ಹಾವೇರಿ: ಗುರುವ ಮುಟ್ಟಿ ಗುರುವಾಗಿ ಸ್ವಯಂ ಜ್ಯೋತಿಯಾದವರು ಅಲ್ಲಮಪ್ರಭುಗಳು ಎಂದು ಹಾವೇರಿ ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಹೇಳಿದರು.ನಗರದ ಬಸವ ಭವನದಲ್ಲಿ ನಡೆದ ಅಲ್ಲಮಪ್ರಭುಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಅಲ್ಲಮಪ್ರಭು ಮತ್ತು ಅನಿಮಿಷ ಯೋಗಿಗಳ ನಡುವೆ ನಡೆದ ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿ ಅಲ್ಲಮರು ಅನೇಕ ಬೆಡಗಿನ ವಚನಗಳ ಮೂಲಕ ಜಗದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದರು ಎಂದರು. ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಮಾತನಾಡಿ, ಅಲ್ಲಮ ಪ್ರಭುಗಳು ಸಿದ್ದರಾಮೇಶ್ವರರೊಂದಿಗೆ ಪ್ರಥಮವಾಗಿ ಬಸವಣ್ಣನವರನ್ನು ಭೇಟಿಯಾದಂತಹ ಸಂದರ್ಭವನ್ನು ವಿವರಿಸಿದರು. ಅಲ್ಲಮರು ಅವರ ವಚನಗಳ ಮೂಲಕ ಸಮಾಜಕ್ಕೆ ಕೊಟ್ಟಿರುವ ಅತ್ಯಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು. ಕಾರ್ಯದರ್ಶಿ ಜಗದೀಶ ಹತ್ತಿಕೋಟಿ ಮಾತನಾಡಿ, ಅಲ್ಲಮಪ್ರಭುಗಳ ಜನನ, ಜೀವನ ಹಾಗೂ ಶೂನ್ಯ ಪೀಠದ ಪ್ರಥಮ ಅಧ್ಯಕ್ಷರಾದಂತಹ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ನಡೆದಂತಹ ಅಕ್ಕಮಹಾದೇವಿಯ ಸಂವಾದದ ಬಗ್ಗೆ ವಚನಗಳ ಮೂಲಕ ವ್ಯಾಖ್ಯಾನಿಸಿದರು.ಬಸವರಾಜ ಕೋರಿ ಅವರು ಅಲ್ಲಮ ಪ್ರಭುಗಳ ಕಾಲಜ್ಞಾನದ ವಚನವನ್ನು ಉಲ್ಲೇಖಿಸಿ ಮಾತನಾಡಿದರು. ಶಿವಯೋಗಿ ಬೆನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪಾವತಿ ಕೆರೂಡಿ ಮಾತಾಡಿದರು. ಕಾರ್ಯಕ್ರಮದಲ್ಲಿ ಮುರಿಗೆಪ್ಪ ಕಡೆಕೊಪ್ಪ, ಶಿವಾನಂದ ಅಂಗಡಿ, ನಾಗೇಂದ್ರಪ್ಪ ಮಂಡಕ್ಕಿ, ಗಂಗಣ್ಣ ಮಾಸೂರ, ಹನಮಂತಪ್ಪ ಮಡಿವಾಳರ, ಶಿವಾನಂದ ಹೊಸಮನಿ, ಶಂಕರಪ್ಪ ಜಾಯಗೊಂಡರ, ಪುಟ್ಟಪ್ಪ ಮಲ್ಕಪ್ಪನವರ ಸೇರಿದಂತೆ ಇತರರು ಇದ್ದರು. ಶಿವಬಸಪ್ಪ ಮುದ್ದಿ ಸ್ವಾಗತಿಸಿದರು. ಉಪಾಧ್ಯಕ್ಷ ಕೊಟ್ರೇಶ ಬಿಜಾಪುರ ನಿರೂಪಿಸಿದರು.