ಸಾರಾಂಶ
ರಾಷ್ಟ್ರೀಯ ಭಾವೈಕ್ಯತೆ ಶಿಬಿರವು ಒಂದು ಚಿಕ್ಕ ರಾಷ್ಟ್ರದಂತೆ ಕಾಣಬಹುದು. ಎಲ್ಲ ರಾಜ್ಯಗಳ ಮಾತೃ ಭಾಷೆಗಳನ್ನು ಕಲಿಯಲು ಉತ್ತಮ ಅವಕಾಶ, ಭಾಷೆ ಬೇರೆಯಾದರು ಭಾವನೆ ಮಾತ್ರ ಒಂದೇ ಆಗಿದೆ
ಧಾರವಾಡ: ನಾವೆಲ್ಲರೂ ಒಂದಾಗಿ ಸದೃಢ ರಾಷ್ಟ್ರ ನಿರ್ಮಿಸೋಣ. ಗಾಂಧೀಜಿಯ ಸ್ವಚ್ಛ ಭಾರತದ ಕನಸು ನನಸಾಗಿಸೋಣ ಎಂದು ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಅಧಿಕಾರಿ ಡಾ. ಪ್ರತಾಪ ಲಿಂಗಯ್ಯ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಮನಸೊಲ್ಲಾಸ ಅತಿಥಿ ಗೃಹದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ ಕವಿವಿ ಜೊತೆಗೂಡಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಜಾತಿ- ಜಾತಿಗಳ ನಡುವಿನ ಕೋಮುವಾದವನ್ನು ತಡೆಯೋಣ, ಈ ರಾಷ್ಟ್ರೀಯ ಭಾವೈಕ್ಯತೆ ಶಿಬಿರವು ಒಂದು ಚಿಕ್ಕ ರಾಷ್ಟ್ರದಂತೆ ಕಾಣಬಹುದು. ಎಲ್ಲ ರಾಜ್ಯಗಳ ಮಾತೃ ಭಾಷೆಗಳನ್ನು ಕಲಿಯಲು ಉತ್ತಮ ಅವಕಾಶ, ಭಾಷೆ ಬೇರೆಯಾದರು ಭಾವನೆ ಮಾತ್ರ ಒಂದೇ ಆಗಿದೆ ಎಂದರು.ರಾಜ್ಯ ಸರ್ಕಾರವು ಪ್ರತಿ ವರ್ಷವೂ 10 ರಾಷ್ಟ್ರೀಯ ಭಾವೈಕ್ಯತೆ ಶಿಬಿರ ಹಾಗೂ ನಾಲ್ಕು ಯುವಜನೋತ್ಸವ ಕಾರ್ಯಕ್ರಮಕ್ಕೆ ಅನುದಾನ ನೀಡುತ್ತದೆ.ಇಂತಹ ಅನುದಾನ ಯಾವುದೇ ರಾಜ್ಯದಲ್ಲಿಲ್ಲ ಎಂದರು.
ಕವಿವಿ ಹಣಕಾಸು ಅಧಿಕಾರಿ ಡಾ. ಸಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ, ರಾಷ್ಟ್ರವನ್ನು ಬಲಿಷ್ಠವಾಗಿ ಕಟ್ಟಬೇಕಿದೆ. ದೇಶದ ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ ವಿಭಿನ್ನವಾಗಿದ್ದರೂ ನಾವೆಲ್ಲರೂ ಒಂದೇ. ರಕ್ತದಾನ ಶಿಬಿರ, ಸ್ವಚ್ಛತೆ ಶಿಬಿರ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಎನ್ನೆಸ್ಸೆಸ್ ಎಲ್ಲರನ್ನೂ ಒಗ್ಗೂಡಿಸಿದೆ. ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಗುಣ ರೂಪಿಸಿಕೊಳ್ಳಲು ಶಿಬಿರ ಉತ್ತಮ ಅವಕಾಶ ಎಂದರು.ಡಾ. ನಾಗರಾಜ ಗುದಾಗನವರ, ಡಾ. ಎಫ್.ಎಚ್. ನದಾಫ್, ಡಾ. ಎಸ್.ಎಸ್. ಮಂಗಳವಾಡಿ, ಆಸೀಫ್ ತೋರಗಲ್, ಡಾ. ಸಲಿಂ ಕೋಳೂರು, ಡಾ. ನಾಗರಾಜ ತಳವಾರ, ಎಸ್.ಎಂ. ಕೋಟಬಾಗಿ ಹಾಗೂ ಗೋವಾ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ತೆಲಂಗಾಣ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯದ 150 ಎನ್ನೆಸ್ಸೆಸ್ ಸ್ವಯಂ ಸೇವಕರು ಇದ್ದರು. ಕವಿವಿ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಾರ್ಯಕ್ರಮ ಸಂಯೋಜಕ ಡಾ. ಎಂ.ಬಿ. ದಳಪತಿ ಸ್ವಾಗತಿಸಿದರು. ಡಾ. ಮಧುಶ್ರೀ ನಿರೂಪಿಸಿದರು. ಡಾ. ಜಯನಂದ ಹಟ್ಟಿ ವಂದಿಸಿದರು.