ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನ ಉಚಿತ ಬಿಸಿ ಊಟ

| Published : Nov 04 2025, 03:30 AM IST

ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನ ಉಚಿತ ಬಿಸಿ ಊಟ
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಬೆಳೆದ ಆಹಾರ ಪದಾರ್ಥಗಳು ಹಸಿದ ಹೊಟ್ಟೆ ಸೇರಬೇಕು, ಕಸದ ಬುಟ್ಟಿಯನಲ್ಲ. ರಾಷ್ಟ್ರೀಯ ಸಂಪತ್ತು ಹಾಳಾಗುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಹಸಿದ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನ ಉಚಿತವಾಗಿ ಬಿಸಿ ಊಟ ಒದಗಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ನಗರ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.ಅಕ್ಷಯ ಆಹಾರ ಪ್ರತಿಷ್ಠಾನ ಮತ್ತು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಂಯುಕ್ತವಾಗಿ ಕಾಲೇಜಿನ ಸುಮಾರು 200 ವಿದ್ಯಾರ್ಥಿನಿಯರಿಗೆ ದಿನನಿತ್ಯ ಮಧ್ಯಾಹ್ನದ ಬಿಸಿ ಊಟ ಕೊಡುವ ಯೋಜನೆಯನ್ನು ಆರಂಭಿಸಿದೆ.ಈ ವೇಳೆ ಅಕ್ಷಯ ಆಹಾರ ಪ್ರತಿಷ್ಠಾನದ ರಾಜೇಂದ್ರ ಮಾತನಾಡಿ, ರೈತ ಬೆಳೆದ ಆಹಾರ ಪದಾರ್ಥಗಳು ಹಸಿದ ಹೊಟ್ಟೆ ಸೇರಬೇಕು, ಕಸದ ಬುಟ್ಟಿಯನಲ್ಲ. ರಾಷ್ಟ್ರೀಯ ಸಂಪತ್ತು ಹಾಳಾಗುವುದು ಸರಿಯಲ್ಲ. ಅಕ್ಷಯ ಆಹಾರ ಜೋಳಿಗೆಯ ಚಟುವಟಿಕೆಗಳು ನನ್ನ ಮನಸ್ಸಿಗೆ ಸಮಾಧಾನವನ್ನು ನೀಡಿದೆ. ವಿದ್ಯಾಭ್ಯಾಸದ ದಿನಗಳಲ್ಲಿ ನಾನು ಹಸಿವನ್ನು ಅನುಭವಿಸಿದವನು. ನಮಗೆ ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ ಎಂದು ಹೇಳಿದರು.ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕ ಎ.ಬಿ. ನಾಗೇಂದ್ರ ಪ್ರಸಾದ್ ಮಾತನಾಡಿ, ದಾಸೋಹ ನಮ್ಮ ಸಂಸ್ಕೃತಿಗೆ ಹೊಸದಲ್ಲ. ಹಸಿದವರಿಗೆ ಊಟ ನೀಡುವ ಪರಂಪರೆ ನಮ್ಮದು. ದೂರದ ಊರುಗಳಿಂದ ಶಿಕ್ಷಣಕ್ಕಾಗಿ ಇಲ್ಲಿ ಬಂದಿರುವ ಅನೇಕ ವಿದ್ಯಾರ್ಥಿನಿಯರು, ಹಸಿವಿನಿಂದ ಬಳಲುವುದನ್ನು ಈ ಕಾರ್ಯಕ್ರಮ ನೀಗಿಸಲಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಎಸ್. ಅನಿತಾ ಮಾತನಾಡಿ, ಈ ಕಾರ್ಯಕ್ರಮ ಆಯೋಜಿಸಲು ನನಗೆ ಪೆರೇರಣೆ ನನ್ನ ಕುಟುಂಬ. ಹಸಿದ ವಿದ್ಯಾರ್ಥಿಗಳನ್ನು ನನ್ನ ತಂದೆ ಮನೆಗೆ ಕರೆದು ಊಟ ನೀಡುತ್ತಿದ್ದರು. ನನ್ನ ತಾಯಿ ಪ್ರತಿದಿನ ಅನೇಕರಿಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದು ನೋಡಿ ಬೆಳೆದವಳು. ಮಧ್ಯಾಹ್ನದ ನಂತರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಉಳಿಯದೆ ಇರಲು ಹಸಿವು ಒಂದು ಪ್ರಮುಖ ಕಾರಣ ಎಂದರು.ಐಕ್ಯೂಎಸಿ ಸಂಯೋಜಕಿ ಡಾ. ಪ್ರಿಯಾ ಉತ್ತಯ್ಯ, ಪತ್ರಾಂಕಿತ ವ್ಯವಸ್ಥಾಪಕ ಕೆ. ವೆಂಕಟೇಶ್ ಇದ್ದರು. ಕಾಲೇಜಿನ ಬಿಸಿ ಊಟ ಯೋಜನೆಯ ಸಂಚಾಲಕ ಡಾ. ಅಣ್ಣಯ್ಯ ತೈಲೂರ್ ಸ್ವಾಗತಿಸಿದರು. ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ. ಸರ್ವಮಂಗಳ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ವಂದಿಸಿದರು.