ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಹಿಳೆಯರ ಆರ್ಥಿಕ ಸಬಲೀಕರಣವಷ್ಟೇ ಮುಖ್ಯವಲ್ಲ. ಜೊತೆಗೆ ಮಹಿಳೆಯರ ಸುರಕ್ಷತೆಯೂ ಅಷ್ಟೇ ಮುಖ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿದರು.

ಸೋಮವಾರ ರಾತ್ರಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಮಹಿಳಾ ಆಯೋಗದಿಂದ ಡಿಜಿಟಲ್ ಕ್ರಾಂತಿಯನ್ನು ಮಾಡಿದ್ದೇನೆ. ಡಿಜಿಟಲ್ ಮೂಲಕ ಮಹಿಳಾ ಆಯೋಗ ಎಂದರೇನು, ಮಹಿಳಾ ಆಯೋಗದ ಅಧ್ಯಕ್ಷರೆಂದರೆ ಯಾರು ಹಾಗೂ ಅವರ ಕರ್ತವ್ಯವೇನು ಎನ್ನುವುದರ ಬಗ್ಗೆ ಅರಿವು ಮೂಡಿಸಿದ್ದೇನೆ. ಅಧಿಕಾರಿಗಳೂ ಕೂಡ ಮಹಿಳೆಯರಿಗೆ ಆಯೋಗದ ಬಗ್ಗೆ ಅರಿವು ಮೂಡಿಸಬೇಕು. ಕೇವಲ ಆಯೋಗದಿಂದ ಮಾತ್ರ ಅರಿವು ಮೂಡಿಸಲು ಸಾಧ್ಯವಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳಾದಿಯಾಗಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳ ನ್ನೊಳಗೊಂಡಂತೆ ಮಹಿಳಾ ಸ್ಪಂದನಾ ಕಾರ್ಯಕ್ರಮ ಮಾಡಿ, ಮಹಿಳೆಯರ ಕೆಲವು ಸಮಸ್ಯೆಗಳಿಗೆ ಕಾರ್ಯಕ್ರಮದ ವೇದಿಕೆಯಲ್ಲೇ ಇತ್ಯರ್ಥ ಪಡಿಸಿದ್ದೇನೆ.

ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಮಹಿಳೆಯರ ಸುರಕ್ಷತೆ ಮತ್ತು ಆಂತರಿಕ ದೂರು ಸಮಿತಿಗಳ ರಚನೆಯಾಗಿರಬೇಕು. ಈ ಮೂಲಕ ಮಹಿಳೆಯರ ಎಲ್ಲಾ ಸಮಸ್ಯೆ, ಮಹಿಳೆಯರ ಮೇಲೆ ಆಗುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕ್ರಮವಾಗಬೇಕು. ನಾನು ಅಧ್ಯಕ್ಷೆಯಾದ ನಂತರ ರಾಜ್ಯದ 31 ಜಿಲ್ಲೆಗಳಿಗೂ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ್ದೇನೆ. ಶಾಲಾ ಕಾಲೇಜುಗಳ ಗೋಡೆ ಮೇಲೆ, ಬಸ್ ನಿಲ್ದಾಣಗಳಲ್ಲಿ, ಪ್ರಮುಖ ಜನ ಸಂದಣಿ ಇರುವ ವೃತ್ತಗಳ ಬಳಿ ಮಹಿಳೆಯರ ಸುರಕ್ಷತೆಗೆ ಆಯೋಜಿಸಿರುವ ಕಾರ್ಯಕ್ರಮಗಳ ಬಗ್ಗೆ, ಮಹಿಳೆಯರಿಗೆ ಸರ್ಕಾರದಿಂದ ಮಾಡಿರುವ ಸಹಾಯವಾಣಿ ಗೋಡೆ ಬರಹ ಬರೆಸಬೇಕು. ಇದರಿಂದ ಮಹಿಳೆಯರಿಗೆ ನನ್ನ ರಕ್ಷಣೆಗೆ ಇರುವ ಸಹಾಯವಾಣಿ ಎಂದು ಮನಸ್ಸಿನಲ್ಲಿ ಮೂಡುತ್ತದೆ ಎಂದರು.

ಸರ್ಕಾರ ಈಗಾಗಲೇ ರಾಜ್ಯದ ಮಹಿಳೆಯರ ಸುರಕ್ಷತೆಗೆ ಕೋಟಿಗಟ್ಟಲೇ ಅನುದಾನ ಖರ್ಚು ಮಾಡುತ್ತಿದೆ. ಇದು ಸಮರ್ಪಕ ವಾಗಿ ಮಹಿಳೆಯರ ಸುರಕ್ಷತೆಗೆ ತಲುಪಬೇಕು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಜೀವಿನಿ ಯೋಜನೆ, ಮುದ್ರ ಯೋಜನೆ ಯಡಿ ಸ್ವ ಉದ್ಯೋಗಕ್ಕೆ ₹50 ಸಾವಿರದಿಂದ ₹10 ಲಕ್ಷದವರೆಗೆ ಸಾಲ ಸೌಲಭ್ಯ, ಶಿಶು ಸುರಕ್ಷಾ ಯೋಜನೆ, ಉದ್ಯೋಗಿನಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಮಹಿಳಾ ಸಹಾಯವಾಣಿ 181, ಪೊಲೀಸ್ ಸಹಾಯವಾಣಿ 112 ಸ್ಥಾಪಿಸಲಾಗಿದೆ. 181 ಗೆ ಕರೆ ಮಾಡಿ ತನ್ನ ಮೇಲಾಗಿರುವ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರೆ ಅಂತಹ ದೌರ್ಜನ್ಯಕ್ಕೆ, ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ಉಚಿತವಾಗಿ ವಕೀಲರ ಸೇವೆ, ಉಚಿತ ವೈದ್ಯಕೀಯ ಸೇವೆ, ನ್ಯಾಯಾಲದಲ್ಲಿ ಉಚಿತ ಕಾನೂನು ಸೇವೆ, ಉಚಿತ ಸಮಾಲೋಚನಾ ವ್ಯವಸ್ಥೆ ಮಾಡಲಾಗುವುದು ಎಂದರು.