ತೀವ್ರ ಬರದ ಸಂಕಷ್ಟದಲ್ಲಿ ಸಿಲುಕಿರುವ ರೈತರು ಸಹಕಾರ ಸಂಘಗಳಲ್ಲಿ ಪಡೆದುಕೊಂಡಿರುವ ಎಲ್ಲಾ ರೀತಿ ಸಾಲ ಹಾಗೂ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಚಾಮರಾಜನಗರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಎಚ್.ಎಂ.ಬಸವಣ್ಣ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತೀವ್ರ ಬರದ ಸಂಕಷ್ಟದಲ್ಲಿ ಸಿಲುಕಿರುವ ರೈತರು ಸಹಕಾರ ಸಂಘಗಳಲ್ಲಿ ಪಡೆದುಕೊಂಡಿರುವ ಎಲ್ಲಾ ರೀತಿ ಸಾಲ ಹಾಗೂ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಚಾಮರಾಜನಗರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಎಚ್.ಎಂ.ಬಸವಣ್ಣ ಒತ್ತಾಯಿಸಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆದ ಪಿಎಲ್‌ಡಿ ಬ್ಯಾಂಕ್‌ನ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಭೆ ಆರಂಭವಾಗುತ್ತಿದ್ದಂತೆ ರೈತರು ಸಾಲ ನವೀಕರಣ ಮತ್ತು ಹೊಸ ಸದಸ್ಯರಿಗೆ ಸಾಲ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಈಗಾಗಲೇ ಸಾಲ ಮರು ಪಾವತಿ ಮಾಡಿರುವ ರೈತರಿಗೂ ಸಹ ಸಾಲ ನವೀಕರಣ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್ ನಬಾರ್ಡ್‌ನಿಂದ ಶೇ. ೮ರ ಬಡ್ಡಿ ದರದಲ್ಲಿ ಸಾಲ ಪಡೆದು, ರೈತರಿಗೆ ಶೇ. ೩ ರ ಬಡ್ಡಿ ದರದಲ್ಲಿ ಸಾಲ ನೀಡುತ್ತಾ ಬಂದಿದೆ. ಕಳೆದ ಮೂರ್‍ನಾಲ್ಕು ವರ್ಷದಿಂದ ಸಾಲ ಪಡೆದುಕೊಂಡ ಬಹುತೇಕ ರೈತರು ಮರು ಪಾವತಿ ಮಾಡುತ್ತಿಲ್ಲ. ಜೊತೆಗೆ ಸುಸ್ತಿದಾರರಾಗಿದ್ದಾರೆ. ಇದರಿಂದ ಬ್ಯಾಂಕ್ ನಡೆಸುವುದು ಕಷ್ಟವಾಗಿದೆ. ಜೊತೆಗೆ ರೈತರು ಸಾಲ ಮರು ಪಾವತಿ ಮಾಡಿದರಷ್ಟೇ ಸಾಲವನ್ನು ನೀಡಲು ಸಾಧ್ಯವಿದೆ. ಹೀಗಾಗಿ ರೈತರು ಸಕಾಲದಲ್ಲಿ ಮರು ಪಾವತಿ ಮಾಡಬೇಕು ಎಂದು ಮನವಿ ಮಾಡಿದರು.

ಜೊತೆಗೆ ಈಗಾಗಲೇ ರಾಜ್ಯ ಸರ್ಕಾರ ಚಾ.ನಗರ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಇದರನ್ವಯ ಬೆಳೆ ಸಾಲ ಹಾಗೂ ಅಲ್ಪವಧಿ ಸಾಲಗಳನ್ನು ಮಾತ್ರ ಮನ್ನಾ ಮಾಡದೇ ಪಿಎಲ್‌ಡಿ ಬ್ಯಾಂಕ್‌ನಲ್ಲಿ ರೈತರು ಪಡೆದು ಕೊಂಡಿರುವ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿ, ಒಕ್ಕೂರಲಿನಿಂದ ಅನುಮತಿ ಪಡೆದುಕೊಂಡರು.

ಈ ಹಿಂದೆ ರಾಜ್ಯ ಸರ್ಕಾರ ಬಡ್ಡಿ ಮನ್ನಾ ಮಾಡಿ, ಅಸಲು ಪಾವತಿ ಮಾಡಿ ಎಂದು ಹೇಳಿತ್ತು. ಬಹಳಷ್ಟು ರೈತರು ಮರುಪಾವತಿ ಮಾಡಲು ಕಷ್ಟಸಾಧ್ಯವಾಗಿದೆ. ರೈತರು ಆರ್ಥಿಕ ಪ್ರಗತಿ ಹೊಂದಲು ಸಹಕಾರ ಸಂಘಗಳ ಪಾತ್ರ ಹೆಚ್ಚಿನದಾಗಿದ್ದು, ಪ್ರತಿಯೊಬ್ಬರು ಬ್ಯಾಂಕಿನಿಂದ ದೊರೆಯುವ ಎಲ್ಲಾ ರೀತಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಬಸವಣ್ಣ ಮನವಿ ಮಾಡಿದರು.

ಸಂಘದ ಪ್ರಭಾರ ವ್ಯವಸ್ಥಾಪಕ ಎಂ.ಎಸ್.ಸತೀಶ್ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ನಿಂಗೇಗೌಡ, ನಿರ್ದೇಶಕರಾದ ಬಿ. ಮಹದೇವಪ್ಪ, ಮಹದೇವನಾಯಕ, ಎಂ.ಎಲ್. ರೇವಣ್ಣ, ನಂದೀಶ್, ಬಸುಮರಿ, ಬಿ.ಎಸ್. ಶಂಕರಮೂರ್ತಿ, ಬಿಸಲವಾಡಿ ರವಿ, ಪಿ. ಶ್ರೀಕಂಠಪ್ರಸಾದ್, ಜಿ. ಪ್ರವೀಣನಾಯಕ್, ಜ್ಯೋತಿ, ಮಾದಲಾಂಬಿಕೆ, ನಾಮನಿರ್ದೇಶಕ ಗೋವಿಂದಶೆಟ್ಟಿ, ನೌಕರರಾದ ಯು. ಶಶಿಕಿರಣ್, ಎಚ್.ಎಸ್. ನವೀನ್, ಎನ್. ದಿನಕರ್, ಸದಸ್ಯರು ಭಾಗವಹಿಸಿದ್ದರು.