ಸಾರಾಂಶ
ಅಂಬೇಡ್ಕರ್ ಭಾರತದ ಶ್ರೇಣಿಕೃತ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದಾರೆ. ಅವರ ಸಾಧನೆ ಮತ್ತು ಪರಿಶ್ರಮ ಬಹಳ ದೊಡ್ಡದಿದೆ. ಅವರು ಶಿಕ್ಷಣ ಪಡೆಯುವಾಗ ಕುಡಿಯುವ ನೀರು ಕೂಡ ಕೊಡುತ್ತಿರಲಿಲ್ಲ. ಅವಮಾನ, ಅಸ್ಪೃಶ್ಯತೆ, ಜಾತಿ ತಾರತಮ್ಯ ಅನುಭವಿಸಿದ್ದಾರೆ.
ಕೊಪ್ಪಳ:
ವಿದ್ಯಾರ್ಥಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಹೇಳಿದರು.ನಗರದ ಸರ್ಕಾರಿ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಾಲೇಜಿನ ಸಾಂಸ್ಕೃತಿಕ ಘಟಕ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ ಓದು-ಬರಹ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಅಂಬೇಡ್ಕರ್ ಭಾರತದ ಶ್ರೇಣಿಕೃತ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದಾರೆ. ಅವರ ಸಾಧನೆ ಮತ್ತು ಪರಿಶ್ರಮ ಬಹಳ ದೊಡ್ಡದಿದೆ. ಅವರು ಶಿಕ್ಷಣ ಪಡೆಯುವಾಗ ಕುಡಿಯುವ ನೀರು ಕೂಡ ಕೊಡುತ್ತಿರಲಿಲ್ಲ. ಅವಮಾನ, ಅಸ್ಪೃಶ್ಯತೆ, ಜಾತಿ ತಾರತಮ್ಯ ಅನುಭವಿಸಿದ್ದಾರೆ. ಇದಕ್ಕೆಲ್ಲ ಪರಿಹಾರವೆಂದರೆ ವಿದ್ಯೆ ಪಡೆಯಬೇಕೆಂದು ಅವರ ತಂದೆ ಅವರಿಗೆ ಹೇಳಿದ್ದರು ಎಂದ ಅವರು, ನಮಗೆ ಹಸಿವಿನ ದಾಹಕ್ಕಿಂತ ವಿದ್ಯೆಯ ಜ್ಞಾನದ ದಾಹ ಹೆಚ್ಚಾಗಬೇಕು ಎಂದು ಕರೆ ನೀಡಿದರು.ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡಿ, ಅಂಬೇಡ್ಕರ್ ಎಲ್ಲರಿಗೂ ಸಮಾನ ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುನ್ನೆಲೆಗೆ ಬರಬೇಕು ಎಂದರು.
ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವಿಠೋಬ ಎಸ್. ಮಾತನಾಡಿ, ಸಮಾನತೆ, ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ಭಾರತ ಅಭಿವೃದ್ಧಿಯಾಗಲು ಸಂವಿಧಾನ ಕಾರಣ ಎಂದರು.ಕಾಲೇಜಿನಲ್ಲಿ ಅಂಬೇಡ್ಕರ್ ಅವರ ಬದುಕು-ಬರಹ ಕುರಿತು ಪ್ರಬಂಧ, ಭಾಷಣ, ರಸಪ್ರೆಶ್ನೆ ಮತ್ತು ಸ್ವ-ರಚಿತ ಕವನ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಣ ಪ್ರೇಮಿ ಬಿ.ಜಿ. ಕರಿಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕ ಡಾ. ಹುಲಿಗೆಮ್ಮ, ಐಕ್ಯೂಎಸಿ ಸಂಚಾಲಕ ಡಾ. ಅಶೋಕ ಕುಮಾರ, ಉಪನ್ಯಾಸಕ ಡಾ. ಪ್ರದೀಪ ಕುಮಾರ, ಡಾ. ಮಲ್ಲಿಕಾರ್ಜುನ, ಡಾ. ನರಸಿಂಹ, ಸುಮಿತ್ರಾ, ಶುಭ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಂಕಟೇಶ ಹೊಸಮನಿ ಮತ್ತು ಶಂಕರಪ್ಪ ನಿರೂಪಿಸಿದರು. ಅಂಬೇಡ್ಕರ್ ಕ್ರಾಂತಿ ಗೀತೆಗಳನ್ನು ಸಿದ್ದಪ್ಪ ಕಲಾಲ್ ಬಂಡಿ, ಶುಖಮುನಿ ಗಡಗಿ, ವೆಂಕಟೇಶ ಹೊಸಮನಿ, ಶಶಿಕುಮಾರ ಮನ್ನಾಪುರ ಹಾಡಿದರು.