ಅಂಬೇಡ್ಕರ್ ಸದಾ ನೊಂದವರ ಎದೆಯಲ್ಲಿ ನಂದಾದೀಪವಾಗಿ ಪ್ರಕಾಶಿಸುತ್ತಿದ್ದಾರೆ

ಕನ್ನಡಪ್ರಭವಾರ್ತೆ ಮಧುಗಿರಿ

ಎಲ್ಲರೂ ಎಲ್ಲವನ್ನೂ ಪಡೆದು ಸಮ ಸಮಾಜದ ನಿರ್ಮಾಣಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ ಕೊಟ್ಟ ಭಾರತ ರತ್ನ ಅಂಬೇಡ್ಕರ್ ಸದಾ ನೊಂದವರ ಎದೆಯಲ್ಲಿ ನಂದಾದೀಪವಾಗಿ ಪ್ರಕಾಶಿಸುತ್ತಿದ್ದಾರೆ ಎಂದು ಪಿಎಸ್‌ಐ ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಆದಿಜಾಂಭವ ಮಹಾಸಭಾ, ದಲಿತ ಸಾಹಿತ್ಯ ಪರಿಷತ್, ಜೀವಿಕ, ದಲಿತ ಸಂಘಟನೆಗಳಿಂದ ನಡೆದ ಕ್ಯಾಂಡಲ್ ಮಾರ್ಚ್ ನಲ್ಲಿ ಭಾಗವಹಿಸಿ ಮಾತನಾಡಿದರು.

ಲಿಂಗ ಭೇದವಿಲ್ಲದೆ ಮಹಿಳೆಯರು, ಪುರುಷ ಸಮಾಜಕ್ಕೆ ಸರಿ ಸಮಾನದ ಬದುಕುವ ಅವಕಾಶಗಳನ್ನು ಪಡೆದು ಸಮಾಜದ ನವ ನಿರ್ಮಾಣಕ್ಕೆ ತೊಡಗಿದ್ದು, ದೇಶದ ಇತಿಹಾಸಕ್ಕೆ ಹೊಸ ವ್ಯಾಖ್ಯ ಬರೆಯುತ್ತಿದ್ದಾರೆ. ಎಲ್ಲರೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂವಿಧಾನವೇ ಕಾರಣ ಎಂದರು.

ತಹಸೀಲ್ದಾರ್ ರವಿ ಮಾತನಾಡಿ, ವರ್ಗ, ವರ್ಣಗಳೆಲ್ಲದರಲ್ಲೂ ಸರಿ ಸಮಾನತೆ ತರಲು ಶ್ರಮಿಸಿದ ಅಂಬೇಡ್ಕರ್ ಎಲ್ಲರ ಅಂತರಂಗದ ಧ್ವನಿಯಾಗಿದ್ದಾರೆ ಎಂದರು. ದಲಿತ ಸಾಹಿತ್ಯ ಪರಿಷತ್ಯ ಅಧ್ಯಕ್ಷ ಮಹರಾಜು ಮಾತನಾಡಿ, ಅಕ್ಷರದಿಂದ ದೂರ ಉಳಿದಿದ್ದವರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಜ್ಞಾನದ ಕೊಡುಗೆ ನೀಡುತ್ತಿದ್ದಾರೆ ಎಂದರು. ಅಂಬೇಡ್ಕರ್ ವೃತ್ತದ ಸುತ್ತಲೂ ಮಾನವ ಸರಪಳಿ ರಚಿಸಿ ಮೇಣದ ಬತ್ತಿ ಬೆಳಗಿಸಿ ಅಂಬೇಡ್ಕರ್ ಗೀತೆಗಳನ್ನು ಹಾಡಿದರು. ಸರ್ಕಾರಿ ನೌಕರರ ಸಂಘದ ಖಜಾಂಚಿ ನಟರಾಜು, ಕಾರ್ಯದರ್ಶಿ ಮಂಜುನಾಥ್, ಜೀವಿಕ ಸಂಘಟನೆ ಸಂಚಾಲಕ ಡಿ.ಟಿ.ಸಂಜೀವಮೂರ್ತಿ, ದಸಾಪ ಕಾರ್ಯದರ್ಶಿ ರಾಜು, ದಾಸರಹಳ್ಳಿ,ಲೆಕ್ಕಾಧಿಕಾರಿ ರಾಘಲವೇಂದ್ರ, ಜೀವಿಕ ಮಂಜು, ಕೋಟೆಕಲ್ಲಪ್ಪ ಸೇರಿದಂತೆ ಅನೇಕರಿದ್ದರು.