ಅಂಬೇಡ್ಕರ್ ಅವರ ವಿಚಾರಧಾರೆಗಳು ಸದಾ ಕಾಲ ಪ್ರಸ್ತುತ: ಜಿಲ್ಲಾಧಿಕಾರಿ ಶಿಲ್ಪಾ ನಾಗ್

| Published : Apr 14 2025, 01:20 AM IST

ಅಂಬೇಡ್ಕರ್ ಅವರ ವಿಚಾರಧಾರೆಗಳು ಸದಾ ಕಾಲ ಪ್ರಸ್ತುತ: ಜಿಲ್ಲಾಧಿಕಾರಿ ಶಿಲ್ಪಾ ನಾಗ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವರ ಒಳಿತಿಗಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ಅವರು ಹೊಂದಿದ್ದ ದೂರದೃಷ್ಟಿ ಚಿಂತನೆಗಳು, ವಿಚಾರಧಾರೆಗಳು ಸದಾ ಕಾಲ ಪ್ರಸ್ತುತವಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ಕನ್ನಡಪ್ರಭ ವಾರ್ತೆಚಾಮರಾಜನಗರ

ಸರ್ವರ ಒಳಿತಿಗಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ಅವರು ಹೊಂದಿದ್ದ ದೂರದೃಷ್ಟಿ ಚಿಂತನೆಗಳು, ವಿಚಾರಧಾರೆಗಳು ಸದಾ ಕಾಲ ಪ್ರಸ್ತುತವಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್‌ರವರ ವಿಚಾರಧಾರೆಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಹೊಂದಿದ್ದ ಸಮಾಜಮುಖಿ ಸರ್ವತೋಮುಖ ಬೆಳವಣಿಗೆಯ ಚಿಂತನೆಗಳು ಎಲ್ಲಾ ಕಾಲಕ್ಕೂ ಅಗತ್ಯವಾಗಿವೆ. ಅಂದೇ ಅವರು ಚಿಂತನೆಯ ಬೀಜಗಳನ್ನು ಮೆದುಳಿನಲ್ಲಿ ಬಿತ್ತಿದ್ದರು. ಅವರ ಸಾಧನೆ ಹೋರಾಟವೆಲ್ಲವನ್ನು ನಾವು ಸದಾ ಸ್ಮರಿಸಬೇಕು ಎಂದು ಹೇಳಿದರು.

ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ದಿನ ನಿತ್ಯವೂ ಕಲಿಯುವುದು ಸಾಕಷ್ಟಿದೆ. ಅಂಬೇಡ್ಕರ್ ಕುರಿತು ಪರಿಪೂರ್ಣವಾಗಿ ಎಲ್ಲವೂ ನನಗೆ ತಿಳಿದಿದೆ ಎಂದೂ ಹೇಳಲೂ ಸಾಧ್ಯವಿಲ್ಲ. ಮಹಾನ್ ಪ್ರತಿಭೆ, ವಿಶ್ವಜ್ಞಾನಿ ಅಂಬೇಡ್ಕರ್ ಬಗ್ಗೆ ಪ್ರತಿನಿತ್ಯವೂ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳಷ್ಟಿವೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ಅವರು ಮಾತನಾಡಿ, ಹಿಂದೆ ಹೆಣ್ಣು ಮಕ್ಕಳು ಅಕ್ಷರದಿಂದ ವಂಚಿತರಾಗಿದ್ದರು. ಮನೆಯ ಕೆಲಸಕ್ಕೆ ಸೀಮಿತರಾಗಿದ್ದ ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದವರು ಅಂಬೇಡ್ಕರ್‌ ಅವರು ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ. ಕಲ್ಯಾಣ ಸಿರಿ ಭಂತೇಜಿ ಅವರು ಮಾತನಾಡಿ, ಶಿಕ್ಷಣದ ಪ್ರತಿರೂಪವಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಜಗತ್ತಿನ ಮುಂದೆ ನಿಂತಿದ್ದಾರೆ. ಶಿಕ್ಷಣದ ಜೊತೆ ಪ್ರಜ್ಞೆ ಸಹ ಅವಶ್ಯಕವಾಗಿದೆ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಅರಿಯುವುದೆ ಪ್ರಜ್ಞೆ. ಮಾನವೀಯತೆ ಮನುಷ್ಯತ್ವವನ್ನು ಗುಣಗಳನ್ನು ಪ್ರತಿಯೊಬ್ಬರು ಹೊಂದಬೇಕಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಟಿ. ಕವಿತಾ ಅವರು ಮಾತನಾಡಿ, ದೇಶ ಕಟ್ಟುವಲ್ಲಿ ಎಲ್ಲರ ಪಾತ್ರ ಇದೆ. ಡಾ. ಬಿ.ಆರ್ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟರು. ನಮಗಿರುವ ಅವಕಾಶಗಳನ್ನು ಬಳಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.

ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಬೌದ್ದ ತಾತ್ವಿಕತೆ ವಿಷಯ ಕುರಿತು ಮಾತನಾಡಿದ ತುಮಕೂರಿನ ಬೌದ್ದ ಚಿಂತಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್ ನಟರಾಜ ಬೂದಾಳು ಅವರು, ಬೌದ್ದ ಧರ್ಮ, ವಿಜ್ಞಾನ, ಪ್ರಜಾಸತ್ತೆಗೆ ಸಮಾನವಾದ ಸಂಬಂಧಗಳಿವೆ. ಸಮಾಜಕ್ಕೆ ಓಳಿತು ಮಾಡಬೇಕೆಂದು ಬೌದ್ದರು ಹೇಳಿದ್ದಾರೆ. ಜಗತ್ತಿನಲ್ಲಿ ಪ್ರಶ್ನಿಸದೇ ಯಾವುದನ್ನು ಒಪ್ಪಿಕೊಳ್ಳಬಾರದು ನನ್ನನೂ ಸೇರಿದಂತೆ ಯಾರನ್ನು ಓಪ್ಪಿಕೊಳ್ಳಬೇಡ ಎಂದು ಬುದ್ದ ಹೇಳಿದ್ದಾರೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್‌ರವರ ಸಾಮಾಜಿಕ ಹೋರಾಟಗಳ ತಾತ್ವಿಕತೆ ಕುರಿತು ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಹಾಗೂ ಗಾಂಧಿ ಭವನದ ನಿರ್ದೇಶಕರಾದ ಪ್ರೊ. ಎಸ್. ನರೇಂದ್ರ ಕುಮಾರ್ ಅವರು ಅಂಬೇಡ್ಕರ್ ಅವರ ಹೋರಾಟಕ್ಕೆ ಬೆನ್ನಲುಬಾಗಿ ನಿಂತಿದ್ದು ಅವರ ಜ್ಞಾನ. ಅವರ ಹೋರಾಟಗಳ ಹಿಂದೆ ಸ್ವಂತ ಅನುಭವ ಇದೆ ದೇಶಗಳಲ್ಲಿ ಶಿಕ್ಷಣ ಪಡೆದರು. ಇಡೀ ಶಿಕ್ಷಣದ ಜ್ಞಾನದ ಅನುಭವಗಳನ್ನು ಬಳಸಿದ್ದು ಇಡೀ ಮಾನವ ಕುಲದ ವಿಮೋಚನೆಗಾಗಿ ಎಂಬುದು ಗಮನಾರ್ಹ ಎಂದರು.

ಇದೆ ವೇಳೆ ೨೦೨೫ನೇ ಸಾಲಿನ ರಾಜ್ಯ ಮಟ್ಟದ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿಗೆ (ಜನಪದ) ಆಯ್ಕೆಯಾಗಿರುವ ಜಿಲ್ಲೆಯ ಹೊನ್ನೂರು ಗೌರಮ್ಮ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊನ್ನೂರು ಗೌರಮ್ಮ ಅವರು ಪ್ರಶಸ್ತಿಗೆ ಗುರುತಿಸಲು ಹಿರಿಯ ಜಾನಪದ ಕಲಾವಿದರಾದ ಸಿ. ಎಂ. ನರಸಿಂಹ ಮೂರ್ತಿ ಅವರು ಕಾರಣರಾಗಿದ್ದಾರೆ. ನನಗೆ ಪ್ರಶಸ್ತಿ ಬಂದಿರುವುದಕ್ಕೆ ಸಂತಸವಾಗಿದೆ. ನನಗೆ ಸ್ವಂತ ಮನೆ ಇಲ್ಲ. ನಿವೇಶನವು ಇಲ್ಲ. ಈ ಸೌಲಭ್ಯವನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.

ಕೂಡಲೇ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ವೇದಿಕೆಯಲ್ಲಿಯೇ ಪ್ರತಿಕ್ರಿಯಿಸಿ ಪ್ರಶಸ್ತಿಯಿಂದ ನಮ್ಮ ಜಿಲ್ಲೆಗೆ ಹೆಮ್ಮೆ ಕೀರ್ತಿ ತಂದಿದ್ದೀರಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದೇನೆ. ಮನೆ ಹಾಗೂ ನಿವೇಶನ ವ್ಯವಸ್ಥೆ ಮಾಡಿಕೊಡಲಿದ್ದೇವೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎನ್. ಮುನಿರಾಜು, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.....