ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಅದ್ಧೂರಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಹತ್ವದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ನಗರಸಭೆ ಸಭಾಂಗಣದಲ್ಲಿ ನಗರಸಭೆ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿ ಆಯೋಜನೆ ಕುರಿತ ಪೂರ್ವಭಾವಿ ಸಭೆಯಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು ನೀಡಿದ ಸಲಹೆಗಳನ್ನು ಸ್ವೀಕರಿಸಿದ ಅಧ್ಯಕ್ಷ ಕೆ.ಶೇಷಾದ್ರಿರವರು ನಗರಸಭೆ ವತಿಯಿಂದ ಹಬ್ಬದ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಗೌರವ ಸಲ್ಲಿಸುವ ನಿರ್ಧಾರ ಪ್ರಕಟಿಸಿದರು.ಈ ವೇಳೆ ಕೆ.ಶೇಷಾದ್ರಿ ಮಾತನಾಡಿ, ವಿಶ್ವಕಂಡ ಮಾನವತಾವಾದಿ ಅಂಬೇಡ್ಕರ್ ಅವರ ವಿಚಾರಗಳನ್ನು ಜನರಿಗೆ ತಿಳಿಸುವ ಸಲುವಾಗಿ ನಗರಸಭೆಯ ಮೂಲಕವೇ ಜಯಂತಿ ಆಚರಣೆಗೆ ಉದ್ದೇಶಿಸಲಾಗಿದೆ. ಇದಕ್ಕಾಗಿ 2025-26ನೇ ಸಾಲಿನ ನಗರಸಭೆಯ ಆಯವ್ಯಯದಲ್ಲಿ 5 ಲಕ್ಷ ರು. ಮೀಸಲಿಡಲಾಗಿದೆ. ಪೂರ್ವ ಭಾವಿ ಸಭೆಯಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ಕ್ರೂಢೀಕರಿಸಿ ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮರಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ. ಅಂತಹ ಮೇರು ವ್ಯಕ್ತಿತ್ವದ ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಆಚರಣೆಯ ಸಂಬಂಧ ಸಲಹೆಗಳನ್ನು ನೀಡಿದರು.ಸಮತಾ ಸೈನಿಕ ದಳ ಕಾರ್ಯಾಧ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ಅಂಬೇಡ್ಕರ್ ಜಯಂತಿ ಸಮಾರಂಭದ ವೇದಿಕೆಗೆ ಕವಿ ಸಿದ್ದಲಿಂಗಯ್ಯರವರ ಹೆಸರಿನ್ನಿಡಬೇಕು. ಎಸ್ಸೆಸ್ಸೆಸ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮಕ್ಕಳನ್ನು ಅಭಿನಂದಿಸುವಂತೆ ಸಲಹೆ ನೀಡಿದರು. ಮುಖಂಡ ಡಾ.ರವಿಕುಮಾರ್ ರವರು, ಅಂಬೇಡ್ಕರ್ ರವರ ವೈವಿಧ್ಯಮಯ ಭಾವಚಿತ್ರವಿರುವ ಸಾಕ್ಷ್ಯಚಿತ್ರ ಹಾಗೂ ವಸ್ತು ಪ್ರದರ್ಸನ ಆಯೋಜನೆ ಮಾಡಬೇಕೆಂದರೆ ಹೇಳಿದರೆ, ಮತ್ತೊಬ್ಬ ಮುಖಂಡ ಶಿವಲಿಂಗಯ್ಯ, ಅಂಬೇಡ್ಕರ್ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಕರೆತರುವಾಗ ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕುವ ವ್ಯವಸ್ಥೆ ಮಾಡಬೇಕು ಎಂದರು.ಮುಖಂಡ ಶಿವಶಂಕರ್ ಮಾತನಾಡಿ, ನೂರು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸುವ ಜೊತೆಗೆ ಐಎಎಸ್ , ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು ಎಂದರೆ, ರಾಜ್ಯ ಪೌರನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ್, ನಗರಸಭಾ ಕಚೇರಿಯೂ ಇರುವ ರಸ್ತೆಗೆ ಹಾಗೂ ಮುಖಂಡ ನಿಖಿಲ್ ಸಜ್ಜೆನಿಂಗಯ್ಯರವರು ಜಿಲ್ಲಾಕ್ರೀಡಾಂಗಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರನ್ನು ನಾಮಕರಣ ಮಾಡುವಂತೆ ಆಗ್ರಹಿಸಿದರು.ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷೆ ಆಯಿಷಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಪಾಷ, ಆಯುಕ್ತ ಡಾ.ಜಯಣ್ಣ, ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಶಿವಸ್ವಾಮಿ (ಅಪ್ಪಿ), ದೌಲತ್ ಷರೀಪ್, ಅಜ್ಮತ್, ನರಸಿಂಹ, ಸಮದ್, ಗಿರಿಜಮ್ಮ, ಜಯಲಕ್ಷ್ಮಮ್ಮ, ಬೈರೇಗೌಡ, ವಿವಿಧ ಸಮುದಾಯದ ಮುಖಂಡರಾದ ರೈಡ್ ನಾಗರಾಜು, ಡಾ.ಕೂಡ್ಲೂರು ರವಿ, ಗವಿಯಪ್ಪ, ಶೇಖರ್, ಶಿವಲಿಂಗಯ್ಯ, ಸರಸ್ವತಮ್ಮ, ಸಿದ್ದರಾಮು, ಯೋಗಾನಂದ, ಗೋಪಿನಂದನ್, ಲೋಕೇಶ್, ವೆಂಕಟೇಶ್, ಹನುಮಂತು, ಪಾಪಣ್ಣ, ಗುಡ್ಡೆ ವೆಂಕಟೇಶ್, ಹರೀಶ್ ಬಾಲು, ಕುಂಬಾಪುರ ಬಾಬು, ಶ್ರೀನಿವಾಸ್ ಸೇರಿದಂತೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೂಕ್ತ ಸಲಹೆಗಳನ್ನು ನೀಡಿದರು.-------
5ಕೆಆರ್ ಎಂಎನ್ 6.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವ ಭಾವಿ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿದರು.------