ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮಾಗಡಿ - ಜಾಲ್ಸೂರು ರಾಜ್ಯ ಹೆದ್ದಾರಿ 85 ರ ಸೋಮವಾರಪೇಟೆಯ ಆಲೆಕಟ್ಟೆ - ತೋಳೂರುಶೆಟ್ಟಳ್ಳಿ - ಕೂತಿ ಮಾರ್ಗದ ಸುಮಾರು 20 ಕೋಟಿ ರು. ವೆಚ್ಚದ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕೆಲಸ ನಡೆಯುತ್ತಿದ್ದು ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಕೂತಿ ಗ್ರಾಮಸ್ಥರು ಮಂಗಳವಾರ ಕೆಲಸವನ್ನು ಸ್ಥಗಿತಗೊಳಿಸಲು ಮುಂದಾದರು.ಸೋಮವಾರಪೇಟೆ -ಕೂತಿ ಮಾರ್ಗದ ಅಲೆಕಟ್ಟೆ - ಹರಪಳ್ಳಿ ವರೆಗೆ 8 ಕಿ ಮೀ ರಸ್ತೆಯನ್ನು ಜನವರಿ ತಿಂಗಳಿನಲ್ಲಿ ಮ್ಯಾಪಿಂಗ್ ಮಾಡಲಾಗಿದ್ದು ಆದರೆ 2.3 ಕಿ ಮೀ ರಸ್ತೆಯಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ಗುತ್ತಿಗೆದಾರ ಯೋಜನಾ ವರದಿಯಂತೆ ಕೆಲಸ ನಿರ್ವಹಿಸದೆ ತಮ್ಮ ಇಷ್ಟದಂತೆ ಕೆಲಸ ಮಾಡುತ್ತಿದ್ದು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದೆ, ತಕ್ಷಣದಿಂದಲೆ ನಿಲ್ಲಿಸಿ ಯೋಜನಾ ವರದಿಯಂತೆ ಕಾಮಗಾರಿ ಮಾಡಬೇಕು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಬೇಕು ಇಲ್ಲವಾದಲ್ಲಿ ಸೋಮವಾರದಂದು ಸೋಮವಾರಪೇಟೆ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೂತಿ ಗ್ರಾಮಸ್ತರು ಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್, ಕೂತಿ ಗ್ರಾಮಾಧ್ಯಕ್ಷ ಹೆಚ್.ಎಂ. ಜಯರಾಮ್, ಉಪಾಧ್ಯಕ್ಷ ಕೆ.ಡಿ.ಗಿರೀಶ್, ಕಾರ್ಯದರ್ಶಿ ಯಾದವ್ ಕುಮಾರ್, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಪ್ರಮುಖರಾದ ದಿವಾಕರ್, ಜಿತೇಂದ್ರ, ಭರತ್, ವಿನೋದ್, ಸೇರಿದಂತೆ ಕೂತಿ ಗ್ರಾಮಸ್ಥರು ಇದ್ದರು.