ಉ.ಕ.ಸಮಗ್ರ ಅಭಿವೃದ್ಧಿಗೆ ₹30 ಸಾವಿರ ಕೋಟಿ ಮೀಸಲಿಡಿ: ಶಿವಾನಂದ ಸ್ವಾಮೀಜಿ

| Published : Dec 08 2024, 01:19 AM IST

ಸಾರಾಂಶ

ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹30 ಸಾವಿರ ಕೋಟಿ ಅನುದಾನ ಪ್ರತ್ಯೇಕವಾಗಿ ಮೀಸಲಿಡಬೇಕು ಎಂದು ಆಡಿ ಹಂದಿಗುಂದ ಶಿವಾನಂದ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹30 ಸಾವಿರ ಕೋಟಿ ಅನುದಾನ ಪ್ರತ್ಯೇಕವಾಗಿ ಮೀಸಲಿಡಬೇಕು ಎಂದು ಆಡಿ ಹಂದಿಗುಂದ ಶಿವಾನಂದ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಶನಿವಾರ ನಗರದಲ್ಲಿ ಲಿಂ.ಡಾ.ಶಿವಬಸವ ಮಹಾಸ್ವಾಮಿಗಳ 135ನೆಯ ಜಯಂತಿ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹೆಸರಿಗೆ ಮಾತ್ರ ಸುವರ್ಣ ಸೌಧವಾಯಿತು, ಆದರೆ ಜನರ ಬದುಕು ಮಾತ್ರ ಬಂಗಾರವಾಗಲಿಲ್ಲ. ಹಿಂದಿನಂತೆ ಇಂದಿಗೂ ಉತ್ತರ ಕರ್ನಾಟಕ ಪರವಾದ ಮಲತಾಯಿ ಧೋರಣೆ ಮುಂದುವರಿದಿದೆ. ಇದೇ ರೀತಿ ಮುಂದುವರಿದರೆ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಪುನಃ ಧ್ವನಿ ಬರಲಿದೆ. ಇಂದು ನಡೆದ ಜಾಗೃತಿ ಸಮಾವೇಶ ಆರಂಭ ಮಾತ್ರ. ಇದೇ ರೀತಿ ಮಲತಾಯಿ ಧೋರಣೆ ಮುಂದುವರಿದರೆ ಉತ್ತರ ಕರ್ನಾಟಕ ಹಳ್ಳಿ ಹಳ್ಳಿಗಳಿಂದ ಜನ ಬರಲಿದ್ದಾರೆ ಎಂದ ಅವರು, ಇದಕ್ಕೂ ಮುಂಚೆ ಎಚ್ಚೆತ್ತುಕೊಂಡು ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿಯಲ್ಲಿ ಕಾಟಾಚಾರದ ಅಲ್ಪಾವಧಿಯ ಅಧಿವೇಶನ ಬೇಡ. 30 ದಿನಗಳ ಪೂರ್ಣ ಪ್ರಮಾಣದ ಅಧಿವೇಶನ ನಡೆಸಬೇಕು. ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟ ಎಲ್ಲ ರಾಜ್ಯಮಟ್ಟದ ಇಲಾಖೆಗಳ ಕಚೇರಿಗಳು ಸುವರ್ಣಸೌಧಕ್ಕೆ ಬಂದು ಕಾರ್ಯನಿರ್ವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ಅಧಿವೇಶನದಲ್ಲಿ ಸರ್ಕಾರ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕು. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ರೂಪಿಸಬೇಕು. ಕೇವಲ ಘೋಷಣೆಗಳು ಬೇಡ. ಅವೆಲ್ಲ ಕಾರ್ಯಗತವಾಗಬೇಕು ಎಂದವರು ಆಗ್ರಹಿಸಿದರು.

ಲಿಂಗರಾಜ್ ಕಾಲೇಜು ಮೈದಾನದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಲಿಂ. ಡಾ.ಶಿವಬಸವ ಶ್ರೀಗಳು ಅಂದು ಬಿತ್ತಿದ ಬೀಜ ಇಂದು 15000 ವಿದ್ಯಾರ್ಥಿಗಳನ್ನು ಒಳಗೊಂಡ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ. ಅವರು ತಮಗಾಗಿ ಎಂದಿಗೂ ಏನನ್ನೂ ಮಾಡಿದವರಲ್ಲ. ಅವರು ಮಾಡಿದ್ದೆಲ್ಲ ಸಮಾಜಕ್ಕಾಗಿ. ಅದು ಇಂದಿನ ಮಕ್ಕಳಿಗೂ ತಿಳಿಯಬೇಕು. ಜಾಗೃತಿ ಜಾಥಾದ ಮೂಲಕ ಮಕ್ಕಳಿಗೂ ಅಭಿವೃದ್ಧಿ ಕುರಿತು ಉತ್ತರ ಕರ್ನಾಟಕದ ಕುರಿತ ಪ್ರಜ್ಞೆ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ. ಹಿರೇಮಠ ಮತ್ತು ಶಿಕ್ಷಣ ಸಂಸ್ಥೆಯ ಎಲ್ಲ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಡಾ.ರವಿ ಪಾಟೀಲ, ಕಾರ್ಯದರ್ಶಿ ಅಶೋಕ ಮಳಗಲಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.ಭಾವಚಿತ್ರದ ಮೆರವಣಿಗೆ: ಜಾಥಾದಲ್ಲಿ 5000ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಇತರೆ ಸಿಬ್ಬಂದಿ ಬೆಳಗಾವಿ ಲಿಂಗರಾಜ ಕಾಲೇಜು ಮೈದಾನದಿಂದ ಶಿವಬಸವ ನಗರದಲ್ಲಿರುವ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನವರಿಗೆ ಡಾ.ಶಿವಬಸವ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಹಂದಿಗುಂದದ ಶಿವಾನಂದ ಸ್ವಾಮೀಜಿ, ಶೆಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ, ಕಾರಂಜಿಮಠದ ಡಾ.ಶಿವಯೋಗಿ ದೇವರು, ತೇಲಂಗಾಣದ ವಿರೂಪಾಕ್ಷಿ ದೇವರು ಮತ್ತಿತರರು ಭಾಗವಹಿಸಿದ್ದರು.ವರ್ಷದ ಹತ್ತು ದಿನ ಮಾತ್ರ ಅಧಿವೇಶನ ನಡೆದು ಬೆಳಗಾವಿಯ ಸುವರ್ಣವಿಧಾನಸೌಧ ಭೂತ್ ಬಂಗ್ಲೆಯಂತಾಗಿದೆ. ಕೂಡಲೇ ಸುವರ್ಣಸೌಧದಲ್ಲಿ ರಾಜ್ಯಮಟ್ಟದ ಕಚೇರಿಗಳ ಕಾರ್ಯಾರಂಭಿಸಬೇಕು.

-ಡಾ.ಅಲ್ಲಮಪ್ರಭು ಸ್ವಾಮೀಜಿ ಪೀಠಾಧಿಕಾರಿ ನಾಗನೂರು ರುದ್ರಾಕ್ಷಿ ಮಠದ