ಜಿಲ್ಲೆಯ ಎಲ್ಲ ತಾಂಡಾಗಳು ಇನ್ಮುಂದೆ ಕಂದಾಯ ಗ್ರಾಮ: ಶಾಸಕ ಜೆ.ಟಿ.ಪಾಟೀಲ್

| Published : Jun 12 2025, 01:00 AM IST

ಜಿಲ್ಲೆಯ ಎಲ್ಲ ತಾಂಡಾಗಳು ಇನ್ಮುಂದೆ ಕಂದಾಯ ಗ್ರಾಮ: ಶಾಸಕ ಜೆ.ಟಿ.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಗದ್ದನಕೇರಿ ತಾಂಡಾದ ದುರ್ಗಾದೇವಿ ಮಂದಿರದ ಸಭಾಭವನದಲ್ಲಿ ಬುಧವಾರ ಬಾಗಲಕೋಟೆ ತಾಲೂಕು ಆಡಳಿತ, ತಾಪಂ ಮತ್ತು ಗ್ರಾಮ ಪಂಚಾಯತಿ ಗದ್ದನಕೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ತಾಂಡಾ ಅಭಿವೃದ್ಧಿಗಾಗಿ ಎರಡು ಎಕರೆ ಜಮೀನು, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಮಾಸಾಶನ, ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಲ್ಯಾಪ್ ಟಾಪ್‌ ವಿತರಣೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಕಲಾದಗಿ

ಜಿಲ್ಲೆಯ ಎಲ್ಲಾ ತಾಂಡಾಗಳು ಇನ್ನು ಮುಂದೆ ಕಂದಾಯ ಗ್ರಾಮಗಳಾಗಲಿವೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಹೇಳಿದರು.

ಗದ್ದನಕೇರಿ ತಾಂಡಾದ ದುರ್ಗಾದೇವಿ ಮಂದಿರದ ಸಭಾಭವನದಲ್ಲಿ ಬುಧವಾರ ಬಾಗಲಕೋಟೆ ತಾಲೂಕು ಆಡಳಿತ, ತಾಪಂ ಮತ್ತು ಗ್ರಾಮ ಪಂಚಾಯತಿ ಗದ್ದನಕೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ತಾಂಡಾ ಅಭಿವೃದ್ಧಿಗಾಗಿ ಎರಡು ಎಕರೆ ಜಮೀನು, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಮಾಸಾಶನ, ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇನ್ನು ಮುಂದೆ ಪ್ರತಿ ಗ್ರಾಮಗಳಿಗೆ ಹಾಗೂ ಪಟ್ಟಣ ಪ್ರದೇಶಗಳಿಗೆ ದೊರಕಬಹುದಾದ ಎಲ್ಲ ಸೌಲಭ್ಯಗಳು ತಾಂಡಾಗಳಿಗೆ ದೊರೆಯಲಿವೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳ ಜಮೀನು ಪೋಡಿ ಮುಕ್ತಾಯವಾಗಲಿದ್ದು, ಒತ್ತುವರಿ ಆಕ್ರಮಿಸಿಕೊಳ್ಳುವ ಯಾವ ಕಾರ್ಯಗಳು ನಡೆಯುವುದಿಲ್ಲ ಎಂದು ಹೇಳಿದರು.

ಅಧಿಕಾರಿಗಳು ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ಬಂದಾಗ, ವಿಳಂಬ ಮಾಡದೇ ಗೌರವದಿಂದ ಅವರ ಕೆಲಸ ಮಾಡಿಕೊಡಬೇಕು. ಹಿಂದಿನಂತೆ ಇಂದು ತಾಂಡಾಗಳು ಇಲ್ಲ, ಪ್ರತಿಯೊಬ್ಬರೂ ಸುಧಾರಣೆಗೊಳ್ಳುತ್ತಿದ್ದಾರೆ. ಕೇವಲ ಮನೆ, ವಾಹನಗಳಿಂದ ಸುಧಾರಿಸದೇ ಪ್ರತಿಯೊಬ್ಬ ತಂದೆ ತಾಯಿಯರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಇಂದು ನಿಮ್ಮ ಗ್ರಾಮದ ಯಶವಂತ ರಾಥೋಡ ಇಲ್ಲಿಯ ಗ್ರಂಥಾಲಯ ಅಭಿವೃದ್ಧಿಗಾಗಿ ಒಂದು ಲಕ್ಷ ಹಣ ನೀಡಿದ್ದಾರೆ, ಇದರಿಂದ ಇನ್ನು ಮುಂದೆ ನಿಮ್ಮ ತಾಂಡಾ ಸುಧಾರಿಸಲಿದೆ ಎಂದು ಅಭಿಪ್ರಾಯಪಟ್ಟರು.

ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ್ ಪ್ರಸ್ತಾವಿಕ ಮಾತನಾಡಿ ಗದ್ದನಕೇರಿ ತಾಂಡಾದ ಒಟ್ಟು 478 ಫಲಾನುಭವಿಗಳು ಹಕ್ಕುಪತ್ರ ಪಡೆದಿದ್ದಾರೆ. ಸರ್ವೆ ಪೂರೈಸಿದ ಫಲಾನುಭವಿಗಳು 448, ಜಿ.ಪಿ.ಎಸ್.ಪೂರೈಸಿದ ಫಲಾನುಭವಿಗಳು 448 ಇದ್ದು, ಸರಕಾರಕ್ಕೆ ಶುಲ್ಕ ಪಾವತಿ ಮಾಡಿದ 360 ಜನರಿದ್ದು, ಸದ್ಯ ಹಕ್ಕುಪತ್ರ ಪಡೆದುಕೊಳ್ಳುತ್ತಿರುವವರ ಸಂಖ್ಯೆ 185 ಇದೆ. ಬಾಕಿ ಇರುವ ಮತ್ತು ಇನ್ನೂ ಸರ್ವೇ ಮಾಡದ ಫಲಾನುಭವಿಗಳು 30 ಜನರಿದ್ದಾರೆ ಎಂದರು.

ಕಲಾದಗಿ ಹೋಬಳಿ ವ್ಯಾಪ್ತಿಯ ಖಜ್ಜಿಡೋಣಿ, ಶಾರದಾಳ, ತುಳಸೀಗೇರಿ, ಗೋವಿಂದಕೊಪ್ಪ, ಯಡಹಳ್ಳಿ, ಛಬ್ಬಿ, ಸಿಂದಗಿ, ಸೋರಕೊಪ್ಪ, ಹೊನ್ನರಹಳ್ಳಿ, ಗದ್ದನಕೇರಿ ಗ್ರಾಮಗಳ ಜನರಿಗೆ ಪಾವತಿ ಖಾತಾ ಮಾಡಿದ ಪಹಣಿಗಳನ್ನು ವಿತರಿಸಲಾಗಿದೆ ಎಂದರು.

ಬಾಗಲಕೋಟ ತಹಸೀಲ್ದಾರ್ ಅಮರೇಶ ಪಮ್ಮಾರ ಸ್ವಾಗತಿಸಿದರು. ಗ್ರೇಡ್-2 ತಹಸೀಲ್ದಾರ್ ಮಲ್ಲನಗೌಡ ಬಿರಾದಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಗದ್ದನಕೇರಿ ಗ್ರಾ.ಪಂ. ಅಧ್ಯಕ್ಷ ವೆಂಕಟೇಶ ಹಿರೇಮಠ, ಉಪಾಧ್ಯಕ್ಷೆ ಜಯಶ್ರೀ ದೊಡಮನಿ, ತಾ.ಪಂ. ಇ.ಓ. ಸುಭಾಸ ಸಂಪಗಾವಿ ಶಿವು ರಾಠೊಡ, ಸಿದ್ದಣ್ಣ ಛಬ್ಬಿ, ಜಿ.ಪಂ.ಮಾಜಿ ಸದಸ್ಯ ಪಾಂಡು ಪೋಲಿಸ್, ವಿಠ್ಠಲ್ ಲಮಾಣಿ, ಮಾನಪ್ಪ ಲಮಾಣಿ, ಬಿ.ಟಿ.ಡಿ.ಎ. ಸಹಾಯಕ ಅಭಿಯಂತರ ಸೋಮಲಿಂಗಪ್ಪ ನೋಟಗಾರ್, ಚಂದ್ರು ಕುರಿ, ಸಿದ್ದಣ್ಣ ಜಕ್ಕನಗೌಡರ್ ಸೇರಿದಂತೆ ಇತರರು ಇದ್ದರು.