ಸಾರಾಂಶ
- ನ್ಯಾಮತಿ ತಾಲೂಕು ಕಚೇರಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅಭಿಮತ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ಡಾ.ಭೀಮರಾವ್ ಅಂಬೇಡ್ಕರ್ ದೇಶದ ರಾಜಕಾರಣಿ, ದಲಿತರ ದೂತ, ದಮನಿತ ವರ್ಗದ ಹೋರಾಟಗಾರರಾಗಿ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ನಿರ್ಮೂಲನೆ ಅಪಾರ ಶ್ರಮದ ಮೂಲಕ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಭಾರತದಲ್ಲಿ ಜಾತಿ ವರ್ಗ ಮತ್ತು ಲಿಂಗಭೇದಗಳು ಹರಡಿವೆ ಎಂಬದು ಅವರು ಅರಿತಿದ್ದರು. ಜನರು ತಮ್ಮ ಬಣ್ಣ, ಜಾತಿ ಮತ್ತು ಧರ್ಮದ ತಾರತಮ್ಯ ಲೆಕ್ಕಿಸದೇ ಸ್ವತಂತ್ರವಾಗಿ ಬದಕಲು ಪ್ರೇರೇಪಿಸಿದವರು ಡಾ.ಅಂಬೇಡ್ಕರ್. ಸ್ವಾತಂತ್ರ್ಯಪೂರ್ವದಲ್ಲಿ ಶೋಷಿತರ ಧ್ವನಿಯಾಗಿ ಅವರಿಗೆ ಸ್ವಾಭಿಮಾನದ ಬದುಕು ಸಿಗಬೇಕೆಂದು ಅನಿಷ್ಟ ಪದ್ಧತಿ ಅನಾಚಾರ ಖಂಡಿಸಿದವರು. ಸ್ವಾತಂತ್ರ್ಯಾ ನಂತರ ಭಾರತ ಯಾವ ತಳಹದಿಯ ಸಿದ್ಧಾಂತದ ಮೇಲೆ ಕಾನೂನುಗಳನ್ನು ಮಾಡಿ ದೇಶವನ್ನು ಮುನ್ನಡೆಸಬೇಕೆಂದು ಯೋಚಿಸಿ ಪ್ರಬಲ ಸಂವಿಧಾನ ರಚಿಸಿದರು. ಸಂವಿಧಾನ ರಚನೆಗಾಗಿ ದೇಶದ ಮೂಲೆ ಮೂಲೆಗೂ ಸಂಚರಿಸಿ, ಇಡೀ ವಿಶ್ವದ ಸಂವಿಧಾನಗಳನ್ನು ಓದಿ, ಅರ್ಥೈಸಿಕೊಂಡು ಶ್ರೇಷ್ಠ ಸಂವಿಧಾನ ರಚಿಸಿದ್ದರು ಎಂದರು.ಡಾ.ಜಗಜೀವನ್ ರಾಮ್ ಅಸ್ಪೃಶ್ಯತೆ ನಿವಾರಣೆ ಹೋರಾಟಗಾರ. ಅವರು ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ದೇಶದ ಮೊದಲ ಉಪ ಪ್ರಧಾನಿಯಾಗಿ ಮಹತ್ತರ ಕೊಡುಗೆ ನೀಡಿದ್ದಾರೆ. ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಸಂವಿಧಾನ ರಚನಾ ಸಭೆ ಸದಸ್ಯರಾಗಿದ್ದರು ಎಂದು ಶಾಸಕರು ಹೇಳಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಎಚ್.ಬಿ. ಗೋವಿಂದಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಮಾ, ಹಿಂದುಳಿದ ವರ್ಗಗಗಳ ಇಲಾಖೆಯ ಮೃತ್ಯುಂಜಯ ಸ್ವಾಮಿ, ಪ.ಪಂ. ಮುಖ್ಯಾಧಿಕಾರಿ ಪಿ.ಗಣೇಶ್ ರಾವ್, ತಾ.ಪಂ. ಇಒ ರಾಘವೇಂದ್ರ, ಬೆಸ್ಕಾಂನ ಶ್ರೀನಿವಾಸ್ ಬಿ.ಕೆ., ಸಮಾಜದ ಅದ್ಯಕ್ಷರು, ಮುಖಂಡರು, ಪದಾಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು. ಕಚೇರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.ಕಾರ್ಯಕ್ರಮಕ್ಕೂ ಮುನ್ನ ಡಾ.ಅಂಬೇಡ್ಕರ್ ಹಾಗೂ ಡಾ.ಜಗಜೀವನ್ ರಾಮ್ ಭಾವಚಿತ್ರಗಳೊಂದಿಗೆ ಪಟ್ಟಣದ ಕಲ್ಮಠದಿಂದ ಗಾಂಧಿ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ತಾಲೂಕು ಕಚೇರಿ ಆವರಣದವರೆಗೂ ಮೆರವಣಿಗೆ ನಡೆಯಿತು.
- - -(ಫೋಟೋ):
- ಡಾ.ಅಂಬೇಡ್ಕರ್, ಡಾ.ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಗಣ್ಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.