ಸಾರಾಂಶ
ಗದಗ: ಸಮಾಜದಲ್ಲಿರುವ ಪ್ರತಿಯೊಬ್ಬರೂ ಶಾಂತಿಯ ತೋಟ ಕಟ್ಟುವ ಕೆಲಸಕ್ಕೆ ಮುಂದಾಗಬೇಕು, ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ, ನೆಮ್ಮದಿ ಮೂಡಲು ಸಾಧ್ಯ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಸೋಮವಾರ ಗದಗ ನಗರದ ಹಳೇ ಬಸ್ ನಿಲ್ದಾಣ ಸಮೀಪದಲ್ಲಿರುವ ಉರ್ದು ಶಾಲಾ ಆವರಣದಲ್ಲಿ ಈದ್ ಮಿಲಾದ್ ಕಮೀಟಿಯಿಂದ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಜಯಂತ್ಯುತ್ಸವ ಹಾಗೂ ನೋಟ್ ಬುಕ್ ವಿತರಣೆ, ಮುಸಲ್ಮಾನ ಬಡ ಮಹಿಳೆಯರಿಗೆ ಸೀರೆಗಳು, ಮದರಸಾ ಮಕ್ಕಳಿಗೆ ಬಟ್ಟೆ ವಿತರಣೆ, ರಕ್ತ ತಪಾಸಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪೈಗಂಬರ್ ಮನುಕುಲದ ಪ್ರವಾದಿಯಾಗಿ ಶಾಂತಿಧೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಸುಂದರ ಸಮಾಜ ನಾವು ಕಟ್ಟಬೇಕಾಗಿದೆ. ಮಹಮ್ಮದ್ ಪೈಗಂಬರ್ ಸಿದ್ಧಾಂತ ಕೇವಲ ಆಧ್ಯಾತ್ಮ ಸಿದ್ಧಾಂತವಾಗಿರಲಿಲ್ಲ, ಧಾರ್ಮಿಕ ಆಚಾರ ವಿಚಾರ ಪಸರಿಸುವ ಸಿದ್ಧಾಂತವಾಗಿದ್ದು, ಮಾನವರು ಎದುರಿಸುವ ಎಲ್ಲ ಸಮಸ್ಯೆಗಳಿಗೆ ಅತ್ಯಂತ ಸಮರ್ಪಕವಾಗಿ ಪರಿಹಾರ ನೀಡುವುದು ಅವರ ಸಿದ್ಧಾಂತವಾಗಿದೆ. ಆದರಿಂದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿಕೊಂಡು ಈ ಹಬ್ಬವನ್ನು ಆಚರಣೆ ಮಾಡಬೇಕು ಎಂದರು.
ಕಳೆದ 45 ವರ್ಷಗಳಿಂದ ಇಲ್ಲಿನ ಉರ್ದು ಶಾಲಾ ಆವರಣದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಇಷ್ಟು ವರ್ಷಗಳಲ್ಲಿ ಇದೇ ಸಲ ಸಮುದಾಯ ಭವನ ನಿರ್ಮಾಣ ಮಾಡಲು ನಗರದಲ್ಲಿ ಜಾಗ ನೀಡುವಂತೆ ಈದ್ ಮಿಲಾದ್ ಕಮಿಟಿಯಿಂದ ಮನವಿ ನೀಡಲಾಗಿದೆ. ಸಮಾಜವನ್ನು ಜಾಗೃತಿ ಮಾಡುವ ಕೆಲಸ ಮಾಡಲಾಗುತ್ತದೆ. ಇನ್ನೂ ಮೂರು ತಿಂಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ಐದು ಕಡೆ ಜಾಗ ಗುರುತಿಸಬೇಕು ಅದರಲ್ಲಿ ಒಂದು ಜಾಗ ನೀಡಲಾಗುತ್ತದೆ. ಜನವರಿ ಮೊದಲ ತಿಂಗಳಲ್ಲಿ ನಗರಾಭಿವೃದ್ಧಿ ಪದಾಧಿಕಾರಿದಿಂದ ಜಾಗ ಮಂಜೂರು ಮಾಡಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಈದ್ ಮಿಲಾದ್ ಕಮಿಟಿಯಿಂದ ಮಕ್ಕಳಿಗೆ ಪುಸ್ತಕ ಹಚ್ಚುವ ಕೆಲಸ ಮಾಡುತ್ತಿರುವುದು ಉತ್ತಮವಾಗಿದೆ. ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ವಿತರಣೆ ಮಾಡಬೇಕು. ಮಕ್ಕಳ ಶೈಕ್ಷಣಿಕ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಗ್ಯಾರಂಟಿ ಯೋಜನೆಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಮೌಲಾನ ನಿಜಾಮುದ್ದೀನ್ ಕಾಸ್ತಿ ಮಾತನಾಡಿದರು. ಮಹಮ್ಮದ ಇಸ್ಲಾಕ್ ಪುತ್ತೂರ ಅವರಿಂದ ಪ್ರವಾದಿ ಮಮಹ್ಮದ್ ಪೈಗಂಬರ್ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ಜರುಗಿತು. ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಬಾಷಾಸಾಬ್ ಮಲ್ಲಸಮುದ್ರ, ಬಿ.ಬಿ. ಅಸೂಟಿ, ಸಿದ್ದು ಪಾಟೀಲ, ಸಚಿನ್ ಪಾಟೀಲ ಮುಂತಾದವರು ಹಾಜರಿದ್ದರು.ಬಾಕ್ಸ್
ಗದಗ ನಗರದ ಉರ್ದು ಶಾಲಾ ಆವರಣದಲ್ಲಿ ಈದ್ ಮಿಲಾದ್ ಕಮೀಟಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದರಲ್ಲೂ ಉರ್ದು ಶಾಲೆಯ ಮಕ್ಕಳಿಗೆ 5 ಸಾವಿರ ನೋಟ್ ಬುಕ್ ವಿತರಣೆ, 250 ಮುಸಲ್ಮಾನ ಬಡ ಮಹಿಳೆಯರಿಗೆ ಸೀರೆಗಳು, 150 ಮದರಸಾ ಮಕ್ಕಳಿಗೆ ಬಟ್ಟೆ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಹಾಗೇ ರಕ್ತ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ಕಾರ್ಯಕ್ರಮ ಜರುಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.