ಬೇರೆಯವರ ಜೀವನಕ್ಕೆ ಬೆಳಕಾಗಿ

| Published : Mar 11 2025, 12:46 AM IST

ಸಾರಾಂಶ

ನರ್ಸ್‌ ಗಳು ಪ್ರೀತಿ- ವಾತ್ಸಲ್ಯ ಬೆರೆಸಿದ ಮದ್ದು ನೀಡಿದಾಗ ಮಾತ್ರ ಶೇ. 100ರಷ್ಟು ಗುಣಮುಖರಾಗಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮೈಸೂರುಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಮಗು ಕಣ್ಣು ಬಿಟ್ಟಾಗ, ವ್ಯಕ್ತಿ ಕಣ್ಣು ಮುಚ್ಚುವ ಕ್ಷಣದಲ್ಲೂ ನೀವು ಇರುತ್ತೀರ. ಬೇರೆಯವರ ಜೀವನಕ್ಕೆ ನೀವು ಬೆಳಕಾಗಬೇಕು ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸಿ.ಆರ್‌. ಕಲ್ಪಶ್ರೀ ಕಿವಿಮಾತು ಹೇಳಿದರು.ಜೆ.ಕೆ. ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಸೋಮವಾರ ಸರ್ಕಾರಿ ಶುಶ್ರೂಷ ಕಾಲೇಜು 2024–25ನೇ ಸಾಲಿನ ಬಿಎಸ್ಸಿ ನರ್ಸಿಂಗ್‌ ಪ್ರಥಮ ವರ್ಷದ ವಿದ್ಯಾರ್ಥಿಗಳ ಜ್ಯೋತಿ ಬೆಳಗುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.ಪದವಿಗೆ ಕಾಲಿಡುವ ವಿದ್ಯಾರ್ಥಿಗಳನ್ನು ದೀಪ ಬೆಳಗಿಸಿ ಸ್ವಾಗತಿಸುವುದು ಪದ್ಧತಿ. ಇ‌ನ್ನೊಬ್ಬರ ಬಾಳಿಗೆ ಬೆಳಕಾಗಲಿ ಎಂಬುದು ಇದರ ಉದ್ದೇಶ. ನರ್ಸ್‌ ಗಳು ಪ್ರೀತಿ- ವಾತ್ಸಲ್ಯ ಬೆರೆಸಿದ ಮದ್ದು ನೀಡಿದಾಗ ಮಾತ್ರ ಶೇ. 100ರಷ್ಟು ಗುಣಮುಖರಾಗಲು ಸಾಧ್ಯ. ವೈದ್ಯರು- ನರ್ಸ್ ಒಂದೇ ಗಾಡಿಯ ಎರಡು ಚಕ್ರ ಇದ್ದಂತೆ. ಸೇವೆಯೇ ನಮ್ಮ ಮೊದಲ ಧ್ಯೇಯ ಆಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಎಂಸಿ ಡೀನ್‌ಡಾ.ಕೆ.ಆರ್. ದಾಕ್ಷಾಯಣಿ ಮಾತನಾಡಿ, ಕಲಿಕೆಗೆ ಪೂರಕ ವಾತಾವರಣ ಇದೆ. ಉಪನ್ಯಾಸಕರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಆರ್. ಸುಧಾ, ತಾಯಿ ಎಲ್ಲಾ ಕಡೆ ಇರಲು ಆಗದು. ಆ ಕಾರಣಕ್ಕೆ ನರ್ಸ್ ಗಳನ್ನು ನೇಮಿಸಲಾಗುತ್ತದೆ. ನೀವು ತಾಯಿ- ಸಹೋದರಿಯ ಪ್ರತಿರೂಪ. ತಾಳ್ಮೆ- ಸಂಯಮದಿಂದ ವರ್ತಿಸಬೇಕು. ನಾವು ನಡೆದುಕೊಳ್ಳುವ ರೀತಿಯೂ ಬಹಳ‌ಮುಖ್ಯ ಆಗುತ್ತದೆ ಎಂದು ಅವರು ವಿವರಿಸಿದರು.ಪ್ರಥಮ ವರ್ಷದ ನೂರು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಶುಶ್ರೂಷ ವಿಭಾಗದ ಡೀನ್‌ಡಾ.ಪಿ. ಮಹೇಶ್‌, ಕಾಲೇಜಿನ ಪ್ರಾಂಶುಪಾಲ ಡಾ.ಪಿ. ನಂದಪ್ರಕಾಶ್‌, ಕೆ. ಸತೀಶ್‌, ಎಂಎಂಸಿ ಆರ್ಥಿಕ ಸಲಹೆಗಾರ್ತಿ ಎನ್. ನೂತನಶ್ರೀ ಇದ್ದರು.