ಸಾರಾಂಶ
ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ 134 ನೇ ಜಯಂತಿ, ಬಿಎಸ್ಪಿ ಸಂಸ್ಥಾಪನಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶವನ್ನಾಳಿದ ರಾಷ್ಟ್ರೀಯ ಪಕ್ಷಗಳು ಡಾ. ಬಿ.ಆರ್.ಅಂಬೇಡ್ಕರ್ ಕನಸನ್ನು ನೂಚ್ಚುನೂರು ಮಾಡಿದವು. ಪ್ರತಿಯೊಂದು ಹೆಜ್ಜೆಯಲ್ಲೂ ಅವಮಾನಿಸುವ ಜೊತೆಗೆ ಪರಿಶಿಷ್ಟರನ್ನು ಷಡ್ಯಂತ್ರದಿಂದ ಎತ್ತಿಕಟ್ಟಿ ಮೋಸದ ರಾಜಕಾರಣ ಮಾಡುತ್ತಿವೆ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಝಾಕೀರ್ ಹುಸೇನ್ ಹೇಳಿದರು.ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬಹುಜನ ಸಮಾಜ ಪಾರ್ಟಿ ಶುಕ್ರವಾರ ಆಯೋಜಿಸಿದ್ಧ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಹಾಗೂ ಬಿ.ಎಸ್.ಪಿ. ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರ ಸ್ವಾತಂತ್ರ್ಯವಾಗಿ ಏಳು ದಶಕ ಪೂರೈಸಿದ ಮೇಲೆ ಕಾಂಗ್ರೆಸ್ ಸಂವಿಧಾನ ಹಾಗೂ ಅಂಬೇಡ್ಕರನ್ನು ಅಪ್ಪಿಕೊಳ್ಳುತ್ತಿದೆ. ಬಿಜೆಪಿ ಕೇವಲ ಟೀಕೆ ಟಿಪ್ಪಣಿಗಳಿಗೆ ಸೀಮಿತವಾಗಿದೆ. ಆದರೆ, ಬಿಎಸ್ಪಿ ಸಂಸ್ಥಾಪಕ ಕಾನ್ಸಿರಾಮ್ ದೇಶಾದ್ಯಂತ ಸಂಚರಿಸಿ ಪಕ್ಷ ಸದೃಢಗೊಳಿಸಿ ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಬಿತ್ತುವ ಕೆಲಸ ಮಾಡಿದರು ಎಂದರು.
ಜಾತಿ ತಾರತಮ್ಯ, ಮೇಲು ಕೀಳು ಎಂಬ ಮನೋರೋಗಕ್ಕೆ ಅಂಬೇಡ್ಕರ್ ಸಂವಿಧಾನದಡಿ ಮದ್ದನ್ನು ಕೊಟ್ಟವರು. ಬಡವ, ಶ್ರೀಮಂತ ಎಂಬ ಬೇದಭಾವ ದೂರಾಗಿಸಿ, ಮನುಷ್ಯ ಧರ್ಮದ ಮಾನವೀಯ ಮೌಲ್ಯಗಳನ್ನು ಉಣ ಬಡಿಸಿದವರು. ಹೀಗಾಗಿಯೇ ವಿಶ್ವಾದ್ಯಂತ ಅಂಬೇಡ್ಕರ್ಗೆ ಅತಿಹೆಚ್ಚು ಮನ್ನಣೆ ಧಕ್ಕಲು ಕಾರಣವಾಗಿದೆ ಎಂದು ಹೇಳಿದರು.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಜನತೆಗೆ ತಲುಪಿಸಲು ಕ್ರಾಂತಿಕಾರಿ ಚಳುವಳಿ ಮತ್ತು ದೇಶಾದ್ಯಂತ ಕಾನ್ಸಿರಾಮ್ ಸಂಚರಿಸಿ ಜೀವನಚರಿತ್ರೆ ತೆರೆದಿಟ್ಟರು. ಅಧಿಕಾರದಿಂದ ಮಾತ್ರ ಬಹುಸಂಖ್ಯಾತರ ಏಳಿಗೆಯಾಗಲಿದೆ ಎಂದು ಬಿಎಸ್ಪಿ ಪಕ್ಷ ವನ್ನು ಸ್ಥಾಪಿಸಿ, ಸಂಘಟಿಸಿ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದು ಭೂ ರಹಿತರು, ಅಲ್ಪಸಂಖ್ಯಾತರಿಗೆ ನೆರವಾದರು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಮನುವಾದಿಗಳು ರಾಮ, ರಾಮ ಎಂದರೆ. ನಮ್ಮ ಕಾರ್ಯಕರ್ತರು ಕಾನ್ಸಿರಾಮ ನಾಮ ಜಪಿಸಬೇಕು. ನೌಕರಿ, ಕುಟುಂಬ, ಐಷರಾಮಿ ಜೀವನ ತ್ಯಜಿಸಿ, ಶೋಷಿತರ ಪರವಾಗಿ ನಿಂತ ಕಾನ್ಸಿರಾಮ್ ಅತಿದೊಡ್ಡ ರಾಜಕೀಯ ಆಂದೋಲನಕ್ಕೆ ಕಾರಣೀಭೂತರು ಎಂದು ತಿಳಿಸಿದರು.