ಬೈಂದೂರು: ಅನಾರೋಗ್ಯ ಪೀಡಿತ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಕ್ತ ರಸ್ತೆ ಇಲ್ಲದೇ ಮನೆಯವರು ಭತ್ತದ ಗದ್ದೆ ಮಧ್ಯದಲ್ಲಿಯೇ ಆಂಬುಲೆನ್ಸ್ ಚಲಾಯಿಸಿದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಇಲ್ಲಿನ ತಲ್ಲೂರು ಗ್ರಾಮದ ಉಪ್ಪಿನಕುದ್ರು ಕಳವಿನ ಬಾಗಿಲು ಎಂಬಲ್ಲಿ ಈ ಘಟನೆ ನಡೆದಿದೆ. ಕಳುವಿನಬಾಗಿಲು ಪ್ರದೇಶದಲ್ಲಿ 35ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಆದರೆ ಈ ಪ್ರದೇಶಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲದೇ ಜನರು ಸಂಕಷ್ಟ ಪಡುತಿದ್ದಾರೆ. ಇತ್ತೀಚೆಗೆ ಸ್ಥಳೀಯರೊಬ್ಬರಿಗೆ ಎದೆ ನೋವು ಕಾಣಿಸಿಕೊಂಡು ಜೀವನ್ಮರಣ ಪರಿಸ್ಥಿತಿ ನಿರ್ಮಾಣವಾಯಿತು, ಆದರೆ ಅವರನ್ನುಆಸ್ಪತ್ರೆಗೆ ಸಾಗಿಸೋಣ ಎಂದರೇ ಮನೆ ತನಕ ಆಂಬುಲೆನ್ಸ್ ಬರುವುದಕ್ಕೆ ರಸ್ತೆ ಇಲ್ಲ. ಕೊನೆಗೆ ಮನೆಯವರು ರೋಗಿಯ ಪ್ರಾಣ ಉಳಿಸಲು ಭತ್ತ ಬೆಳೆದು ನಿಂತಿರುವ ಗದ್ದೆಯಲ್ಲಿಯೇ ಆಂಬುಲೆನ್ಸ್ ತಂದು ಹರಸಾಹಸ ಪಟ್ಟು ರೋಗಿ ಆಸ್ಪತ್ರೆಗೆ ರವಾನಿಸಿದರು. ಇದರಿಂದ ರೃತರು ಕಷ್ಟುಟ್ಟು ಬೆಳೆಸಿದ ಸಾವಿರಾರು ರು. ಭತ್ತ ನಾಶವಾಗಿದೆ. ಗದ್ದೆಯಲ್ಲಿ ಆಂಬುಲೆನ್ಸ್ ಸಂಚರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.