ಅಂಕೋಲಾ: ದೇಶದ ಗಮನ ಸೆಳೆದುಕೊಂಡಿರುವ ಆಳ್ವಾಸ್ ನುಡಿಸಿರಿ ವಿರಾಸತ್ ಪಟ್ಟಣದ ಜೈಹಿಂದ ಹೈಸ್ಕೂಲ್ ಮೈದಾನದಲ್ಲಿ ಫೆ. ೧೮ರ ಸಂಜೆ ೬.೩೦ಕ್ಕೆ ವಿಧ್ಯುಕ್ತವಾಗಿ ಅನಾವರಣಗೊಳ್ಳಲಿದ್ದು, 500ಕ್ಕೂ ಹೆಚ್ಚಿನ ಕಲಾವಿದರ ಕೂಡುವಿಕೆಯಲ್ಲಿ ತೆರೆದುಕೊಳ್ಳಲಿರುವ ಸಮೃದ್ಧ ಸಾಂಸ್ಕೃತಿಕ ವೈಭವಕ್ಕೆ ತಾವೆಲ್ಲರೂ ಸಾಕ್ಷಿಯಾಗಬೇಕು ಎಂದು ಆಳ್ವಾಸ್ ನುಡಿಸಿರಿ ವಿರಾಸತ್ ಕಾರವಾರ-ಅಂಕೋಲಾ ಘಟಕಾಧ್ಯಕ್ಷ, ವಕೀಲ ನಾಗರಾಜ ನಾಯಕ ಹೇಳಿದರು.
ಅವರು ಈ ಕುರಿತು ಮಾತನಾಡಿ, ಶಿಕ್ಷಣ ತಪಸ್ವಿಯಾಗಿರುವ ಡಾ. ಮೋಹನ ಆಳ್ವ ಅವರ ಕಲ್ಪನೆಯಲ್ಲಿ ಮೈತಳೆದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸುಮಾರು 22 ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನಾಮೃತವನ್ನು ಉಣಬಡಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೇವಲ ಶಿಕ್ಷಣಕ್ಕೆ ಸೀಮಿತವಾಗದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಸಮ್ಮಿಲನದೊಂದಿಗೆ ಪರಿಪೂರ್ಣ ಶಿಕ್ಷಣ ನೀಡುವುದರೊಂದಿಗೆ ಮಾದರಿ ಸಂಸ್ಥೆಯಾಗಿದೆ ಎಂದರು.ಗೌರವಾಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಿವೈದ್ಯ ಹನುಮಂತ ಗೌಡ ಮಾತನಾಡಿ, ಹಿಂದುಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ಪರಂಪರೆಯ ಮೌಲ್ಯಗಳನ್ನು ಹೊಸ ತಲೆಮಾರಿನವರಿಗೆ ಪರಿಚಯಿಸಿ ಪ್ರೋತ್ಸಾಹಿಸುವ ಕಾರ್ಯ ಆಳ್ವಾಸ್ ಸಾಂಸ್ಕೃತಿಕ ವೈಭವದಿಂದಾಗಲಿದ್ದು, ಎಲ್ಲರೂ ಸಹಕರಿಸಬೇಕಿದೆ ಎಂದರು.
ಉಪಾಧ್ಯಕ್ಷ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಗೋಪು ಅಡ್ಲೂರು ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿ.ಎಸ್. ಭಟ್ಟ ಕಲ್ಲೇಶ್ವರ, ಆರತಿ ಗೌಡ, ವಕೀಲ ಉಮೇಶ ನಾಯ್ಕ ಬೇಳಾ, ವಿಶು ನಾಯಕ ಬೊಳೆ, ಸದಾನಂದ ನಾಯಕ ಬಳಲೆ, ಶಂಕರ ಗೌಡ ಅಡ್ಲೂರು, ಧೀರು ಬೆಲೇಕೇರಿ, ಸುನೀಲ್ ಕುಡ್ತಲಕರ, ವಿನೋದ ಕುಡ್ತಲಕರ, ಮಂಜು ಅಡ್ಲೂರು, ವಿಕಾಶ ನಾಯಕ, ಬ್ರಿಜೇಶ ನಾಯಕ ಪಾಲ್ಗೊಂಡಿದ್ದರು.
ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮದ ಸಂಘಟಕ ರಾಮಚಂದ್ರ ಹೆಗಡೆ ಕುಂಟಕಣಿ ಸ್ವಾಗತಿಸಿದರು.
ಆಳ್ವಾಸ ಕಾಲೇಜಿನ ಡಾ. ದತ್ತಾತ್ರೇಯ ಹೆಗಡೆ, ಶಿಕ್ಷಕರಾದ ಗಣಪತಿ ನಾಯಕ, ರಮೇಶ ಗುನಗಾ ಹನೇಹಳ್ಳಿ, ಸದಾನಂದ ನಾಯ್ಕ ವಿವರಿಸಿದರು. ಸದಸ್ಯ ಬಿಂದೇಶ ನಾಯಕ ಹಿಚ್ಕಡ ವಂದಿಸಿದರು. ಉದ್ಘಾಟನೆ: ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಉದ್ಘಾಟಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಪಾಲ್ಗೊಳ್ಳುವರು.
