ಓದಿನೊಂದಿಗೆ ಆರೋಗ್ಯ ಕಾಳಜಿಗೂ ಒತ್ತು ನೀಡಿ: ಡಾ. ಹೊನಕೇರಿ

| Published : Oct 30 2025, 01:45 AM IST

ಸಾರಾಂಶ

ಆಧುನಿಕ ಜೀವನ ಶೈಲಿ, ವ್ಯಾಯಾಮ ರಹಿತ ಜೀವನ, ಒತ್ತಡ, ಜಂಕ್ ಫುಡ್ ಸೇವನೆ ಇತ್ಯಾದಿ ದುರಭ್ಯಾಸಗಳಿಂದ ಪ್ರಸ್ತುತ ಯುವಕರಲ್ಲೂ ಅನೇಕ ಕಾಯಿಲೆಗಳು ಕಂಡು ಬರುತ್ತಿವೆ ಎಂದು ಡಾ. ಎಸ್.ಎಂ. ಹೊನಕೇರಿ ಹೇಳಿದರು.

ಹುಬ್ಬಳ್ಳಿ: ಜೀವನ ಶೈಲಿ ಬದಲಾದಂತೆ ಹದಿಹರೆಯ ಯುವಕರಲ್ಲಿ ಕಾಯಿಲೆಗಳು ಸಹ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಓದಿನ ಜತೆಗೆ ಆರೋಗ್ಯದ ಕಡೆಗೂ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಹೇಳಿದರು.

ವಿಶ್ವ ಪಾರ್ಶ್ವವಾಯು ದಿನ ಅಂಗವಾಗಿ ನಗರದ ಬಾಲಾಜಿ ಆಸ್ಪತ್ರೆ ವತಿಯಿಂದ ಬುಧವಾರ ಸ್ಟ್ರೋಕ್ ಕುರಿತು ಜನಜಾಗೃತಿ ಮೂಡಿಸಲು ಆಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ವಾಕಥಾನ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆಗಳು ಕೇವಲ ವಯಸ್ಕರಿಗೆ ಮಾತ್ರ ಬರುತ್ತವೆ ಎಂಬ ಮಾತು ಇದೀಗ ದೂರವಾಗಿದ್ದು, ಆಧುನಿಕ ಜೀವನ ಶೈಲಿ, ವ್ಯಾಯಾಮ ರಹಿತ ಜೀವನ, ಒತ್ತಡ, ಜಂಕ್ ಫುಡ್ ಸೇವನೆ ಇತ್ಯಾದಿ ದುರಭ್ಯಾಸಗಳಿಂದ ಪ್ರಸ್ತುತ ಯುವಕರಲ್ಲೂ ಅನೇಕ ಕಾಯಿಲೆಗಳು ಕಂಡು ಬರುತ್ತಿದ್ದು, ವಿದ್ಯಾರ್ಥಿಗಳು ಓದಿನ ಜತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ರೋಗಗಳು ಬಂದ ಮೇಲೆ ಚಿಕಿತ್ಸೆಗಾಗಿ ಅಲೆದಾಡದೆ ಅವುಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ನೇತೃತ್ವ ವಹಿಸಿದ್ದ ಬಾಲಾಜಿ ಆಸ್ಪತ್ರೆ ಚೇರ್‌ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಪ್ರತಿ ವರ್ಷ ಜಗತ್ತಿನಾದ್ಯಂತ ಪ್ರತಿ ನಾಲ್ಕು ಜನರ ಪೈಕಿ ಒಬ್ಬರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತ ನಂತರ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಾಣಾಂತಿಕ ಕಾಯಿಲೆ ಪಾರ್ಶ್ವವಾಯು ಆಗಿದೆ. ಈ ಲಕ್ಷಣಗಳು ಕಂಡು ಬಂದ ಮೊದಲ 3 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ದೊರೆತರೆ ಸಾವು-ನೋವು, ಅಂಗನ್ಯೂನ್ಯತೆ ಸೇರಿದಂತೆ ಇತರೆ ಸಮಸ್ಯೆಯಿಂದ ಪಾರಾಗಬಹುದು ಎಂದರು.

ಐ.ಎಂ.ಎ. ಹುಬ್ಬಳ್ಳಿ ಘಟಕದ ಅಧ್ಯಕ್ಷ ಡಾ. ಬಸವರಾಜ ಸಜ್ಜನ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಾರ್ಶ್ವವಾಯು ಸಮಸ್ಯೆಗೆ ಕಾರಣ ಮತ್ತು ಅದರಿಂದ ಪಾರಾಗುವ ವಿಧಾನಗಳ ಕುರಿತ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

ಆಸ್ಪತ್ರೆ ಆವರಣದಿಂದ ಆರಂಭವಾದ ಜನಜಾಗೃತಿ ಜಾಥಾ ವಿದ್ಯಾನಗರ ಶಿರೂರು ಪಾರ್ಕ್, ಆರ್ಟ್ಸ್ ಕಾಲೇಜು, ಕೆಎಂಸಿಆರ್‌ಐ, ಎಂ.ವಿ.ಪಿ. ಎದುರಿನ ತಿಮ್ಮಸಾಗರ ರಸ್ತೆ ಮುಖಾಂತರ ಸಾಗಿ ಆಸ್ಪತ್ರೆ ಆವರಣದಲ್ಲಿ ಸಮಾಪ್ತಿಗೊಂಡಿತು.

ಐಎಂಎ ಕಾರ್ಯದರ್ಶಿ ಡಾ. ಡಿ.ಕೆ. ಮಹೇಶ್, ಕನಕದಾಸ ಶಿಕ್ಷಣ ಸಂಸ್ಥೆಯ ಸಂದೀಪ್ ಬೂದಿಹಾಳ, ಎಂ.ಆರ್. ಪಾಟೀಲ್, ಎಂ.ಕೆ. ನಾಯ್ಕರ್, ಗುರುಪಾದ ಕಮ್ಮಾರ, ಗುರು ಬನ್ನಿಕೊಪ್ಪ, ರಿಕಿ ಖೋಡೆ ಸೇರಿದಂತೆ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಮುಖ್ಯಸ್ಥರು ಹಾಗೂ ಇನ್ನಿತರೆ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.