ಶಿರಹಟ್ಟಿ: ವ್ಯಕ್ತಿ ಸಮಾಜದ ಸಂಕಲ್ಪವಾಗಿದ್ದು, ಜಾತಿ ದೌರ್ಜನ್ಯಕ್ಕೆ ಸೋತ ಮನಸ್ಸುಗಳ ಕಟ್ಟುವಿಕೆ ಪ್ರಸ್ತುತ ಅಗತ್ಯವಾಗಿದೆ. ಮಹಾಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ ಅವರ ಮಾನವೀಯತೆಯ ಅಂಶಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಹೇಳಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಾತೀಯ ವ್ಯವಸ್ಥೆ ಇನ್ನು ಜೀವಂತವಾಗಿದ್ದು, ಅದನ್ನು ಸಂಪೂರ್ಣ ಬುಡಸಮೇತ ಹೊಡೆದೋಡಿಸುವ ಅಗತ್ಯವಿದೆ. ಪ್ರಮುಖವಾಗಿ ಧರ್ಮ ಸುಧಾರಣೆ ಆದಲ್ಲಿ ಮಾತ್ರ ಎಲ್ಲವೂ ಸುಧಾರಣೆ ಆಗಲು ಸಾಧ್ಯ. ಧರ್ಮಕ್ಕೆ ಸಂಸ್ಕೃತಿ ಅಗತ್ಯ, ಇಲ್ಲವಾದಲ್ಲಿ ಅದು ಬದುಕುವುದು ಸಹ ಕಷ್ಟಸಾಧ್ಯ ಎಂದು ಹೇಳಿದರು.ಮುಖ್ಯವಾಗಿ ನಮ್ಮ ವಿಚಾರಧಾರೆಗಳು ವೈಜ್ಞಾನಿಕ ತಳಹದಿಯಲ್ಲಿ ಅಡಗಿರಬೇಕು. ಸಂಕುಚಿತ ಮನೋಭಾವನೆ ಅಡಗಿರಬಾರದು. ನಮ್ಮ ದೇಶದ ಜನರಲ್ಲಿ ಮನೆಮಾಡಿರುವ ಮೂಢನಂಬಿಕೆ, ಮೌಢ್ಯತೆ ಹಾಗೂ ಶೋಷಿತ ಸಮುದಾಯದ ಜನರ ಪ್ರಗತಿಗೆ ಪೂರಕವಾಗಿ ಅಂಬೇಡ್ಕರ್ ತಮ್ಮ ಜೀವನ ತ್ಯಾಗ ಮಾಡಿದರು. ಶೋಷಿತರ ಬದುಕು ಉದ್ಧಾರವಾಗಬೇಕು ಎಂಬ ಅವರ ಕನಸು ಹಾಗೂ ನಿರೀಕ್ಷೆ ಪೂರ್ಣ ಪ್ರಮಾಣದಲ್ಲಿ ಫಲಿತಾಂಶ ಕಂಡಿಲ್ಲ ಎನ್ನುವ ವಿಷಯ ಖೇದಕರವಾಗಿದೆ ಎಂದರು.
ಮುಖಂಡರಾದ ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ ಮಾತನಾಡಿ, ಡಾ. ಅಂಬೇಡ್ಕರ್ ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಸಂವಿಧಾನದ ಅರ್ಥ ತೋರಿಸಿಕೊಟ್ಟ ಮಹಾನ್ ವ್ಯಕ್ತಿ. ಅಂತಹ ಧೀಮಂತ ವ್ಯಕ್ತಿಯ ತತ್ವಗಳ ಪಾಲನೆ ಹಾಗೂ ಸ್ಮರಣೆ ಕೇವಲ ಜಯಂತಿ ದಿನದಂದು ಮಾತ್ರ ಆಗಿರದೇ ನಿರಂತರವಾಗಿರಬೇಕು. ಎಲ್ಲ ಬಡ ವರ್ಗಗಳ ಅಭ್ಯುಯದಕ್ಕೆ ಕಾರಣವಾದ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಅವರ ಬದುಕಿನ ಮೌಲ್ಯಗಳನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಎಲ್ಲರೂ ಸಮಾನರಾಗಿ ಬದುಕೋಣ ಎಂದು ಹೇಳಿದರು.ಸಮಾಜದ ಮುಖಂಡ ಮಹಾಂತೇಶ ಮಾಳಮ್ಮನವರ ಮಾತನಾಡಿದರು. ಊರಿನ ಪ್ರಮುಖರು ಹಾಗೂ ಯುವಕರು ಉಪಸ್ಥಿತರಿದ್ದರು.