ಮುಖ್ಯಪೇದೆ ಅಮಾನತಿಗೆ ಠಾಣೆಗೆ ಮುತ್ತಿಗೆ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಆಟೋದಲ್ಲಿ ಅಂಬೇಡ್ಕರ್‌ ಫೋಟೋ ಹಾಕಿದ್ದಕ್ಕೆ ಪೊಲೀಸರೊಬ್ಬರು ಆಶ್ಲೀಲ ಪದಗಳಿಂದ ಬೈದಿರುವ ಆರೋಪ ಸಂಬಂಧ ಕೃತ್ಯವನ್ನು ಖಂಡಿಸಿ ಪ್ರಗತಿ ಪರ ಸಂಘಟನೆಗಳು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

3 ದಿನಗಳ ಹಿಂದೆ ವಾಹನಗಳ ತಪಾಸಣೆ ಸಮಯದಲ್ಲಿ ಗಿರೀಶ್‌ ಎಂಬುವರಿಗೆ ಸೇರಿದ ಆಟೋ ತಪಾಸಣೆ ಸಮಯದಲ್ಲಿ ಮುಖ್ಯಪೇದೆ ಮಂಜುನಾಥ್‌ ಅವರು ಅಂಬೇಡ್ಕರ್‌ ಫೋಟೋ ಹಾಕಿದ್ದಕ್ಕೆ ನಿಂದಿಸಿದರೆಂದು ಆರೋಪಿಸಿ ಪ್ರತಿಭಟನೆ ನಡೆಸಿ ಕ್ಷಮೆಯಾಚಿಸಬೇಕು ಎಂದು ಮನವಿ ಸಲ್ಲಿಸಿದರು.


ಈ ಸಮಯದಲ್ಲಿ ಜಾರಕಿಹೊಳಿ ಬ್ರಿಗೇಡ್‌ ಗೋವಿಂದರಾಜು ಮಾತನಾಡಿ, ಘಟನೆ ಬಗ್ಗೆ ಖಂಡಿಸಿ ಮುಖ್ಯ ಪೇದೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ದಲಿತ ಮುಖಂಡ ಸುಭಾಷ್‌ ಮಾಡ್ರಹಳ್ಳಿ ಮಾತನಾಡಿ, ಪಟ್ಟಣದಲ್ಲಿ ಗಾಂಜಾ ಮಾರಾಟ, ಜೂಜಾಟ, ಅಕ್ರಮ ಮದ್ಯ ಮಾರಾಟದಂಥ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಅಂಬೇಡ್ಕರ್‌ ಫೋಟೋ ಆಟೋದಲ್ಲಿದ್ದಕ್ಕೆ ಅಶ್ಲೀಲವಾಗಿ ಮಾತನಾಡಿದ ಪೊಲೀಸ್‌ ಮುಖ್ಯ ಪೇದೆ ಕೂಡಲೇ ಕ್ಷಮೆ ಕೋರಬೇಕು ಇಲ್ಲದಿದ್ದಲ್ಲಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಲ್. ಸುರೇಶ್‌ ಮಾತನಾಡಿ, ಪಟ್ಟಣದಲ್ಲಿ ತ್ರಿಬಲ್‌ ರೈಡಿಂಗ್‌, ವಿಮೆ ಇಲ್ಲ, ಎಫ್‌ಸಿ ಇರುವುದಿಲ್ಲ, ಹೆಲ್ಮೆಟ್‌ ಹಾಕಲ್ಲ. ಈ ಬಗ್ಗೆ ತಪಾಸಣೆ ನಡೆಸಿ ದಂಡ ಹಾಕಿ. ಅದನ್ನು ಬಿಟ್ಟು ನಿಂದಿಸುವುದು ಏಕೆ ಎಂದು ಸ್ಥಳೀಯ ಪೊಲೀಸರನ್ನು ಪ್ರಶ್ನಿಸಿದರು.

ಈ ಸಮಯದಲ್ಲಿ ಸಂಘಟನೆಗಳ ಮುಖಂಡರು ಸಲ್ಲಿಸಿದ ಮನವಿ ಸ್ವೀಕರಿಸಿದ ಸಬ್‌ಇನ್ಸ್‌ಪೆಕ್ಟರ್‌ ನಿಮ್ಮ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ಕೂಡಲೇ ತರುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ದಲಿತ ಮುಖಂಡ ಸೋಮಣ್ಣ, ಆಟೋ ಚಾಲಕ ಗಿರೀಶ್‌ ಸೇರಿದಂತೆ ಹಲವರಿದ್ದರು.

---

೪ಜಿಪಟಿ೬

ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಪ್ರಗತಿಪರ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಿದ್ದರು.