ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ: ಖಂಡನೆ

| Published : Sep 17 2025, 01:07 AM IST

ಸಾರಾಂಶ

ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಮಾರಕವಾಗಿದೆ.

ಶಿರಸಿ: ಸಹಕಾರ ಸಂಘಗಳ ಕಾಯಿದೆಯಲ್ಲಿ ಕರ್ನಾಟಕ ಸರ್ಕಾರವು ಕೆಲವು ತಿದ್ದುಪಡಿ ವಿಧೇಯಕಗಳನ್ನು ಜಾರಿಗೆ ತಂದಿದೆ. ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಮಾರಕವಾಗಿದೆ. ಇದನ್ನು ಖಂಡಿಸಲು ನಗರದ ಟಿಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.ಯಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಜಿ. ಆರ್. ಹೆಗಡೆ ಬೆಳ್ಳೇಕೇರಿ ಮಾತನಾಡಿ, ಸಹಕಾರ ಕಾಯಿದೆಯಲ್ಲಿ ತಂದಿರುವ ಬದಲಾವಣೆಯಿಂದ ಆಗಬಹುದಾದ ಸಂಭಾವ್ಯ ತೊಂದರೆಗಳ ಕುರಿತು ಕರಪತ್ರಗಳನ್ನು ನೀಡುವ ಮೂಲಕ ಸಭಿಕರ ಗಮನ ಸೆಳೆದರು.

ಡೆವೆಲಪ್‌ಮೆಂಟ್‌ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ತಿದ್ದುಪಡಿಯಲ್ಲಿ ಸ್ಪಷ್ಟತೆಯಿಲ್ಲ. ಧನಾತ್ಮಕ ಯಾವುದೇ ಅಂಶಗಳಿಲ್ಲದ ಕಾರಣ ಸಹಕಾರ ಸಂಘಗಳು ವೈಯಕ್ತಿಕ, ಸಾಮೂಹಿಕವಾಗಿ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಾನಳ್ಳಿ ಸೊಸೈಟಿ ಅಧ್ಯಕ್ಷ ಎಂ.ಎ. ಹೆಗಡೆ, ತ್ಯಾಗಲಿ ಸೊಸೈಟಿ ನಿರ್ದೇಶಕ ವಿ.ಎಂ. ಹೆಗಡೆ, ಕುಳವೆ ಸೊಸೈಟಿ ಅಧ್ಯಕ್ಷ ಚಾರುಚಂದ್ರ ಶಾಸ್ತ್ರಿ, ಟಿಆರ್‌ಸಿ ನಿರ್ದೇಶಕ ಶಿವಾನಂದ ಭಟ್ಟ, ಹಾರ್ಸಿಕಟ್ಟ ಸೊಸೈಟಿ ಅಧ್ಯಕ್ಷ ಅನಂತ ಹೆಗಡೆ, ಸೋಂದಾ ಸೊಸೈಟಿ ಅಧ್ಯಕ್ಷ ಗಣಪತಿ ಜೋಶಿ, ಟಿಎಸ್‌ಎಸ್ ನಿರ್ದೇಶಕ ನರಸಿಂಹ ಹೆಗಡೆ, ಟಿಎಂಎಸ್ ಶಿರಸಿ ನಿರ್ದೇಶಕ ಎನ್‌.ಡಿ. ಹೆಗಡೆ, ಟಿಎಂಎಸ್ ಶಿರಸಿ ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ, ಬೈರುಂಭೆ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಗಣಪತಿ ಹೆಗಡೆ, ಸದಸ್ಯರಾದ ನರಸಿಂಹಮೂರ್ತಿ ಹೆಗಡೆ ಅಶೀಸರ ಹೀಗೆ ಹಲವರು ಮೇಲಿನ ವಿಷಯಕ್ಕೆ ಸಂಬಂಧಿಸಿ ವಕೀಲರ ಸೂಕ್ತ ಸಲಹೆ ಪಡೆದು ಮುಂದುವರಿಯುವುದು ಹಾಗೂ ಹೋಬಳಿ, ತಾಲೂಕು, ಜಿಲ್ಲೆ ಮತ್ತು ಇತರ ಜಿಲ್ಲೆವರನ್ನು ಸಂಪರ್ಕಿಸಿ ಪ್ರತಿಭಟಿಸುವ ಕುರಿತು, ಕೇಂದ್ರ ಸರಕಾರ ಮತ್ತು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲದಲ್ಲಿ ಕೇಸ್‌ ದಾಖಲಿಸುವ ಕುರಿತು, ಎಲ್ಲ ಸಹಕಾರಿಗಳು ಸೇರಿ ನಿಯೋಗವನ್ನು ರಚಿಸಿಕೊಂಡು ಸರ್ಕಾರವು ಸಹಕಾರಿ ಕಾಯಿದೆ ತಿದ್ದುಪಡಿಯನ್ನು ಕೈಬಿಡುವಂತೆ ಆಗ್ರಹಿಸಲು ಸಲಹೆ ನೀಡಿದರು.

ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ ಮತ್ತಿಘಟ್ಟ ಅಧ್ಯಕ್ಷತೆ ವಹಿಸಿದ್ದರು. ಟಿ.ಎಸ್‌.ಎಸ್. ಉಪಾಧ್ಯಕ್ಷ ಎಂ.ಎನ್‌. ಭಟ್ಟ, ತೋಟಿಮನೆ ಟಿ.ಎಂ.ಎಸ್‌. ಶಿರಸಿ ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಯಲ್ಲಾಪುರ ಭಾಗದ ಪ್ರತಿನಿಧಿಯಾಗಿ ಸಹ್ಯಾದ್ರಿ ಸೊಸೈಟಿ ಕಳಚೆ ಅಧ್ಯಕ್ಷ ಉಮೇಶ ಭಾಗ್ವತ್‌ ಸಿದ್ದಾಪುರ ಭಾಗದ ಪ್ರತಿನಿಧಿಯಾಗಿ ಎಂ.ಎಲ್‌. ಭಟ್ಟ ಇದ್ದರು. ಸಹಾಯಕ ವ್ಯವಸ್ಥಾಪಕ ಗೋಪಾಲ ಹೆಗಡೆ ಸ್ವಾಗತಿಸಿದರು.