ರಾಮನಗರ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮನಸ್ಸು ಮಾಡಿದ್ದರೆ ವೈಭವಯುತ ಜೀವನ ಸಾಗಿಸಬಹುದಿತ್ತು. ಆದರೆ ದೇಶದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಂಡು ತಮ್ಮ ಬದುಕನ್ನು ಶೋಷಿತರ ಏಳಿಗೆಗೆ ಮೀಸಲಾಗಿಟ್ಟ ಮಹಾನ್ ಮಾನವತವಾದಿ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಬಣ್ಣಿಸಿದರು
ರಾಮನಗರ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮನಸ್ಸು ಮಾಡಿದ್ದರೆ ವೈಭವಯುತ ಜೀವನ ಸಾಗಿಸಬಹುದಿತ್ತು. ಆದರೆ ದೇಶದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಂಡು ತಮ್ಮ ಬದುಕನ್ನು ಶೋಷಿತರ ಏಳಿಗೆಗೆ ಮೀಸಲಾಗಿಟ್ಟ ಮಹಾನ್ ಮಾನವತವಾದಿ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಬಣ್ಣಿಸಿದರು.
ನಗರಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಹೆಣ್ಣು ಮಕ್ಕಳ ಹಕ್ಕುಗಳಿಗೆ ಪ್ರತಿಪಾದಿಸಿದ್ದರು. ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕಿದೆ ಎಂಬ ಕಾನೂನಿಗೆ ಅಂಬೇಡ್ಕರ್ ಅವರೇ ಪ್ರೇರಣೆ. ವಿದ್ಯೆಯಿಂದಲೇ ವ್ಯಕ್ತಿ ಮತ್ತು ಸಮಾಜದ ವಿಕಸನ ಎಂದು ಅಂಬೇಡ್ಕರ್ ಅರಿತಿದ್ದರು. ಅನೇಕ ಪದವಿಗಳನ್ನು ಅವರು ಗಳಿಸಿದ್ದರು. ಬಹುಶಃ ಇಷ್ಟೊಂದು ಪದವಿಗಳನ್ನು ಪಡೆದ ವಿಶ್ವದ ಏಕೈಕ ವ್ಯಕ್ತಿ ಅಂಬೇಡ್ಕರ್ ಅವರಾಗಿದ್ದಾರೆ. ಅವರ ಚಿಂತನೆಗಳು, ಅವರ ಬರವಣಿಗೆಗಳು ಎಂದಿಗೂ ಪ್ರಸ್ತುತವಾಗಿರುತ್ತವೆ ಎಂದು ಹೇಳಿದರು.ನಗರಸಭೆಯ ಆಯುಕ್ತ ಡಾ.ಜಯಣ್ಣ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ವಿಶ್ವ ಜ್ಞಾನ ದಿನ ಎಂದು ಆಚರಿಸುತ್ತವೆ. ಅಂಬೇಡ್ಕರ್ ಅವರಲ್ಲಿ ಅಷ್ಟೊಂದು ಜ್ಞಾನವಿತ್ತು. ಅವರು ಅಷ್ಟು ಜ್ಞಾನಿಗಳಾಗಲು ಅವರಲ್ಲಿ ಸತತವಾಗಿ ಓದುವ ಹವ್ಯಾಸ ಇದ್ದಿದ್ದರಿಂದ ಸಾಧ್ಯವಾಯಿತು. ದೇಶದಲ್ಲಿ ಸಮಸ್ತ ನಾಗರಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಕಾನೂನು ಮೂಲಕ ಮಾತ್ರ ಕಲ್ಪಿಸಲು ಸಾಧ್ಯ ಎಂದು ಅರಿತಿದ್ದ ಅಂಬೇಡ್ಕರ್, ಸಂವಿಧಾನದ ಮೂಲಕ ಅದನ್ನು ಕೊಟ್ಟಿದ್ದಾರೆ. ಅಂಬೇಡ್ಕರ್ ಜೀವನ ಮತ್ತು ಸಂವಿಧಾನದ ಆಶಯಗಳನ್ನು ಎಲ್ಲರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿದರು. ನಗರಸಭೆಯ ಆವರಣದಲ್ಲಿ ಸ್ಥಾಪಿಸಿರುವ ಸಂವಿಧಾನದ ಪ್ರಸ್ತಾವನೆ ಮತ್ತು ಅಂಬೇಡ್ಕರ್ ಪುತ್ಥಳಿಗೆ ಸದಸ್ಯರು ಮತ್ತು ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು.14ಕೆಆರ್ ಎಂಎನ್ 6.ಜೆಪಿಜಿ
ರಾಮನಗರದ ನಗರಸಭೆಯಲ್ಲಿ ಡಾ. ಅಂಬೇಡ್ಕರ್ 135ನೇ ಜಯಂತಿ ಆಚರಿಸಲಾಯಿತು.