ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣ ಗುರು ಸೇವಾ ದಳ ಮತ್ತು ಶ್ರೀ ನಾರಾಯಣ ಗುರು ಮಹಿಳಾ ಘಟಕ, ಅಮೃತ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಸಂಘದ ಅಮೃತ ಮಹೋತ್ಸವ

ಮೂಡುಬಿದಿರೆ: ಕೃಷಿ ಉದ್ಯಮದೊಂದಿಗೆ ವಿದ್ಯೆಗೆ ಆದ್ಯತೆ ನೀಡುವ ಮೂಲಕ ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕು. ಆಧುನಿಕ ಪರಿವರ್ತನೆ ಕಾಲಘಟ್ಟದಲ್ಲಿ ಪರಿವರ್ತನೆಗೆ ಒಗ್ಗಿಕೊಳ್ಳಬೇಕು. ಈ ಮೂಲಕ ನಾವು ಸವಕಲು ನಾಣ್ಯದ ಬದಲಾಗಿ ಚಲಾವಣೆಯ ನಾಣ್ಯವಾಗಿ ಮೂಡಿ ಬರಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣ ಗುರು ಸೇವಾ ದಳ ಮತ್ತು ಶ್ರೀ ನಾರಾಯಣ ಗುರು ಮಹಿಳಾ ಘಟಕ, ಅಮೃತ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಸಂಘದ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ತುಳುನಾಡಿನಲ್ಲಿ ಬಿಲ್ಲವರು, ಬಂಟರು ಹಾಗೂ ಮೊಗವೀರರು ಒಂದೇ ತಾಯಿಯ ಮಕ್ಕಳಾಗಿದ್ದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಅನ್ಯೋನ್ಯತೆ, ಪ್ರಗತಿಪರ ಚಿಂತನೆ ಮೂಲಕ ನಮ್ಮನ್ನು ನಾವು ಮೇಲ್ಮಟ್ಟದಲ್ಲಿ ಗುರುತಿಸಿಕೊಳ್ಳುವುದಲ್ಲದೆ ಅಶಕ್ತರು, ಬಲಹೀನರ ಪರವಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನಗೈದರು. ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಾರಾಯಣ ಗುರುಗಳು ಜಗತ್ತಿಗೆ ಸಂದೇಶ ನೀಡಿದವರು. ಅವರ ಸಂದೇಶದಂತೆ ಸಮಾಜ ಒಗ್ಗೂಡಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ನಡೆಸಬೇಕು. ಕೌಟುಂಬಿಕ ಜೀವನಕ್ಕೆ ಒತ್ತು ನೀಡಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಘಟನಾ ಶಕ್ತಿಯನ್ನು ಪ್ರೇರೇಪಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮಾತನಾಡಿ, ಬಿಲ್ಲವ ಸಮಾಜ ನನ್ನೊಂದಿಗೆ ಬಲವಾಗಿ ನಿಂತು ನಾಲ್ಕು ಬಾರಿ ಶಾಸಕನಾಗಲು ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಬಿಲ್ಲವ ಸಮಾಜಕ್ಕೆ ಅಭಾರಿ ಆಗಿರುವುದಾಗಿ ಹೇಳಿದರು.

ಕುವೈಟ್ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರಾಘು ಸಿ. ಪೂಜಾರಿ ಅವರು ಮೂಡುಬಿದಿರೆ ಸಂಘದ ಮಹತ್ವಕಾಂಕ್ಷಿ ಒಂದು ಕೋಟಿ ರು. ಮೊತ್ತದ ಅಮೃತ ವಿದ್ಯಾನಿಧಿಗೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣ ಇಂದಿನ ಶಕ್ತಿಯಾಗಿದ್ದು, ಸರ್ವರೂ ಮುಂದಿನ ಜನಾಂಗವನ್ನು ಶಿಕ್ಷಣದ ಮೂಲಕ ಬೆಳೆಸಲು ಆದ್ಯತೆ ನೀಡುವಂತೆ ಸಲಹೆ ನೀಡಿದರು. ತನ್ನ ವೈಯಕ್ತಿಕ 5 ಲಕ್ಷ ರು. ದೇಣಿಗೆ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಚಾರ್ಟರ್ಡ್ ಅಕೌಂಟೆಂಟ್ ರಘುಪತಿ ಭಟ್, ಕರ್ನಿರೆ ಸುವರ್ಣ ಪ್ರತಿಷ್ಠಾನದ ಪ್ರಭಾಕರ ಡಿ. ಸುವರ್ಣ ದುಬೈ, ಕರ್ನಾಟಕ ಉಚ್ಚ ನ್ಯಾಯಾಲಯದ ಪಧಾಂಕಿತ ಹಿರಿಯ ನ್ಯಾಯವಾದಿ ತಾರಾನಾಥ್ ಪೂಜಾರಿ, ಚಲನಚಿತ್ರ ನಟ ಉದ್ಯಮಿ ಡಾ. ರಾಜಶೇಖರ ಕೋಟ್ಯಾನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ದಸದಸ್ಯರಾದ ಪ್ರತಿಭಾ ಕುಳಾಯಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ ಆರ್. ಪೂಜಾರಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಶುಭ ಹಾರೈಸಿದರು.

ಸನ್ಮಾನ: ಹಿರಿಯ ಸಾಹಿತಿ ಹಾಗೂ ತುಳು ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮತ್ತು ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ. ಚಿತ್ತರಂಜನ್ ಅವರನ್ನು ಅಮೃತ ರತ್ನ ಬಿರುದಿನೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ದಾನಿ ರಾಘು ಸಿ. ಪೂಜಾರಿ ಅವರನ್ನು ಗೌರವಿಸಲಾಯಿತು. ಮಹಿಳಾ ಕಬಡ್ಡಿ ವಿಶ್ವಕಪ್ ನಲ್ಲಿ ಗೆಲುವಿನ ನಗೆ ಬೀರಿದ ಧನಲಕ್ಷ್ಮಿ ಪೂಜಾರಿ, ಸಂಘದ ಸ್ಥಾಪಕ ಸದಸ್ಯ ಪಿ.ಕೆ. ರಾಜು ಪೂಜಾರಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ಎಸ್. ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರುಕ್ಕಯ್ಯ ಪೂಜಾರಿ ಅಳಿಯೂರು ಹಾಗೂ ಗೋಪಾಲ ಪೂಜಾರಿ ಮಾರೂರು ಅವರನ್ನು ಅಭಿನಂದಿಸಲಾಯಿತು.

ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ ಪಿ.ಎಂ. ಪ್ರಾಸ್ಥಾವಿಕವಾಗಿ ಮಾತನಾಡಿ, ಸಂಘ ನಡೆದು ಬಂದ ಹಾದಿಯನ್ನು ತಿಳಿಸಿದರು. ಅಮೃತ ಮಹೋತ್ಸವ ಸಮಿತಿ ಸಂಚಾಲಕ ಡಾ. ಮುರಳಿಕೃಷ್ಣ ಆರ್.ವಿ. ಸ್ವಾಗತಿಸಿದರು. ಮತ್ತೊಬ್ಬ ಸಂಚಾಲಕ ಡಾ. ರಮೇಶ್ ವಂದಿಸಿದರು. ಪ್ರಕಾಶ್ ಪೂಜಾರಿ ಎಸಿಎಫ್ ಉಪಸ್ಥಿತರಿದ್ದರು.ರಾಮ್ ಕುಮಾರ್ ಮರ್ನಾಡ್ ನಿರೂಪಿಸಿದರು. ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ ಮೆರವಣಿಗೆಗೆ ಚಾಲನೆ ನೀಡಿದರು.