ಆ. 15ರೊಳಗೆ ನಿರಾಶ್ರಿತ ಬಡವರಿಗೆ ನಿವೇಶನ ಹಂಚಿಕೆ: ಶಾಸಕ ಬಸವರಾಜ ಶಿವಣ್ಣನವರ ಭರವಸೆ

| Published : Jun 21 2025, 12:49 AM IST

ಆ. 15ರೊಳಗೆ ನಿರಾಶ್ರಿತ ಬಡವರಿಗೆ ನಿವೇಶನ ಹಂಚಿಕೆ: ಶಾಸಕ ಬಸವರಾಜ ಶಿವಣ್ಣನವರ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

10 ವರ್ಷಗಳ ಹಿಂದೆಯೇ 814 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇಂದಿಗೂ ಅವರಿಗೆ ನಿವೇಶನಗಳು ದೊರಕಿಲ್ಲ ಎಂದು ಪುರಸಭಾ ಸದಸ್ಯ ಬಸವರಾಜ ಛತ್ರದ ತಿಳಿಸಿದರು..

ಬ್ಯಾಡಗಿ: ಬರುವ ಆ. 15ರೊಳಗಾಗಿ ನಿರಾಶ್ರಿತ ಬಡವರಿಗೆ ನಿವೇಶನ ಹಂಚಿಕೆ ಮಾಡುವ ಮೂಲಕ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಶುಕ್ರವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.

ವಿಷಯದ ಕುರಿತು ಗಮನ ಸೆಳೆದ ಸದಸ್ಯ ಬಸವರಾಜ ಛತ್ರದ ಕಳೆದ 2012ರಲ್ಲಿ ಬಡವರಿಗೆ ನಿವೇಶನ ಹಂಚಿಕೆಯಾಗಿದ್ದು ಬಿಟ್ಟರೆ ಇಲ್ಲಿಯವರೆಗೂ ಬಡವರಿಗೆ ಒಂದು ಅಡಿ ಜಾಗ ಕೂಡ ನೀಡಿಲ್ಲ. 10 ವರ್ಷಗಳ ಹಿಂದೆಯೇ 814 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇಂದಿಗೂ ಅವರಿಗೆ ನಿವೇಶನಗಳು ದೊರಕಿಲ್ಲ. ಅವರವರ ಕಾಲಘಟ್ಟದಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಪ್ಪು ಮಾಡಿಕೊಂಡಿದ್ದೇವೆ. ರಾಜಕೀಯ ದೂರವಿಟ್ಟು ನಿಜವಾದ ಬಡವರಿಗೆ ನಿವೇಶನ ಹಂಚಿಕೆ ಮಾಡಲು ತಾವು ಮುಕ್ತ ಚರ್ಚೆಗೆ ಬಂದಲ್ಲಿ ಬಿಜೆಪಿಯ ಸದಸ್ಯರು ಸಹಮತ ನೀಡಲಿದ್ದೇವೆ ಎಂದರು.

ಮೊದಲ ಹಂತದಲ್ಲಿ 434 ನಿವೇಶನ: ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶಿವಣ್ಣನವರ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಲೆಂದೇ ಮಲ್ಲೂರ ರಸ್ತೆಯಲ್ಲಿ 10 ಎಕರೆ ಜಮೀನು ಖರೀದಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಹಂಚಿಕೆ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಆಶ್ರಯ ಸಮಿತಿ ಸೇರಿದಂತೆ ಪುರಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿವೇಶನ ಹಂಚಿಕೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹಳೆಯ ಪಟ್ಟಿಯಲ್ಲಿರುವವರನ್ನು ಹೊರತುಪಡಿಸಿ ಹೊಸಬರಿಗೆ ಅಥವಾ ಅನರ್ಹರ ಆಯ್ಕೆಗೆ ಅವಕಾಶವಿಲ್ಲ ಎಂದರು.

