ಸಾರಾಂಶ
ವಿಜಯಪುರ: ಮಂಡಿಬೆಲೆ ಗ್ರಾಪಂ ವ್ಯಾಪ್ತಿಯ ದೊಡ್ಡತತ್ತಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೈಲು ಎಂಜಿನ್ ಮತ್ತು ಬೋಗಿಗಳ ಮಾದರಿಯಲ್ಲಿ ಬಣ್ಣ ಬಳಿಸಿ ಮಕ್ಕಳು ಉತ್ಸಾಹದಿಂದ ಶಾಲೆಗೆ ಬರುವ ವಾತಾವರಣ ಕಲ್ಪಿಸಿಕೊಡುವ ಮೂಲಕ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಹಳೆಯ ವಿದ್ಯಾರ್ಥಿಗಳು ನೆರವಾಗಿದ್ದಾರೆ.
ಶಾಲಾ ಗೋಡೆಗೆ ಮಕ್ಕಳು ರೈತ ಹತ್ತುವ ಮಾದರಿಯಲ್ಲಿ ಚಿತ್ರ ಬಿಡಿಸಿರುವುದು ಮಕ್ಕಳು ರೈಲಿಗೆ ಹತ್ತುವಂತಹ ಅನುಭವ ಕೊಡುತ್ತದೆ. ಇದರಿಂದ ಮಕ್ಕಳಲ್ಲೂ ಉತ್ಸಾಹ ಬಂದಿದೆ. ಶಾಲೆಯಲ್ಲಿ 8 ಮಕ್ಕಳಿಗೆ ಇಳಿಕೆಯಾಗಿದ್ದ ಸಂಖ್ಯೆ ಈಗ 19ಕ್ಕೆ ಏರಿದೆ. ಇಬ್ಬರು ಶಿಕ್ಷಕರಿದ್ದು, ಒಬ್ಬರು ಅತಿಥಿ ಶಿಕ್ಷಕಿಯಿದ್ದಾರೆ. ಪೋಷಕರೂ ತಮ್ಮ ಮಕ್ಕಳನ್ನು ಉತ್ಸಾಹದಿಂದ ಶಾಲೆಗೆ ಕರೆದುಕೊಂಡು ಬಂದು ಬಿಡುತ್ತಿದ್ದಾರೆ. ಇದೆಲ್ಲಾ ಗ್ರಾಮದ ಹಳೆಯ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ ಎಂದು ಮುಖ್ಯಶಿಕ್ಷಕ ರಾಜು ಹೇಳಿದರು.ಶಾಲೆಗೆ ಉತ್ತಮ ಕಾಂಪೌಂಡ್ ನಿರ್ಮಾಣ, ಆವರಣದಲ್ಲಿದ್ದ ಹಳೆಯ ಕಟ್ಟಡ ತೆರವುಗೊಳಿಸಿ, ಶಾಲಾ ಆವರಣದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಈಗ ಮಕ್ಕಳು ವಿಶಾಲವಾದ ಆಟದ ಮೈದಾನವಿದೆ. ವ್ಯಾಯಾಮ ಮಾಡುವ ಪರಿಕರಗಳಿವೆ. ಶೌಚಾಲಯಗಳಿವೆ. ಶಾಲೆಯ ಒಂದು ಕೊಠಡಿಯನ್ನು ಕಂಪ್ಯೂಟರ್ ಕೊಠಡಿ ಮಾಡಲು ಸಿದ್ಧತೆ ಮಾಡಿದ್ದಾರೆ. ನಮ್ಮ ಶಾಲೆಯ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಕಂಪ್ಯೂಟರ್ ಶಿಕ್ಷಣ ಕೊಡಲು ತಯಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೊರತೆ:ಶಾಲೆಯ ಆವರಣದಲ್ಲಿ ವಿಶಾಲವಾದ ಮೈದಾನವಿದೆ. ಇಲ್ಲಿ ಕೈ ತೋಟ ಮಾಡುವ ಮೂಲಕ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಿರುವ ತರಕಾರಿ ಬೆಳೆಯುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಆದರೆ, ನಮಗೆ ನೀರಿನ ಸೌಕರ್ಯವಿಲ್ಲ. ನೀರಿನ ಸಂಪು ನಿರ್ಮಾಣವಾಗಬೇಕಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರು ಕೊಡುವುದಕ್ಕೆ ಕಷ್ಟವಾಗುತ್ತಿದೆ. ಶಾಲೆಗೆ ಪ್ರತ್ಯೇಕ ಒಂದು ಕೊಳಾಯಿ ಅಳವಡಿಸಿಕೊಟ್ಟರೆ, ಕೈತೋಟದ ಜೊತೆಗೆ ಶಾಲೆಯ ಮುಂಭಾಗದಲ್ಲಿ ಉದ್ಯಾನವನದ ಮಾದರಿಯಲ್ಲಿ ತಯಾರಿಸುವ ಚಿಂತನೆ ಇದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಮನವಿ ಮಾಡಿಕೊಂಡಿದ್ದೇವೆ. ಶಾಲೆಯ ಹಿಂಭಾಗದಲ್ಲಿ ಕಾಂಪೌಂಡ್ ನಿರ್ಮಾಣವಾದರೆ ತುಂಬಾ ಅನುಕೂಲವಾಗಲಿದೆ ಎಂಬುದು ಶಿಕ್ಷಕರ ಅಭಿಪ್ರಾಯ
ಕೋಟ್.....ನಾವು ಓದಿರುವ ಶಾಲೆಯೆಂದರೆ ನಮಗೆ ಹೆಮ್ಮೆ. ನಮಗೆ ಸುಂದರ ನೆನಪು, ಉತ್ತಮ ಭವಿಷ್ಯ ಕಲ್ಪಿಸಿಕೊಟ್ಟಿರುವ ನಮ್ಮ ಶಾಲೆ ಮುಂದುವರಿಯಬೇಕು. ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕು. ಅವರ ಭವಿಷ್ಯವನ್ನು ಕಟ್ಟಿಕೊಡುವ ಶಾಲೆ ನಮ್ಮ ಕಣ್ಮುಂದೆ ಮುಚ್ಚುವುದಕ್ಕೆ ನಾವು ಬಿಡುವುದಿಲ್ಲ. ಅದಕ್ಕೆ ನಾವೆಲ್ಲಾ ಸೇರಿ ಶಾಲೆಯನ್ನು ಅಭಿವೃದ್ಧಿಪಡಿಸಿ, ಇಳಿಕೆಯಾಗಿರುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ, ಅತ್ಯುತ್ತಮ ಶಾಲೆಯನ್ನಾಗಿ ರೂಪಿಸುವ ಯೋಜನೆ ಹಾಕಿಕೊಂಡಿದ್ದೇವೆ. ಪೋಷಕರ ಮನವೊಲಿಸಿ ಮಕ್ಕಳನ್ನು ದಾಖಲಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತೇವೆ. ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದೇ ನಮ್ಮ ಉದ್ದೇಶ.
-ಹಳೆಯ ವಿದ್ಯಾರ್ಥಿಗಳು, ದೊಡ್ಡತತ್ತಮಂಗಲ(ಫೋಟೋ ಕ್ಯಾಪ್ಷನ್)
ವಿಜಯಪುರ ಹೋಬಳಿ ದೊಡ್ಡತತ್ತಮಂಗಲ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಮೊದಲ ಹೆಜ್ಜೆಯಾಗಿ ಶಾಲಾ ಗೋಡೆಗೆ ರೈಲು ಬೋಗಿಗಳ ಮಾದರಿಯಲ್ಲಿ ಚಿತ್ರಗಳು ಬರೆಯಿಸಿ ವಿದ್ಯಾರ್ಥಿಗಳು ಸಾಲಾಗಿ ನಿಂತು ರೈಲು ಹತ್ತುವ ಮಾದರಿಯಲ್ಲಿ ಕೊಠಡಿಯೊಳಗೆ ಹೋಗುವ ದೃಶ್ಯ.