ಸಾರಾಂಶ
ಕೂಡ್ಲಿಗಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ಸಮಗ್ರ ಅಭಿವೃದ್ಧಿಗೆ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ₹3 ಕೋಟಿ ಯೋಜನೆ ರೂಪಿಸಿದ್ದಾರೆ ಎಂದು ಪಪಂ ನೂತನ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಹೇಳಿದರು.
ಅವರು ಬುಧವಾರ ಶಾಸಕರ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೆ.ನಾಗನಗೌಡ ಅವರೊಂದಿಗೆ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.ಅಂಬೇಡ್ಕರ್ ನಂಗರದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಎಲ್ಲೆಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪರಿಶೀಲಿಸಿದರು. ಅಂಬೇಡ್ಕರ್ ನಗರದಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈಗಾಗಲೇ ₹3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಅಂಬೇಡ್ಕರ್ ನಗರ ಸೇರಿದಂತೆ ಅಕ್ಕ ಪಕ್ಕದ ವಾರ್ಡ್ ಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.
ಪ್ರತಿ ವಾರ್ಡ್ಗೂ ಸೌಕರ್ಯ:ಪಟ್ಟಣದ ಪ್ರತಿ ವಾರ್ಡಿನಲ್ಲಿಯೂ ಕುಡಿಯುವ ನೀರು, ಚರಂಡಿ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲುಶಾಸಕರು ಬದ್ದರಾಗಿದ್ದಾರೆ ಕೊಳಚೆ ನಿರ್ಮೂಲ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದ್ದು, ಬಡವರು ಇದರ ಲಾಭ ಪಡೆಯಬೇಕು ಎಂದು ನಿವಾಸಿಗಳಿಗೆ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ. ನಾಗನಗೌಡ, ಮುಖಂಡರಾದ ಎಸ್.ದುರುಗೇಶ್, ಪ್ರಭಾಕರ್, ನಲ್ಲಮುತ್ತಿ ದುರುಗೇಶ್, ಕೊಂಡಯ್ಯರ ರಾಘವೇಂದ್ರ ಇದ್ದರು.