ತಾಲೂಕಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ

| Published : Jul 05 2024, 12:49 AM IST

ಸಾರಾಂಶ

ಜಾನಪದ ಹಿನ್ನೆಲೆ ಹೊಂದಿರುವ ಮಣ್ಣೆತ್ತಿನ ಅಮವಾಸ್ಯೆಯನ್ನು ಉತ್ತರ ಕರ್ನಾಟಕದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಿಗದಿತ ಸಮಯದಲ್ಲಿ ಮುಂಗಾರು ಮಳೆ ಬಂದಿರುವುದರಿಂದ ಬಸವನ ಪೂಜೆ ಮಾಡಿ ಉತ್ತಮ ಮಳೆ, ಬೆಳೆ ಬರುವಂತೆ ಕರುಣಿಸಯ್ಯ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.

ಲಕ್ಷ್ಮಣ ಹಿರೇಕುರುಬರ

ಕನ್ನಡಪ್ರಭ ವಾರ್ತೆ ತಾಂಬಾ

ಜಾನಪದ ಹಿನ್ನೆಲೆ ಹೊಂದಿರುವ ಮಣ್ಣೆತ್ತಿನ ಅಮವಾಸ್ಯೆಯನ್ನು ಉತ್ತರ ಕರ್ನಾಟಕದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಿಗದಿತ ಸಮಯದಲ್ಲಿ ಮುಂಗಾರು ಮಳೆ ಬಂದಿರುವುದರಿಂದ ಬಸವನ ಪೂಜೆ ಮಾಡಿ ಉತ್ತಮ ಮಳೆ, ಬೆಳೆ ಬರುವಂತೆ ಕರುಣಿಸಯ್ಯ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.

ಅನ್ನ ಕೊಡುವ ಭೂತಾಯಿ ನೆನೆಯಲು ನೇಗಿಲಯೋಗಿ, ವರ್ಷದಲ್ಲಿ ಐದು ಬಗೆಯಲ್ಲಿ ಭೂದೇವಿಯ ಆರಾಧನೆಯನ್ನು ಮಾಡುತ್ತಾನೆ. ಅದರಲ್ಲಿ ಮೊದಲ ಮಣ್ಣಿನ ಪೂಜೆಯೇ ಈ ಮಣ್ಣಿತ್ತಿನ ಅಮವಾಸ್ಯೆ. ಜ್ಯೇಷ್ಠ ಬಹುಳ ಅಮವಾಸ್ಯೆಯನ್ನು ಮಣ್ಣೆತ್ತಿನ ಅಮವಾಸ್ಯೆ ಎಂದು ಆಚರಿಸುವುದು ವಾಡಿಕೆ. ಒಂದು ಸುತ್ತಿನ ಕ್ವಾಟಿ ಅದರಾಗ ಚಂದ ಕೂಂತಾನ ಬಸವ, ಬಸವನ ಪಾದಕ ಹೊಸಮುತ್ತು, ಹೊಸಗೆಜ್ಜೆ, ಬಸವಕ ಬಸವೆನ್ನಿರೆ ಬಸವನ ಪಾದಕ ಶರಣೆನ್ನಿರೆ ಹೀಗೆ ಹತ್ತು ಸುತ್ತಿನ ಕೋಟೆಯಲ್ಲಿ ಒಂದೊಂದು ರೂಪ ಧರಿಸಿ ಬಸವನ ಮಹಾರೂಪವನ್ನು ವರ್ಣಿಸುವ ಸಂಪ್ರದಾಯದ ಹಾಡುಗಳು ಜನರ ನಾಲಿಗೆ ಮೇಲೆ ಇನ್ನೂ ಕುಣಿಯುತ್ತಲೆ ಇವೆ.

ಇಂಥ ವಿಶಿಷ್ಟ ಮಣ್ಣೆತ್ತಿನ ಅಮವಾಸ್ಯೆಯಂದು ಪೂಜಿಸಲ್ಪಡುವ ಬಸವಣ್ಣನನ್ನು ಆಯಾ ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶದಲ್ಲಿರುವ ಕುಂಬಾರ ಕುಂಟುಂಬಗಳು ತಲೆಮಾರುಗಳಿಂದಲೂ ತಯಾರಿಸುತ್ತ ಬಂದಿದ್ದಾರೆ. ಈಚೆಗೆ ಕೆಲ ವರ್ಷಗಳಿಂದ ಹಲವು ಮನೆತನದವರು ಇದರಿಂದ ದೂರ ಸರಿದಿದ್ದರು ಇನ್ನೂ ಅನೇಕರು ಹಿಂದಿನ ಸಂಪ್ರದಾಯ ಮುರಿಯಬಾರದು ಎಂಬ ಕಾರಣಕ್ಕೆ ಈ ಕಾಯಕ ಮುಂದುವರೆಸಿಕೊಂಡು ಬಂದಿದ್ದಾರೆ.