ಮೂಡಿಗೆರೆಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕೆಂದರೆ ಪ್ರತಿಯೊಬ್ಬರೂ ಎಲ್ಲಾ ಜಾತಿ, ಧರ್ಮದ ಜನರನ್ನು ಗೌರವಿಸಬೇಕು. ಸ್ವಾಭಿಮಾನಕ್ಕೆ ಧಕ್ಕೆ, ಅಗೌರವ, ಅನ್ಯಾಯ ಎದುರಾದಾಗ ಅದನ್ನು ವಿರೋಧಿಸ ಬೇಕೆಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ ಹೇಳಿದರು.

- 208 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ

ಕನ್ನಡಪ್ರಭ ವಾರ್ತೆ,ಮೂಡಿಗೆರೆ

ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕೆಂದರೆ ಪ್ರತಿಯೊಬ್ಬರೂ ಎಲ್ಲಾ ಜಾತಿ, ಧರ್ಮದ ಜನರನ್ನು ಗೌರವಿಸಬೇಕು. ಸ್ವಾಭಿಮಾನಕ್ಕೆ ಧಕ್ಕೆ, ಅಗೌರವ, ಅನ್ಯಾಯ ಎದುರಾದಾಗ ಅದನ್ನು ವಿರೋಧಿಸ ಬೇಕೆಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ ಹೇಳಿದರು.

ಭೀಮಾ ಕೋರೆಗಾಂವ್ ಆಚರಣಾ ಸಮಿತಿಯಿಂದ ಶುಕ್ರವಾರ ಸಂಜೆ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಏರ್ಪಡಿಸಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ದೇಶದಲ್ಲಿ ಅವಿದ್ಯಾವಂತರು ಹಾಗೂ ಅಸಮಾನತೆಯಿಂದ ಕೂಡಿರಬೇಕೆಂಬ ವಿಕೃತ ಮನೋಭಾವ ಇರುವವರು ಮಾತ್ರ ಸಂವಿಧಾನ ಬದಲಾಯಿಸುತ್ತೇವೆಂದು ಹೇಳುತ್ತಿದ್ದಾರೆ. ಇಂತಹ ಮನಸ್ಥಿತಿ ಇರುವವರಿಂದ ಸಾಮರಸ್ಯ ಮೂಡಲು, ಸಮಾಜ ಬದಲಾಗಲು ಎಂದಿಗೂ ಸಾಧ್ಯವಿಲ್ಲ. ಬುದ್ಧ, ಬಸವಣ್ಣ, ಕನಕದಾಸ, ಬ್ರಹ್ಮಶ್ರೀ ನಾರಾಯಣ ಗುರು, ಕುವೆಂಪು ಇವರೆಲ್ಲರೂ ಅಸಮಾನತೆ, ಜಾತಿ ವಿರುದ್ಧ ಧ್ವನಿ ಎತ್ತಿದವರು. ಇಂತಹ ನೆಲದಲ್ಲಿ ಜಾತಿ, ಕೋಮುವಾದ ದೊಡ್ಡ ವಿಷವಾಗಿ ಬೆಳೆದು ನಿಂತಿದೆ. ಇದಕ್ಕೆ ಅಂತ್ಯ ಕಾಣಬೇಕೆಂದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕೆಂದು ಹೇಳಿದರು. ಡಿಜೆ ಹಾಕಿ ಕುಣಿಯುವುದು ಹಾಗೂ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸುವುದರಿಂದ ಈ ಸಮಾಜ ಹಾಗೂ ದೇಶ ಬದಲಾವಣೆಯಾಗುವುದಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಮೆಯಲ್ಲಿಲ್ಲ. ಬದಲಾಗಿ ಪುಸ್ತಕದಲ್ಲಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈಗಿನ ಯುವ ಪೀಳಿಗೆಗೆ ಬೇಡದ ವಿಚಾರವನ್ನು ತಲೆಗೆ ತುಂಬಲಾಗುತ್ತಿದೆ. ಎಲ್ಲರಿಗೂ ಸಮಾನ ಗೌರವ, ಹಕ್ಕು, ಅವಕಾಶಗಳು ದೊರಕ ಬೇಕು. ಜಾತಿ, ಧರ್ಮ, ಲಿಂಗ, ಭಾಷೆ, ವರ್ಗ, ಬೇಧ ಭಾವ ಬಿಟ್ಟು ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟ ಸಂವಿಧಾನವನ್ನು ಮಕ್ಕಳ ತಲೆಗೆ ತುಂಬಬೇಕು. ಆಗ ಮಾತ್ರ ದೇಶದಲ್ಲಿ ವಿಶ್ವಮಾನತೆ ಪರಿಕಲ್ಪನೆ ಮೂಡಲು ಸಾಧ್ಯವೆಂದು ಹೇಳಿದ ಅವರು, ಭೀಮಾ ಕೋರೆಂಗಾವ್ ವಿಜಯೋತ್ಸವದ ಬಗ್ಗೆ ಮಾಹಿತಿ ನೀಡಿದರು.ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಡಿಜೆ ಮತ್ತು ವಿವಿಧ ಕಲಾ ತಂಡ ಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಾ ಕೋರೆಗಾಂವ್ ಆಚರಣೆ ಸಂಘದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ವಹಿಸಿದ್ದರು. ಡಿಎಸ್‌ಎಸ್ ಅಂಬೇಡ್ಕರ್ ಧ್ವನಿ ರಾಜ್ಯಾಧ್ಯಕ್ಷೆ ವಸಂತಕುಮಾರಿ, ಸಂಘದ ಗೌರವಾಧ್ಯಕ್ಷೆ ಸಾವಿತ್ರಿ, ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು, ಪ.ಪಂ. ಮಾಜಿ ಸದಸ್ಯ ಹಂಝಾ, ಮುಖಂಡರಾದ ಡಾ. ಶಿವಪ್ರಸಾದ್, ಅಂಗಡಿ ಚಂದ್ರು, ಮದ್ವರಾಜ್‌ಗೌಡ, ಪ್ರಸನ್ನ ಮರಗುಂದ, ಎಲ್.ಬಿ.ರಮೇಶ್, ಜಗದೀಶ್ ಕೆಳಗೂರು, ದೇವರಾಜ್, ಎಚ್.ಚಂದ್ರೇಶ್ ಸೇರಿದಂತೆ ಸಂಘದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

24 ಮೂಡಿಗೆರೆ 1ಎ: ಮೂಡಿಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ ಮಾತನಾಡಿದರು.