ಸಾರಾಂಶ
ಸಂವಿಧಾನ ರಕ್ಷಕ್ ಅಭಿಯಾನ । ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವಿಭಾಗದಿಂದ ಆಯೋಜನೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಗೋಡ್ಸೆ ಪೂಜೆ ನಡೆಯುವ ಈ ಹೊತ್ತಿನಲ್ಲಿ ಡಾ.ಅಂಬೇಡ್ಕರ್ ಮರೆಯಾಗುತ್ತಿದ್ದಾರೆ. ಹೀಗಾಗಿ ನಮ್ಮ ಸಂವಿಧಾನವನ್ನು ನಾವೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ಸಿನ ಹಿಂದುಳಿದ ವರ್ಗ, ಪ.ಜಾ., ಪ.ಪಂ.ಅಲ್ಪಸಂಖ್ಯಾತರ ವಿಭಾಗಗಳ ವತಿಯಿಂದ ಆಯೋಜಿಸಿದ್ದ ಸಂವಿಧಾನ ರಕ್ಷಕ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ತಂದೆ-ತಾಯಿ, ಗುರು ಸ್ಥಾನದಲ್ಲಿರುವ ಸಂವಿಧಾನವನ್ನೇ ತಿದ್ದುಪಡಿ ಮಾಡುವ ಹುನ್ನಾರಗಳು ಈಗಾಗಲೇ ನಡೆಯುತ್ತಿವೆ. ಹಾಗಾಗಿ ಪವಿತ್ರ ಸಂವಿಧಾನವನ್ನು ಅಪವಿತ್ರಗೊಳಿಸುವ ಮೊದಲೇ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಂಡಿದೆ. ಸಂವಿಧಾನದ ರಕ್ಷಣೆ ನಮ್ಮ ಹೊಣೆ ಎಂದುಕೊಂಡಿದ್ದೆವೆ. ಈ ಹಿನ್ನೆಲೆಯಲ್ಲಿ ಸಂವಿಧಾನ ರಕ್ಷಕ್ ಅಭಿಯಾನ ರಾಜ್ಯದೆಲ್ಲೆಡೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬ್ಲಾಕ್ ಮಟ್ಟದಲ್ಲಿಯೂ ಕೂಡ ಇದು ನಡೆಯಬೇಕು ಎಂದು ಹೇಳಿದರು.ಶಾಲಾ ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸುವ ಹಿನ್ನೆಲೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನದ ಓದನ್ನು ಕಡ್ಡಾಯಗೊಳಿಸುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಪಠ್ಯ ಪುಸ್ತಕಗಳಲ್ಲಿ ಕೇಸರಿಕರಣವಾಗಿದ್ದನ್ನು ನಾನು ಸಚಿವನಾದ ತಕ್ಷಣ ತೆಗೆದು ಹಾಕಿದ್ದೇನೆ. ಸಂವಿಧಾನದ ಪ್ರಕಾರ ನಾವೆಲ್ಲರೂ ಒಂದೇ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಮಾತನಾಡಿ, ನಮ್ಮ ಸಂವಿಧಾನವನ್ನು ಅಂಬೇಡ್ಕರ್ ಸೇರಿದಂತೆ ಎಲ್ಲ ಸದಸ್ಯರು ಅಧ್ಯಯನ ಮಾಡಿ ರಚಿಸಿದ್ದಾರೆ. ಭಾರತದ ಸಂವಿಧಾನವೇ ಶ್ರೇಷ್ಠ ಎಂದು ಜಗತ್ತಿನಲ್ಲಿಯೇ ಹೆಸರಾಗಿದೆ. ಆದರೆ ಇಂಥಹ ಸಂವಿಧಾನವನ್ನು ಈಗ ಬಿಜೆಪಿಯವರು ಅವಮಾನ ಮಾಡತೊಡಗಿದ್ದಾರೆ ಎಂದು ದೂರಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಡಾ.ಶ್ರೀನಿವಾಸ್ ಕರಿಯಣ್ಣ, ಕಲಿಂ ಪಾಶಾ, ಶಿವಕುಮಾರ್, ರವಿಕುಮಾರ್, ಎಸ್.ಪಿ.ಶೇಷಾದ್ರಿ, ಎಚ್.ಸಿ.ಯೋಗೀಶ್, ರಮೇಶ್ ಶಂಕರಘಟ್ಟ, ಸಿ.ಎಸ್.ಚಂದ್ರಭೂಪಾಲ್, ರಮೇಶ್ ಇಕ್ಕೇರಿ, ಜಿ.ಡಿ.ಮಂಜುನಾಥ್, ಉಮಾಪತಿ, ವಿಜಯಕುಮಾರ್ , ನಾಗರಾಜ್ ಕಂಕಾರಿ, ಸುವರ್ಣ ನಾಗರಾಜ್, ಭಾರತಿ ರಾಮಕೃಷ್ಣ, ಹರ್ಷಿತ್ ಗೌಡ, ನಗರದ ಮಹಾದೇವಪ್ಪ, ಮಂಜುನಾಥ ಬಾಬು, ವಿಜಯಲಕ್ಷ್ಮೀ ಪಾಟೀಲ್ ಮತ್ತಿತರರು ಇದ್ದರು.
‘ಮನುಷ್ಯನನ್ನು ಉತ್ತಮನಾಗಿಸುವುದೇ ಸಂವಿಧಾನ’
ಮನುಷ್ಯನನ್ನು ಉತ್ತಮ ಮನುಷ್ಯನನ್ನಾಗಿಸುವುದೇ ಸಂವಿಧಾನದ ಮುಖ್ಯ ಉದ್ದೇಶ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಜಿ. ವೆಂಕಟೇಶ್ ಹೇಳಿದರು.ಸಂವಿಧಾನ ರಕ್ಷಕ್ ಅಭಿಯಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಸಂವಿಧಾನ ಎಂದು ಕೆಡುಕು ಉಂಟುಮಾಡುವುದಿಲ್ಲ. ಆದರೆ ಅದನ್ನು ಮನುಷ್ಯರಾದ ನಾವು ಗೌರವಿಸಬೇಕು. ಸ್ವಾತಂತ್ರ್ಯ ಸಮಾನತೆ ಮಾತೃತ್ವದ ಮುಖ್ಯ ತತ್ವಗಳು ಇಲ್ಲಿವೆ. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಆರ್. ಅಂಬೇಡ್ಕರ್ ಭಾರತ ದೇಶಕ್ಕೆ ಒಂದು ಉತ್ತಮ ಸಂವಿಧಾನವನ್ನು ನೀಡಿದ್ದಾರೆ. ಇದು ಮನುಷ್ಯರ ಮಾನವಿಯತೆಯನ್ನು ಪ್ರತಿಬಿಂಬಿಸುವ ಸ್ವರೂಪವು ಆಗಿದೆ ಎಂದರು.
ಸಂವಿಧಾನವನ್ನು ಸಂವಿಧಾನವೇ ರಕ್ಷಣೆ ಮಾಡಿಕೊಳ್ಳುತ್ತದೆ. ಮೂಲಭೂತ ಉದ್ದೇಶಗಳಿಗೆ ಯಾವುದೇ ಚ್ಯುತಿಯಾಗದಂತೆ ಸಂವಿಧಾನವನ್ನು ಬದಲಾವಣೆ ಮಾಡಬಹುದಾಗಿದೆ ಎಂದರು.