ಅಂಬೇಡ್ಕರ್ ಸಿದ್ಧಾಂತ, ಬುದ್ಧನ ಅಶೋತ್ತರಗಳನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ಕಾನ್ಸಿರಾಮ್ ವಹಿಸಿದ್ದರು. ಪ್ರತಿ ಹೆಜ್ಜೆಯಲ್ಲೂ ಅಂಬೇಡ್ಕರ್ ಕನಸನ್ನು ಈಡೇರಿಸುವುದೇ ದೊಡ್ಡ ಗುರಿಯಾಗಿತ್ತು. ಮತ ನಮ್ಮದು, ಅಧಿಕಾರ ನಿಮ್ಮದು ಎಂಬುದರ ವಿರುದ್ಧ ಸಿಡಿದೆದ್ದು, ಮತ ನಮ್ಮದು, ಅಧಿಕಾರ ನಮ್ಮದು ಎಂಬ ಧ್ಯೇಯವನ್ನು ಜನತೆಗೆ ಮುಟ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಸುಧಾ ಮಾತನಾಡಿ, ಸಂವಿಧಾನ ಇಪ್ಪತ್ತು ವರ್ಷಗಳ ಮೀಸಲಾತಿ ನೀಡಿದರೆ ಸಮಾಜದಲ್ಲಿ ಬಡವ, ಶ್ರೀಮಂತರೆಂಬ ಬೇಧವಿಲ್ಲದೇ ಸಮಾನರಾಗಿ ಬದುಕಬಹುದು. ಆದರೆ ಸ್ವಾತಂತ್ರ್ಯಗೊಂಡು ಏಳು ದಶಕ ಪೂರೈಸಿ ದರೂ ಸಮಾನತೆ ದೊರಕಿಲ್ಲ. ಹೀಗಾಗಿ ಮತದಾರರು ಮಿಕ್ಸಿ, ಕುಕ್ಕರ್ ಅಥವಾ ಮದ್ಯಕ್ಕೆ ಸೀಮಿತರಾಗದೇ ಸಮರ್ಥರಿಗೆ ಮತ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್, ದೇಶದಲ್ಲಿ ಜೆಡಿಎಸ್, ಸಮಾಜವಾದಿ, ತೃಣಮೂಲ ಕಾಂಗ್ರೆಸ್, ಡಿಎಂಕೆ ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಕ್ಕೆ ಸೀಮಿತವಾಗಿವೆ. ಆದರೆ, ಏಕಮಾತ್ರ ಪಕ್ಷ ಬಿಎಸ್ಪಿ ಪ್ರಾದೇಶಿಕವಾಗಿ ಉಗಮಿಸಿ, ದೇಶವ್ಯಾಪಿ ಹಬ್ಬಿಕೊಂಡು ಮೂರನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಬೆಳೆಯಲು ಕಾನ್ಸಿರಾಮ್ ಸಂಘಟನೆಯೇ ಕಾರಣ ಎಂದರು.ಕಾರ್ಯಕ್ರಮಕ್ಕೂ ಮುನ್ನ ಪಕ್ಷದ ನೂರಾರು ಕಾರ್ಯಕರ್ತರು ತಾಲೂಕು ಕಚೇರಿಯಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸ ಲಾಯಿತು.ಕಾರ್ಯಕ್ರಮದಲ್ಲಿ ಲೋಕಸಭಾ ಕ್ಷೇತ್ರದ ಬಿಎಸ್ಪಿ ಸಂಯೋಜಕ ಗಂಗಾಧರ್, ಬಿ.ಎಂ.ಶಂಕರ್, ಜಿಲ್ಲಾ ಸಂಯೋಜಕರಾದ ಮಂಜಯ್ಯ, ಕೆ.ಎಂ.ಗೋಪಾಲ, ಉಪಾಧ್ಯಕ್ಷರಾದ ಮಂಜುಳಾ, ಹಾಂದಿ ಬಾಬಣ್ಣ, ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಂಜುನಾಥ್ ಖಜಾಂಚಿ ವಾಹೀದ್ ಖಾನ್, ವಿಧಾನಸಭಾ ಉಸ್ತುವಾರಿಗಳಾದ ಪುಟ್ಟಸ್ವಾಮಿ, ಬಕ್ಕಿ ಮಂಜುನಾಥ್, ನಾರಾಯಣಮೂರ್ತಿ, ಮುಖಂಡರಾದ ವಸಂತ್, ಜಗದೀಶ್, ರಮೇಶ್, ಶೀಲಾ, ವಿಜಯ್, ಚಂದ್ರಶೇಖರ್, ರತ್ನ, ಆನಂದ್ ಉಪಸ್ಥಿತರಿದ್ದರು.18 ಕೆಸಿಕೆಎಂ 3ಚಿಕ್ಕಮಗಳೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ಧ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಬಿ.ಎಸ್.ಪಿ. ಸಂಸ್ಥಾಪನಾ ದಿನಾಚರಣೆಯನ್ನು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಝಾಕೀರ್ ಹುಸೇನ್ ಉದ್ಘಾಟಿಸಿದರು.