ಭೂಮಿ ಕಳೆದುಕೊಂಡವರಿಗೂ ಅವಕಾಶ: ಮುಖ್ಯರಸ್ತೆಯ ಅಗಲೀಕರಣದಲ್ಲಿ ಸಂಪೂರ್ಣ ಭೂಮಿ ಕಳೆದುಕೊಂಡ ಮಾಲೀಕರಿಗೂ ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವೇಶನ ಒದಗಿಸಲಾಗುವುದು. ಅಲ್ಲದೇ ಅವರಿಗೆ ಪುರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ನೀಡಲು ಠರಾವು ಮಾಡಲಾಗುವುದು. ಆ. 15ರೊಳಗಾಗಿ ಬಡವರಿಗೆ ನಿವೇಶನ ಹಕ್ಕುಪತ್ರ ವಿತರಣೆ ನಡೆಯಲಿದೆ ಎಂದರು.

ಪಟ್ಟಣದ ಪರಿಮಿತಿ ಹೆಚ್ಚಳ: ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ ಮಾತನಾಡಿ, ಪಟ್ಟಣಕ್ಕೆ ಹೊಂದಿಕೊಂಡಿರುವ ಗುಮ್ಮನಹಳ್ಳಿ, ತೇರೆದಹಳ್ಳಿ ಗ್ರಾಮಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಕಳೆದ ಸಭೆಯಲ್ಲಿ ನಿರ್ಧರಿಸಿ ಸಂಬಂಧಿಸಿದ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿತ್ತು. ಮಾಸಣಗಿ ಗ್ರಾಪಂ ಠರಾವು ಮಾಡಿ ಕಳುಹಿಸಿದ್ದು, ಮಲ್ಲೂರು ಪಂಚಾಯಿತಿ ಬಾಕಿಯಿದೆ.

ಎರಡೂ ಗ್ರಾಮಗಳು ಪುರಸಭೆಗೆ ಸೇರಿದಲ್ಲಿ ಸುಮಾರು 20 ಕೋಲ್ಡ್ ಸ್ಟೋರೇಜ್, ಕಾರದಪುಡಿ ಘಟಕಗಳು ಸೇರಿದಂತೆ ವಿವಿಧ ಉತ್ಪಾದನೆ ಘಟಕಗಳಿಂದ ಸುಮಾರು ₹3 ಕೋಟಿ ಆದಾಯ ಬರಲಿದೆ ಹಾಗೂ ಅವುಗಳ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮೌಲ್ಯವು 10 ಪಟ್ಟು ಹೆಚ್ಚಾಗಲಿದೆ. ಕೂಡಲೇ ಶಾಸಕರು ಸರ್ಕಾರದಿಂದ ಆದೇಶ ಹೊರಡಿಸಲು ಸಹಕರಿಸುವಂತೆ ಮನವಿ ಮಾಡಿದರು.ಶಾಶ್ವತ ಪರಿಹಾರ ಕೊಡಿ: ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಪುರಸಭೆ ತ್ಯಾಜ್ಯ ಘಟಕ ನಿರ್ಮಿಸಲು ಈಗಾಗಲೇ ₹8 ಕೋಟಿ ವ್ಯಯಿಸಲಾಗಿದೆ. ಈಗಲೂ ಅಭಿವೃದ್ಧಿಗೆ ಹಣ ನೀಡಲಾಗುವುದು. ಆದರೆ ಹಿಂದೆ ನಡೆದ ಅಭಿವೃದ್ಧಿ ಕಾಮಗಾರಿಗಳ ಕುರಿತು ಎಲ್ಲ ಸದಸ್ಯರಿಗೆ ಮಾಹಿತಿ ನೀಡಬೇಕು. ಅಲ್ಲದೇ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಚಿಕನ್, ಮಾಂಸದಂಗಡಿ ಎಲ್ಲೆಂದರಲ್ಲಿ ತಲೆ ಎತ್ತಿವೆ. ತೆರವುಗೊಳಿಸಿ ಸೂಕ್ತ ಜಾಗದಲ್ಲಿ ವ್ಯವಸ್ಥೆ ಮಾಡಬೇಕಿದೆ. ಇದಕ್ಕಾಗಿ ಪುರಸಭೆ ವ್ಯಾಪ್ತಿಯಲ್ಲಿ ಜಾಗ ನೀಡಲು ಸಿದ್ಧವಿದೆ. ಮುಖ್ಯಾಧಿಕಾರಿಗಳು ಪರಿಶೀಲಿಸುವ ಮೂಲಕ ಮೂಲಕ ಶಾಶ್ವತ ಪರಿಹಾರ ಒದಗಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಚೇರಮನ್ ಚನ್ನವೀರಪ್ಪ ಶೆಟ್ಟರ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.