ಶಿವನ ಆರಾಧನೆಯ ಶಿವರಾತ್ರಿ ಹಬ್ಬದ ಆಚರಣೆಗಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ನಗರದ ವಿವಿಧ ಶಿವನ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಾಗೂ ಜಾಗರಣೆಗೆ ಸಕಲ ಏರ್ಪಾಡು ಮಾಡಲಾಗಿದೆ.
ರಾಣಿಬೆನ್ನೂರು: ಶಿವನ ಆರಾಧನೆಯ ಶಿವರಾತ್ರಿ ಹಬ್ಬದ ಆಚರಣೆಗಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ನಗರದ ವಿವಿಧ ಶಿವನ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಾಗೂ ಜಾಗರಣೆಗೆ ಸಕಲ ಏರ್ಪಾಡು ಮಾಡಲಾಗಿದೆ. ಎಲ್ಲೆಲ್ಲಿ ಪೂಜೆ: ಸಿದ್ಧಲಿಂಗೇಶ್ವರ ನಗರದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ, ಮಾರ್ಕಂಡೇಶ್ವರ, ದೊಡ್ಡಪೇಟೆ ರಾಮಲಿಂಗೇಶ್ವರ, ಬಸವೇಶ್ವರ, ಮೇಡ್ಲೇರಿ ರಸ್ತೆಯ ಈಶ್ವರ, ಈಶ್ವರ ನಗರದ ಶ್ರೀ ಈಶ್ವರ, ಎರೆಕುಪ್ಪಿ ರಸ್ತೆಯ ನೀಲಕಂಠೇಶ್ವರ, ಗೌರಿಶಂಕರ ನಗರದ ಶ್ರೀ ಗೌರಿ ಶಂಕರ, ಕೆಇಬಿ ವಿನಾಯಕ ದೇವಸ್ಥಾನ ಹಾಗೂ ತಾಲೂಕಿನ ಲಿಂಗದಹಳ್ಳಿಯ ಸ್ಫಟಿಕ ಲಿಂಗ ದೇವಸ್ಥಾನ ಮುಂತಾದ ಕಡೆಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಣ್ಣುಗಳ ಖರೀದಿಗೆ ಮುಗಿಬಿದ್ದ ಜನತೆ: ಶಿವರಾತ್ರಿ ದಿನ ಉಪವಾಸ ವ್ರತ ಕೈಗೊಳ್ಳುವುದರಿಂದ ಶನಿವಾರ ನಗರದಲ್ಲಿ ಜನರು ವಿವಿಧ ಬಗೆಯ ಹಣ್ಣುಗಳನ್ನು ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು. ಖರ್ಜೂರ 190ರಿಂದ 240 ರು. ಕೆ.ಜಿ., ಪುಟಬಾಳೆ 50ರಿಂದ 60 ರು.ಡಜನ್, ದ್ರಾಕ್ಷಿ 90ರಿಂದ 120 ರು. ಕೆ.ಜಿ., ವನಸ್ಪತಿ ಹಣ್ಣುಗಳು 60 ರು.. ಕೆಜಿ, ಕಲ್ಲಂಗಡಿ 30-40 ರು. ಕೆಜಿ, ಚಿಕ್ಕು 55-65 ರು. ಕೆಜಿ, ದಾಳಿಂಬ್ರಿ 210 ರು.ಕೆಜಿ, ಕಿತ್ತಳೆ 50-70 ರು.ಕೆ.ಜಿ., ಸೇಬು 170ರಿಂದ 185 ರು. ಕೆಜಿ ದರದಂತೆ ಮಾರಾಟವಾದವು. ಹೂವುಗಳು: ಒಂದು ಮಾರು ಮಲ್ಲಿಗೆ, ಕನಂಕಾಬರಿ, ಸೇವಂತಿಗೆ ಹೂವಿಗೆ 50-80 ರು., ಹೂವಿನ ಮಾಲೆಗಳು 30ರು.ದಿಂದ 40ರು.ವರೆಗೆ ಮಾರಾಟವಾದವು.