ಸಾರಾಂಶ
ಸೋಮವಾರ ನಿಧನರಾದ ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ ಅವರ ಅಂತ್ಯಕ್ರಿಯೆ ಸಕಲ ಪೋಲಿಸ್ ಗೌರವಗಳೊಂದಿಗೆ ಮಂಗಳವಾರ ಸ್ವಗ್ರಾಮ ಮುದ್ನಾಳ್ದಲ್ಲಿ ನೆರವೇರಿತು. ಯಾದಗಿರಿಯಿಂದ ಸೋಮವಾರ ಸಂಜೆಯೇ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು, ಕುಟುಂಬಸ್ಥರು ದರ್ಶನ ಪಡೆದಿದ್ದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸೋಮವಾರ ನಿಧನರಾದ ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ ಅವರ ಅಂತ್ಯಕ್ರಿಯೆ ಸಕಲ ಪೋಲಿಸ್ ಗೌರವಗಳೊಂದಿಗೆ ಮಂಗಳವಾರ ಸ್ವಗ್ರಾಮ ಮುದ್ನಾಳ್ದಲ್ಲಿ ನೆರವೇರಿತು. ಯಾದಗಿರಿಯಿಂದ ಸೋಮವಾರ ಸಂಜೆಯೇ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು, ಕುಟುಂಬಸ್ಥರು ದರ್ಶನ ಪಡೆದಿದ್ದರು.ಸೋಮವಾರ ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಲು ಅವಕಾಶ ಮಾಡಿಕೊಡಲಾಯಿತು. ನಂತರ ಮುದ್ನಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಟ ಅಂತಿಮ ಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದ ಅಭಿಮಾನಿಗಳು ಸಾಕ್ಷಿಯಾದರು. ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡು ಕಂಬಿನಿ ಮಿಡಿದರು.ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಜಿಲ್ಲಾಧಿಕಾರಿ ಸುಶೀಲಾ, ಎಸ್ಪಿ ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟಪ್ಪಗೊಳ, ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಮುಂತಾದವರು ಅಂತಿಮ ದರ್ಶನ ಪಡೆದು, ಸರಕಾರಿ ಗೌರವಗಳನ್ನು ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಣೆ ಮಾಡಲಾಯಿತು.