ತಾಲೂಕಿನ ಮಾಯಸಂದ್ರ ಹೋಬಳಿ ಕಣಕೂರು ಗ್ರಾಮದಲ್ಲಿ ಫೆ. 6 ರಂದು ನಡೆಯಲಿರುವ ತಿರುಪತಿ–ತಿರುಮಲ ಯಿಂದಲೇ ಆಗಮಿಸಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಶ್ರೀ ಬಾಲಾಜಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಾಜಿ ತಿಳಿಸಿದ್ದಾರೆ.
ಕನ್ನಡಪ್ರಭವಾರ್ತೆ, ತುರುವೇಕೆರೆ
ತಾಲೂಕಿನ ಮಾಯಸಂದ್ರ ಹೋಬಳಿ ಕಣಕೂರು ಗ್ರಾಮದಲ್ಲಿ ಫೆ. 6 ರಂದು ನಡೆಯಲಿರುವ ತಿರುಪತಿ–ತಿರುಮಲ ಯಿಂದಲೇ ಆಗಮಿಸಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಶ್ರೀ ಬಾಲಾಜಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಾಜಿ ತಿಳಿಸಿದ್ದಾರೆ. ಕಣಕೂರಿನ ದೇವಾಲಯದ ಬಳಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಣಕೂರಿನಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಇಲ್ಲಿಯ ದೇವಾಲಯವು ಶಿಥಿಲವಾಗಿದ್ದರಿಂದ ಗ್ರಾಮಸ್ಥರು ಮತ್ತು ಭಕ್ತಾದಿಗಳ ಸಹಕಾರದಿಂದ ಸುಮಾರು ಒಂದು ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಉದ್ಘಾಟನೆ ಸಲುವಾಗಿ ಇದೇ ಪ್ರಪ್ರಥಮ ಬಾರಿಗೆ ತುರುವೇಕೆರೆ ತಾಲೂಕಿಗೆ ತಿರುಪತಿ–ತಿರುಮಲ (ಟಿಟಿಡಿ) ಯಿಂದಲೇ ಲಕ್ಷ್ಮೀ ವೆಂಕಟೇಶ್ವರಸ್ವಾಮಿಯವರ ಉತ್ಸವ ಮೂರ್ತಿಯನ್ನು ಕರೆಸಿ ಲಕ್ಷಾಂತರ ಭಕ್ತರ ಸಮ್ಮುಖ ಕಲ್ಯಾಣೋತ್ಸವವನ್ನು ಫೆ.6ರ ಸಾಯಂಕಾಲ 5 ಗಂಟೆಯಿಂದ ನೆರವೇರಿಸಲಾಗುವುದು. ಇದೇ ಪ್ರಥಮ ಬಾರಿಗೆ ಅದ್ದೂರಿಯಾಗಿ ನಡೆಯುತ್ತಿರುವುದರಿಂದ ತಾಲೂಕಿನಾದ್ಯಂತ ಭಕ್ತರು ಆಗಮಿಸುವರು. ಎಲ್ಲಾ ಭಕ್ತರಿಗೂ ತಿರುಪತಿಯಲ್ಲಿ ತಯಾರಿಸುವ ಲಾಡು ಪ್ರಸಾದವನ್ನು ವಿತರಿಸಲಾಗುವುದು. ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಬಸ್ ವ್ಯವಸ್ಥೆ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದ್ದು, ಐವತ್ತಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಕುಡಿಯುವ ನೀರು, ಉಪಹಾರ ಸೇರಿದಂತೆ ವಿವಿಧ ಎಲ್ಲಾ ಪ್ರಾಕಾರಗಳಲ್ಲೂ ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕಣಕೂರು ಚಂದ್ರಶೇಖರ್, ಮುದ್ದಣ್ಣ, ಶ್ರೀನಿವಾಸ್, ಗುಡಿಗೌಡರು ಸೇರಿದಂತೆ ಗ್ರಾಮದ ಯುವಕರು ಉಪಸ್ಥಿತರಿದ್ದರು.