ಕನ್ನಡಪ್ರಭ ವಾರ್ತೆ ಮಳವಳ್ಳಿ
ಡಾ.ಬಿ.ಆರ್.ಅಂಬೇಡ್ಕರ್ ಭಾರತದಲ್ಲಿ ಜನಿಸಿ ದೇಶದ ಘನತೆಯನ್ನು ಉತ್ತುಂಗಕ್ಕೆ ಎತ್ತರಿಸಿದ ಮಹಾನ್ ನಾಯಕ ಎಂದು ವಿಶ್ವಮಾನವ ವಿಚಾರ ವೇದಿಕೆ ಅಧ್ಯಕ್ಷ ಬಿ.ಮಹದೇವು ತಿಳಿಸಿದರು.ಪಟ್ಟಣದ ವಿಶ್ವಮಾನವ ವಿಚಾರ ವೇದಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯಲ್ಲಿ ಮಾತನಾಡಿ, ನಮ್ಮ ದೇಶದ ನಾಗರಿಕರಿಗೆ ಗರ್ಭದಿಂದ ಗೋರಿಯವರೆಗೂ ಹಕ್ಕುಗಳನ್ನು ಸ್ಥಾಪಿಸುವ ಮೂಲಕ ಶ್ರೇಷ್ಠ ಸಂವಿಧಾನವನ್ನು ನೀಡಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಇಂತಹ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.
ಅಂಬೇಡ್ಕರ್ ಅವರನ್ನು ಒಂದು ಜಾತಿ ಮತಕ್ಕೆ ಸೀಮಿತಗೊಳಿಸುವ ಕ್ಷುಲ್ಲಕ ಮನಸ್ಥಿತಿಯಿಂದ ಹೊರಬಂದು ವಿಶ್ವಮಾನವರಾಗಿ ನಾವು ನೋಡಬೇಕು. ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನದೊಂದಿಗೆ ಪ್ರಜಾಪ್ರಭುತ್ವಕ್ಕೆ ಭೂನಾದಿ ಹಾಕಿದ ಅಂಬೇಡ್ಕರ್ ಅವರ ಪರಿಶ್ರಮವನ್ನು ನಾವು ಸ್ಮರಿಸಬೇಕು. ಅವರ ವಿಚಾರಧಾರೆಗಳು ಅಳವಡಿಸಿಕೊಂಡು ಅವರ ಕನಸಿನ ಭಾರತ ಕಟ್ಟುವಲ್ಲಿ ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವೇದಿಕೆ ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್, ಸುರೇಶ್, ದಯಾಶಂಕರ್, ಚೇತನ್ ಕುಮಾರ್, ಮಲ್ಲಿಕಾರ್ಜುನಸ್ವಾಮಿ, ಎಮ್ ಇ ಮಹಾದೇವು ಚುಂಚಣ್ಣ, ಪುಟ್ಟಮಂಚಮ್ಮ. ಎಂ.ನಾಗೇಶ್, ಲೋಕೇಶ್, ಮಲ್ಲಿಕಾರ್ಜುನ, ದೊಡ್ಡಮರಿಗೌಡ ಮುಂತಾದವರು ಉಪಸ್ಥಿತರಿದ್ದರು.
ಅಂಬೇಡ್ಕರ್ ಆಶಯಗಳಿಗೆ ಬೆಲೆ ಸಿಗಬೇಕು: ಎಚ್.ಮಂಜುನಾಥ್
ಪಾಂಡವಪುರ:ತುಳಿತಕ್ಕೊಳಗಾದ ಬಡವರು, ಶೋಷಿತರು, ದುರ್ಬಲರನ್ನು ಸಮಾಜದ ಮುಖ್ಯವಾಹಿನಿಗೆ ತಂದಾಗ ಮಾತ್ರ ಅಂಬೇಡ್ಕರ್ ಅವರ ಆಶಯಗಳಿಗೆ ಬೆಲೆ ದೊರೆತಂತಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಹೇಳಿದರು.
ತಾಲೂಕಿನ ಜಕ್ಕನಹಳ್ಳಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು,ಸಮಾಜದಲ್ಲಿ ಯಾರು ಸೌಲಭ್ಯದಿಂದ ವಂಚಿತರಾಗಿದ್ದಾರೋ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಹೋರಾಟವನ್ನು ಡಾ.ಬಿ.ಆರ್.ಅಂಬೇಡ್ಕರ್ ಮಾಡಿ ಅದರಲ್ಲಿ ಸಫಲರಾಗಿದ್ದಾರೆ ಎಂದರು.ಅಂಬೇಡ್ಕರ್ ಹೋರಾಟ, ತತ್ವ, ಸಿದ್ಧಾಂತಗಳನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರು ಮುನ್ನಡೆಯಬೇಕು. ಸೌಲಭ್ಯವನ್ನು ಪಡೆದುಕೊಂಡು ಅರ್ಥಿಕವಾಗಿ ಸದೃಢರಾಗಿರುವವರು ಸಮಾಜದಲ್ಲಿ ಹಿಂದೆ ಉಳಿದಿರುವ ಸೌಲಭ್ಯ ವಂಚಿತರಿಗೆ ಆ ಸೌಲಭ್ಯವನ್ನು ದೊರಕಿಸಿಕೊಟ್ಟು ಅವರನ್ನು ಸಹ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಿದಾಗ ಮಾತ್ರ ಅವರ ಹೋರಾಟಕ್ಕೆ ಫಲಸಿಕ್ಕಂತಾಗುತ್ತಿದೆ ಎಂದರು.ಈ ವೇಳೆ ತಾಪಂ ಮಾಜಿ ಸದಸ್ಯ ಎನ್.ಬಿ.ರಾಮೇಗೌಡ, ಸೋಮಶೇಖರ್, ನಟರಾಜು, ಜವರಯ್ಯ, ಶಂಕರ್, ದೊಡ್ಡವೆಂಕಟಯ್ಯ, ದೇವರಾಜು, ದ್ಯಾವಯ್ಯ, ಹಾಳಪ್ಪ, ಲಿಂಗರಾಜು, ಶಶಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.