಾ ಸ್ವಾಗತ ನೃತ್ಯ ಪ್ರದರ್ಶಿಸಿದರು. ಸೌಮ್ಯಾ ಕೋಟಿ ಸ್ವಾಗತಿಸಿದರು. ತಾರಾ ಸಂತೋಷ್, ನೀವಿಯಾ ಗೋಮ್ಸ್, ತೇಜಸ್ವಿನಿ ಕೆ. ಸುನಿಲ್, ಅಕ್ಷಯ್ ಶಾಸ್ತ್ರಿ, ಎಸ್. ಜಗದೀಶ್ ಇದ್ದರು.
ಇದೇ ಸಮಾರಂಭದಲ್ಲಿ ಸಿಪಿಕೆ, ಮಡ್ಡೀಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ಟಿ. ತ್ಯಾಗರಾಜ್. ಎಸ್. ಶಶಿಕುಮಾರ್ ಸೇರಿದಂತೆ ಸಾಧಕರಿಗೆ ಮೈಸೂರು ರತ್ನ, 22 ಸಾಹಿತಿಗಳಿಗೆ ಲೇಖನಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.