ವಿಜ್ಞಾನ ಮಹಾವಿದ್ಯಾಲಯ ವಿದ್ಯಾರ್ಥಿಗಳು ವಿಜ್ಞಾನಿಗಳೂ ಆಗಬೇಕು ಹಾಗೂ ತತ್ವಜ್ಞಾನಿಗಳೂ ಆಗಬೇಕು. ವಿಜ್ಞಾನ ಜೊತೆಗೆ ಅವರಲ್ಲಿ ತತ್ವಜ್ಞಾನ ಹಾಗೂ ಧರ್ಮ ಎರಡೂ ಇದ್ದಾಗ ನಿಜವಾದ ವಿಜ್ಞಾನದ ಉಪಯೋಗ ಮಾಡಿಕೊಳ್ಳಲು ಮತ್ತು ಸಮಾಜಕ್ಕೆ ಹಿತವಾಗಲು ಸಾಧ್ಯವಿದೆ ಎಂದು ಉಡಪಿ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಜ್ಞಾನ ಮಹಾವಿದ್ಯಾಲಯ ವಿದ್ಯಾರ್ಥಿಗಳು ವಿಜ್ಞಾನಿಗಳೂ ಆಗಬೇಕು ಹಾಗೂ ತತ್ವಜ್ಞಾನಿಗಳೂ ಆಗಬೇಕು. ವಿಜ್ಞಾನ ಜೊತೆಗೆ ಅವರಲ್ಲಿ ತತ್ವಜ್ಞಾನ ಹಾಗೂ ಧರ್ಮ ಎರಡೂ ಇದ್ದಾಗ ನಿಜವಾದ ವಿಜ್ಞಾನದ ಉಪಯೋಗ ಮಾಡಿಕೊಳ್ಳಲು ಮತ್ತು ಸಮಾಜಕ್ಕೆ ಹಿತವಾಗಲು ಸಾಧ್ಯವಿದೆ ಎಂದು ಉಡಪಿ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.

ನವನಗರದ 110ನೆಯ ಸೆಕ್ಟರ್‌ನ ವಿದ್ಯಾ ಪ್ರಸಾರಕ ಮಂಡಳದ ಬಲರಾಮರಾವ ಹುನ್ನೂರ ವಿಜ್ಞಾನ ಮಹಾವಿದ್ಯಾಲಯದ ನೂತನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತತ್ವಜ್ಞಾನ, ಧರ್ಮ, ಪುಣ್ಯ ಮುಂತಾದವುಗಳ ಬಗ್ಗೆ ತಿಳಿವಳಿಕೆ ಇದ್ದ ವ್ಯಕ್ತಿ ವೈಜ್ಞಾನಿಕ ಪ್ರಗತಿಯನ್ನು ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಜ್ಞಾನ ಮೊಬೈಲ್‌ ಕೊಟ್ಟಿದೆ. ಆದರೆ ಅದರ ಉಪಯೋಗ ಹೇಗೆ ಆಗಬೇಕು ಎನ್ನುವುದನ್ನು ತತ್ವಜ್ಞಾನ ಹಿನ್ನೆಲೆಯಲ್ಲಿ ಮಾಡಿದರೆ ಸಾವಿರಾರು ಜನರಿಗೆ ಧರ್ಮದ ಸಂದೇಶ ಮುಟ್ಟಿಸಲು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ವಿಜ್ಞಾನದ ಜೊತೆಗೆ ತತ್ವಜ್ಞಾನ ಹಾಗೂ ಧರ್ಮದ ಹಿನ್ನೆಲೆ ಇರುವುದು ಅವಶ್ಯವಾಗಿದೆ ಎಂದು ಹೇಳಿದರು.

ವಿಜ್ಞಾನದ ಶಿಕ್ಷಣ ಉತ್ತಮ ವಿಜ್ಞಾನಿಗಳನ್ನು ಸಿದ್ಧಗೊಳಿಸಬೇಕು. ಉತ್ತಮ ವಿಜ್ಞಾನಿಗಳಾಗಿ ದೇಶಕ್ಕೆ ಕೊಡುಗೆ ನೀಡುವುದರ ಮೂಲಕ ನಾಡಿಗೆ ಹೆಸರು ತರುವಂತಾಗಬೇಕು ಎಂದರು. ಪಂ.ರಘೋತ್ತಮ್ರಾಚಾರ್ಯ ನಾಗಸಂಪಿಗೆ ಸ್ವಾಗತಿಸಿದರು. ಪ್ರಾಚಾರ್ಯ ಶ್ರೀನಿವಾಸ ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಪಂ.ಸತ್ಯಧ್ಯಾನಾಚಾರ್ಯಕಟ್ಟಿ, ದಾನಿ ಗೋಪಾಲ ಹುನ್ನೂರ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಮಾತನಾಡಿದರು. ಪಂ.ಬಿಂದಾಚಾರ್ಯ ನಾಗಸಂಪಿಗೆ ನಿರೂಪಿಸಿದರು. ಡಾ.ಪಿ.ಆರ್. ಜೋಶಿ ವಂದಿಸಿದರು. ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ, ಅಧ್ಯಕ್ಷ ವಿ.ವೈ. ಕವಠೇಕರ, ಉಪಾಧ್ಯಕ್ಷ ಜಿ.ಎನ್.ಕುಲಕರ್ಣಿ, ಸದಸ್ಯರಾದ ಎಸ್.ಬಿ. ಪರ್ವತೀಕರ, ಎಸ್.ಕೆ. ಕುಲಕರ್ಣಿ, ವಿ.ಆರ್. ಬುರ್ಲಿ, ಎಸ್.ಬಿ. ಸತ್ಯನಾರಾಯಣ, ಶ್ರೀನಾಥ ಮಳಗಿ, ಡಾ.ಜೆ.ಎಸ್. ದೇಶಪಾಂಡೆ, ಡಾ.ಸಂದೀಪ ಹುಯಿಲ್ಗೋಳ, ಪ್ರದೀಪ ಪರ್ವತೀಕರ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಪಿ. ನಾಡಗೌಡ, ಆನಂದ ಹುನ್ನೂರ ಇತರರು ಇದ್ದರು.