ಮುನ್ನೆಚ್ಚರಿಕೆ ಕ್ರಮವಾಗಿ ಆಲಮಟ್ಟಿ ಡ್ಯಾಂಗೆ ಹೈ ಸೆಕ್ಯೂರಿಟಿ

| N/A | Published : May 09 2025, 12:48 AM IST / Updated: May 09 2025, 10:46 AM IST

ಸಾರಾಂಶ

  ರಾಜ್ಯದ ದೊಡ್ಡದಾದ ಆಲಮಟ್ಟಿ ಅಣೆಕಟ್ಟು ಉಗ್ರರ ಹಿಟ್‌ ಲಿಸ್ಟ್‌ನಲ್ಲಿರುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಆಲಮಟ್ಟಿ ಡ್ಯಾಂಗೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಭದ್ರತೆ ನೀಡಲಾಗಿದೆ. ಹೀಗಾಗಿ, ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

 ಆಲಮಟ್ಟಿ : ಭಾರತ ಪಾಕ್‌ನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಅಡಗುತಾಣಗಳನ್ನು ನಿರ್ನಾಮ ಮಾಡಿದ್ದರಿಂದ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ದೊಡ್ಡದಾದ ಆಲಮಟ್ಟಿ ಅಣೆಕಟ್ಟು ಉಗ್ರರ ಹಿಟ್‌ ಲಿಸ್ಟ್‌ನಲ್ಲಿರುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಆಲಮಟ್ಟಿ ಡ್ಯಾಂಗೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಭದ್ರತೆ ನೀಡಲಾಗಿದೆ. ಹೀಗಾಗಿ, ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಆಲಮಟ್ಟಿ ಜಲಾಶಯದ ಭದ್ರತೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ(ಕೆಎಸ್‌ಐಎಸ್‌ಎಫ್) ಆಧೀನದಲ್ಲಿದ್ದು, ದಿನದ 24 ಗಂಟೆಯೂ ಜಲಾಶಯಕ್ಕೆ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಅಲ್ಲದೇ, ಅಗತ್ಯ ಅತ್ಯಾಧುನಿಕ ಆಯುಧಗಳು, ಬಂದೂಕುಗಳು, ಮದ್ದುಗುಂಡಗಳನ್ನು ಕೂಡ ಭದ್ರತಾ ಸಿಬ್ಬಂದಿಗೆ ನೀಡಲಾಗಿದೆ.

ಭಾರೀ ವಾಹನಗಳ ನಿಷೇಧ: ಆಲಮಟ್ಟಿಯ ಪೆಟ್ರೋಲ್ ಪಂಪ್‌ನಿಂದ ಹಾಗೂ ಜವಾಹರ ನವೋದಯ ವಿದ್ಯಾಲಯದ ಬಳಿಯ ಗೇಟ್‌ಗಳಿಂದ ಆಲಮಟ್ಟಿಯೊಳಗೆ ಭಾರೀ ವಾಹನ, ಗೂಡ್ಸ್ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ, ಅಗತ್ಯವಿದ್ದರೆ ಮಾತ್ರ ಕೆಬಿಜೆಎನ್‌ಎಲ್ ಅಧಿಕಾರಿಗಳ ಅನುಮತಿ ಪಡೆದು ವಾಹನ ಪ್ರವೇಶ ಪಡೆಯಬಹುದು ಎಂಬ ನಿಯಮ ಅಳವಡಿಸಲಾಗಿದೆ.

 86 ಪೊಲೀಸರು:

ಜಲಾಶಯದ ಭದ್ರತೆಗೆ ಒಬ್ಬರು ಅಸಿಸ್ಟಂಟ್ ಕಮಾಂಡೆಂಟ್ (ಡಿವೈಎಸ್ಪಿ ಕೇಡರ್) ಇದ್ದು, ಇಬ್ಬರು ಇನ್ಸಪೆಕ್ಟರ್, ಒಬ್ಬ ಪಿಎಸ್‌ಐ, 17 ಜನ ಎಎಸ್‌ಐ, 65 ಜನ ಪೊಲೀಸ್ ಸಿಬ್ಬಂದಿಯನ್ನು ದಿನದ 24 ಗಂಟೆಯೂ ಪಾಳಯ ಪ್ರಕಾರದಲ್ಲಿ ನಿಯೋಜನೆ ಮಾಡಲಾಗಿದೆ.

ಅಣೆಕಟ್ಟು ಹಿನ್ನೀರಿನಲ್ಲಿ ಬೋಟ್ ಮುಖಾಂತರ ದಿನದಲ್ಲಿ ರಾತ್ರಿ ಒಮ್ಮೆ, ಹಗಲು ಎರಡು ಬಾರಿ ಸೇರಿ ಒಟ್ಟು ಮೂರು ಬಾರಿ ಪೆಟ್ರೋಲಿಂಗ್‌ ನಡೆಸಿ ನಿಗಾವಹಿಸಲಾಗುತ್ತಿದೆ. ಜಲಾಶಯದ ಮುಂಭಾಗದಲ್ಲಿ ನೀರು ಇಲ್ಲದ ಕಾರಣ, ಜಲಾಶಯದ ಕೆಳಭಾಗದಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತಾ ಪೊಲೀಸರು ಕಾರ್ಯವೈಖರಿಯನ್ನು ಪ್ರತಿ ಗಂಟೆಗೊಮ್ಮೆ ಪಿಎಸ್‌ಐ ಮಟ್ಟದ ಅಧಿಕಾರಿಗಳು ತೆರಳಿ ಪರಿಶೀಲಿಸುತ್ತಿದ್ದಾರೆ. ಕೆಎಸ್‌ಐಎಸ್‌ಎಫ್ ನ ಸಿಬ್ಬಂದಿಯ ರಜೆಗಳನ್ನು ಕೂಡ ಕಡಿತಗೊಳಿಸಿದ್ದು, ಹೆಡ್ ಕ್ವಾಟರ್ಸ್ ಬಿಟ್ಟು ತೆರಳದಂತೆ ಸೂಚಿಸಲಾಗಿದೆ.

-ದಾಳಿಯ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಿಂದ ಅಣೆಕಟ್ಟುಗಳ ಬಳಿ ಹೆಚ್ಚಿನ ಭದ್ರತೆ ಕೈಗೊಳ್ಳುವಂತೆ ಸೂಚನೆಯಿದೆ. ನಿತ್ಯವೂ ಜಲಾಶಯಕ್ಕೆ ಹೆಚ್ಚಿನ ಭದ್ರತೆ ಇರುತ್ತದೆ. ಈಗ ಭದ್ರತೆ ಮತ್ತಷ್ಟು ಮುತುವರ್ಜಿ ವಹಿಸಿ ಭದ್ರತೆ ನಿಯೋಜನೆ ಮಾಡಲಾಗಿದೆ. ಆಲಮಟ್ಟಿ ಪೆಟ್ರೋಲ್ ಪಂಪ್‌ ಕಡೆಯಿಂದ ಆಲಮಟ್ಟಿಗೆ ಬರುವ ಪ್ರತಿ ವಾಹನಗಳ ವಿವರಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಬಿದ್ದರೆ ತಪಾಸಣೆಯನ್ನು ನಡೆಸಲಾಗುತ್ತಿದೆ.ಶಿವಲಿಂಗ ಕುರೆನ್ನವರ, ಕೆಎಸ್‌ಐಎಸ್‌ಎಫ್ ಇನ್ಸಪೆಕ್ಟರ್,(ಅಣೆಕಟ್ಟು ಭದ್ರತಾ ಉಸ್ತುವಾರಿ