ನಡೆದಂತೆ ನುಡಿದ ಬಸವಾದಿ ಶರಣರ ಮೌಲಿಕ ಮಾತುಗಳೆ ವಚನಗಳಾದವು

ಕನ್ನಡಪ್ರಭ ವಾರ್ತೆ ಮೈಸೂರುಗಟ್ಟಿವಾಳಯ್ಯನ ಮುಗ್ಧತೆ ಉಪಮಾತೀತವಾದದ್ದು, ಅಕ್ಕಮಹಾದೇವಿಯ ಅನುಭಾವದೆತ್ತರ ಅನುಭಾವಿಗಳಲ್ಲದವರಿಗೆ ನಿಲುಕದ್ದು, ಅಲ್ಲಮಪ್ರಭುವಿನ ಅರಿವಿನ ಎತ್ತರ ಸಾಮಾನ್ಯರಿಗೆ ಎಟಕದ್ದು ಎಂದು ಸಾಹಿತಿ ಪ್ರೊ. ಮೊರಬದ ಮಲ್ಲಿಕಾರ್ಜುನ ಹೇಳಿದರು.ನಗರದ ಮರಿಮಲ್ಲಪ್ಪ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕವು ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ ಕುರಿತು ಮಾತನಾಡಿದ ಅವರು, ಒಟ್ಟಾರೆಯಾಗಿ ಬಸವಾದಿ ಪ್ರಮಥರು ಕಟ್ಟ ಬಯಸಿದ್ದು ಸರ್ವರಿಗೂ ಒಳಿತುಂಟು ಮಾಡಬಹುದಾದ ಕಲ್ಯಾಣ ನಾಡನ್ನು, ಅವರ ವಚನಗಳು ಬರಿ ಮಾತಲ್ಲ, ದೇವರ ಸಾಕ್ಷಿಯಾಗಿ, ದೇವರನ್ನೇ ಅಂಕಿತವಾಗಿಟ್ಟುಕೊಂಡ, ಲಿಂಗವೇ ಮೆಚ್ಚಿ ಅಹುದಹುದೆನ್ನಬಹುದಾದಂಥ ಆತ್ಮಸಾಕ್ಷಿಯೊಪ್ಪಿತ ಮಾತುಗಳು. ನಡೆದಂತೆ ನುಡಿದ ಬಸವಾದಿ ಶರಣರ ಮೌಲಿಕ ಮಾತುಗಳೆ ವಚನಗಳಾದವು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ನಗರಾಧ್ಯಕ್ಷ, ಕವಿ ಜಯಪ್ಪ ಹೊನ್ನಾಳಿ ಮಾತನಾಡಿ, ಶರಣರ ವಚನಸಾರವೇ ನುಡಿಗಡಣ, ಅದು ದಯೆ, ಕಾಯಕ, ಸಮಾನತೆ, ಅರಿವು, ಆಚಾರ, ಅನುಭಾವ ಹಾಗೂ ಸಕಲ ಜೀವಿಗಳಿಗೆ ಲೇಸು ಬಯಸುವ ತತ್ವವನ್ನೊಳಗೊಂಡಿದೆ. ಈ ಶರಣರ ನುಡಿಗಡಣದಲ್ಲಿ ಕಾಯಕವೇ ಕೈಲಾಸ, ದಾಸೋಹವೇ ಸಾಮರಸ್ಯ, ಸಾಮಾಜಿಕ ನ್ಯಾಯವೇ ಸಮಾನತೆ, ದಯೆಯೆ ಧರ್ಮ, ಕ್ರಿಯೆಯೆ ಕರ್ಮ, ಅಸಹಾಯಕರಲ್ಲಿ ಅನುಕಂಪೆ, ಕಷ್ಟದಲ್ಲಿರುವವರಿಗೆ ಕಾರುಣ್ಯ ಮುಂತಾದ ಮಾನವೀಯವಾದ ತತ್ವಗಳೆ ತುಂಬಿಕೊಂಡಿವೆ ಎಂದರು.ಪ್ರತಿಭಾವಂತ ವಿದ್ಯಾರ್ಥಿಗಳಿಬ್ಬರಿಗೆ ತಲಾ 1 ಸಾವಿರ ರೂ. ನೀಡಿ ಗೌರವಿಸಲಾಯಿತು.ಪ್ರಾಂಶುಪಾಲ ಡಾ.ಎಸ್.ಕೆ. ಅನಿಲ್, ಕಾಲೇಜು ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ, ಕನ್ನಡ ಉಪನ್ಯಾಸಕ ಬಿ.ಪಿ. ಕಿರಣ್ ಕುಮಾರ್, ದತ್ತಿ ದಾನಿಗಳಾದ ಆರ್.ಎಸ್. ಪೂರ್ಣಾನಂದ, ಎಸ್.ಎನ್. ಸುಮನಾ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್, ಕಾರ್ಯದರ್ಶಿ ಬಿ.ಎನ್. ನಂದೀಶ್ವರ, ಖಜಾಂಚಿ ಮುದ್ದುಮಲ್ಲೇಶ್, ಸಂಚಾಲಕ ಎಚ್.ಎನ್. ಲೋಕೇಶಪ್ಪ, ಸದಸ್ಯರಾದ ಜಗದೀಶ್ ಬಿ. ಚಿಕ್ಕಮಠ, ಬಿ.ಡಿ.ಎಂ. ಕುಮಾರ್, ವೀಣಾ ನಂದೀಶ್, ಗೀತಾ, ಮಲ್ಲಿಕಾ ಮಹದೇವಸ್ವಾಮಿ, ಪ್ರಭುಸ್ವಾಮಿ ಮೊದಲಾದವರು ಇದ್ದರು.