ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಏರಿದ್ದರೂ ಅಕ್ಷಯ ತೃತೀಯಾ ದಿನವಾದ ಬುಧವಾರ ಜನತೆ ಭರ್ಜರಿ ಚಿನ್ನಾಭರಣಗಳ ಖರೀದಿ ಮಾಡಿದ್ದು, ರಾಜ್ಯದಲ್ಲಿ ₹3000 ಕೋಟಿಗೂ ಹೆಚ್ಚಿನ ಚಿನ್ನ, ಬೆಳ್ಳಿ ಆಭರಣ ವಹಿವಾಟು ನಡೆದಿದೆ.ರಾತ್ರಿ 9 ಗಂಟೆ ಸುಮಾರಿಗೆ 2380 ಕೆ.ಜಿ. ಚಿನ್ನ, 4560 ಕೆ.ಜಿ. ಬೆಳ್ಳಿ ಮಾರಾಟವಾಗಿತ್ತು. ಕಳೆದ ವರ್ಷಕ್ಕಿಂತ ಚಿನ್ನ ಶೇ.30 ರಷ್ಟು ಹಾಗೂ ಬೆಳ್ಳಿ ಶೇ.50 ರಷ್ಟು ಹೆಚ್ಚಿನ ಮಾರಾಟವಾಗಿದೆ. ಇದರಲ್ಲಿ ಬೆಂಗಳೂರಲ್ಲೇ ಶೇ.30-40ರಷ್ಟು ವಹಿವಾಟು ನಡೆದಿದ್ದು, ನಂತರ ಎರಡನೇ ಸ್ಥಾನದಲ್ಲಿ ಹುಬ್ಬಳ್ಳಿ, ಮೂರನೇ ಸ್ಥಾನದಲ್ಲಿ ಮಂಗಳೂರಲ್ಲಿ ಅತೀ ಹೆಚ್ಚಿನ ವಹಿವಾಟು ನಡೆದಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ತಿಳಿಸಿದೆ. ಕಳೆದ ವರ್ಷ ರಾಜ್ಯದಲ್ಲಿ ₹2050 ಕೋಟಿ ಮೌಲ್ಯದ ಚಿನ್ನದ ಖರೀದಿಯಾಗಿತ್ತು.
ಅಕ್ಷಯ ತೃತೀಯಾ ದಿನ ಚಿನ್ನ 1 ಗ್ರಾಂ 24 ಕ್ಯಾರೆಟ್ಗೆ ₹9650 ಹಾಗೂ 22ಕ್ಯಾರೆಟ್ಗೆ ₹9100 ಬೆಲೆಯಿತ್ತು. ಬೆಳ್ಳಿ ಕೆ.ಜಿ.ಗೆ ₹99100 ದರವಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಚಿನ್ನಾಭರಣದ ದರ ಕಡಿಮೆಯಾಗಿತ್ತು. ಹಬ್ಬದ ದಿನ ಚಿನ್ನ ಖರೀದಿಸಿದರೆ ಅಕ್ಷಯವಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ದರ ಏರಿಕೆ ಲೆಕ್ಕಿಸದೆ ಗ್ರಾಹಕರು ಆಭರಣ, ಚಿನ್ನದ ನಾಣ್ಯ ಖರೀದಿ ಮಾಡಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಬೆಲೆ ಕೊಂಚ ಇಳಿದಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ನಿರೀಕ್ಷೆ ಹಿನ್ನೆಯಲ್ಲಿ ಹೂಡಿಕೆ ದೃಷ್ಟಿಯಿಂದಲೂ ಆಭರಣವನ್ನು ಜನತೆ ಕೊಂಡುಕೊಂಡಿದ್ದಾರೆ ಎಂದು ವರ್ತಕರು ಹೇಳಿದರು.ವರ್ತಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ಮಾತನಾಡಿ, ‘ಬಸವ ಜಯಂತಿ ಹಿನ್ನೆಲೆಯಲ್ಲಿ ಬಸವಣ್ಣನ ಚಿತ್ರವಿರುವ ಚಿನ್ನದ ನಾಣ್ಯಗಳಿಗೂ ಬೇಡಿಕೆಯಿತ್ತು. ಲಕ್ಷ್ಮೀ, ಶ್ರೀರಾಮ, ಶಂಕರ ಭಗವತ್ಪಾದರ ಕಾಯಿನ್ಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಜೊತೆಗೆ ತಮಿಳುನಾಡಿನ ಮೂಲದವರು ಕರುಂಗಲೆ ಮಾಲೆಯನ್ನು ಚಿನ್ನದಲ್ಲಿ ಸುತ್ತಿಸಿಕೊಂಡಿದ್ದು, ಅದನ್ನು ಸಾಕಷ್ಟು ಗ್ರಾಹಕರು ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.