ಎಲ್ಲ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲಿ: ತಹಸೀಲ್ದಾರ್

| Published : Jul 02 2025, 11:50 PM IST

ಸಾರಾಂಶ

ಸಮಾಜದಲ್ಲಿನ ಎಲ್ಲ ಮಕ್ಕಳು ಸಂವಿಧಾನದ ಆಶಯದಂತೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು.

ಅಖಿಲ ಭಾರತ ಮಟ್ಟದ ಮಕ್ಕಳು ಮತ್ತು ಹದಿಹರೆಯದವರ ರಕ್ಷಣಾ ಮತ್ತು ಪುನರ್ವಸತಿ ಅಭಿಯಾನ 3.0ರ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಕಂಪ್ಲಿ

ಸಮಾಜದಲ್ಲಿನ ಎಲ್ಲ ಮಕ್ಕಳು ಸಂವಿಧಾನದ ಆಶಯದಂತೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಪಾಲಕರು ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೆ ಕೆಲಸಕ್ಕೆ ದೂಡುವುದು ಸರಿಯಲ್ಲ. ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಜೂಗಲ ಮಂಜುನಾಥ್ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ಆಯೋಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ ಮಟ್ಟದ ಮಕ್ಕಳು ಮತ್ತು ಹದಿಹರೆಯದವರ ರಕ್ಷಣಾ ಮತ್ತು ಪುನರ್ವಸತಿ ಅಭಿಯಾನ 3.0ರ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳು ಕೈಗಾರಿಕೆ, ಗ್ಯಾರೇಜ್, ಹೋಟೆಲ್, ಗಣಿಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ಕೆಲಸ ಮಾಡುವುದು ಕಾನೂನು ಬಾಹಿರವಾಗಿದ್ದು, ಅಧಿಕಾರಿಗಳು ಅಂತಹ ಮಕ್ಕಳನ್ನು ರಕ್ಷಣೆ ಮಾಡಿ ಶಾಲೆಗಳಿಗೆ ದಾಖಲಿಸಿ ಉತ್ತಮ ಶಿಕ್ಷಣ ಪಡೆಯಲು ಅವಕಾಶ ನೀಡಬೇಕು ಎಂದರು.

ನಂತರ ಅಧಿಕಾರಿಗಳ ತಂಡ ಪಟ್ಟಣದ ನಾನಾ ಉದ್ದಿಮೆಗಳಿಗೆ ದಿಢೀರ್ ಬೇಟಿ ನೀಡಿ ಒಬ್ಬ ಬಾಲ ಕಾರ್ಮಿಕನನ್ನು ರಕ್ಷಿಸಿ, ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಬಾಲ, ಕಿಶೋರ ಕಾರ್ಮಿಕ ನಿರ್ಮೂಲನೆ ಕುರಿತು ಭಿತ್ತಿಪತ್ರ, ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ತಹಸೀಲ್ದಾರ್ ಜೂಗಲ ಮಂಜುನಾಯಕ, ತಾಪಂ ಇಒ ಆರ್.ಕೆ. ಶ್ರೀಕುಮಾರ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ್, ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಇಸಿಒ ಎಂ.ರೇವಣ್ಣ, ಟಿ.ಎಂ. ಬಸವರಾಜ್, ನಿಲಯಪಾಲಕ ಕೆ.ವಿರುಪಾಕ್ಷಿ, ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಪೊಲೀಸ್ ಪ್ರಭಾಕರ, ರೀಚ್ ಸಂಸ್ಥೆಯ ಸಿಬ್ಬಂದಿ ಲಕ್ಷ್ಮಿ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರವಿಕುಮಾರ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಅರುಣ್ ಇತರರಿದ್ದರು.