ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿ ಹಾಗೂ ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಅವರು ದೇಶದ ಬಡತನ ನಿವಾರಣೆಗಾಗಿ ಶ್ರೀಸಾಮಾನ್ಯರನ್ನು ಸಬಲಗೊಳಿಸಲು ಉದಾರಿಕರಣ ನೀತಿಯನ್ನು ಅಳವಡಿಸಿ ಹಲವು ಆರ್ಥಿಕ ಕಾರ್ಯಕ್ರಮಗಳ ಮೂಲಕ ಸ್ವತಂತ್ರವಾಗಿ ದುಡಿಯುವ ಅವಕಾಶಗಳು ಮತ್ತು ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವಂತೆ ಅವಕಾಶಗಳನ್ನು ತೆರೆದಿಟ್ಟರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಅಭಿಪ್ರಾಯಪಟ್ಟರು.ನಗರದ ನಂದಿ ರಂಗಮಂದಿರದ ಆವರಣದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಪರಿಷತ್ತಿನ ಘಟಕಗಳು ಆಯೋಜಿಸಿದ್ದ ಡಾ. ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಆರ್ಥಿಕ ಉದಾರೀಕರಣ ಜಾರಿ90ರ ದಶಕದಲ್ಲಿ ಭಾರತದ ಬಡ ಜನತೆಗೆ ಹಣ ಸಂಪಾದಿಸುವ ಅವಕಾಶಗಳು ಕುಗ್ಗಿಹೋಗಿ ಬೆವರು ಸುರಿಸಿ ದುಡಿಯುವ ಶ್ರೀಸಾಮಾನ್ಯರಿಗೆ ಅತ್ಯಲ್ಪ ಹಣ ದೊರಕುತ್ತಿತ್ತು. ಇಂತಹ ದಯನೀಯ ಸ್ಥಿತಿಯಿಂದ ಬಡವರನ್ನು ಮೇಲೆತ್ತುವ ಉದ್ದೇಶದಿಂದ ತಾವು ಪ್ರಧಾನಿಯಾದ ಸಂದರ್ಭದಲ್ಲಿ ಆರ್ಥಿಕ ಉದಾರೀಕರಣ ನೀತಿಯನ್ನು ಜಾರಿಗೊಳಿಸಿದರು. ಜಾಗತೀಕರಣ ಸಂದರ್ಭದಲ್ಲಿ ದುಡಿಮೆಗೆ ಹೆಚ್ಚು ಅವಕಾಶಗಳು ತೆರೆದುಕೊಳ್ಳುವಂತೆ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿದರು ಎಂದರು.
ದೇಶದ ಎಲ್ಲ ವರ್ಗಗಳ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುವ ಉದ್ದೇಶದಿಂದ ಶಿಕ್ಷಣದ ಹಕ್ಕನ್ನು ಶಾಸನಬದ್ಧವಾಗಿ ಜಾರಿಗೊಳಿಸಿದರು. ಸರ್ವ ಶಿಕ್ಷಣ ಅಭಿಯಾನದಂತಹ ರಾಷ್ಟ್ರೀಯ ಶಿಕ್ಷಣ ಯೋಜನೆಗಳನ್ನು ಜಾರಿಗೊಳಿಸಿ ಸಾಕ್ಷರತೆಯ ಪ್ರಮಾಣ ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ದೇಶದ ಜನತೆ ಡಾಕ್ಟರ್ ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿರಬೇಕು.ಸ್ವಾವಲಂಬನೆ ಸಾಧಿಸಿದ ದೇಶ
ಇವರ ಕಾಲದಲ್ಲಿ ಜಾರಿಗೊಳಿಸಿದ ಆರ್ಥಿಕತೆಯ ಹಿನ್ನೆಲೆಯ ರಾಜತಾಂತ್ರಿಕ ನೀತಿಗಳಿಂದ ಮತ್ತು ಜಾಗತಿಕ ಆರ್ಥಿಕ ಒಡಂಬಡಿಕೆಗಳಿಂದ ಭಾರತದ ಆರ್ಥಿಕ ಸೂಚ್ಯಂಕಗಳು ಉತ್ತಮಗೊಳ್ಳಲು ಕಾರಣವಾಯಿತು. ಇಂಥ ಶ್ರೇಷ್ಠ ಆರ್ಥಿಕ ತಜ್ಞ, ವೈಜ್ಞಾನಿಕ ಚಿಂತಕ, ಜನಪರ ಕಾಳಜಿ ಹೊಂದಿದ್ದ ರಾಜಕೀಯ ಮುತ್ಸದ್ದಿ ನಮ್ಮ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಚಿಂತನೆಗಳನ್ನು ಸರ್ಕಾರಗಳು ಹಾಗೂ ಆರ್ಥಿಕ ಸಂಸ್ಥೆಗಳು ಅಳವಡಿಸಿಕೊಳ್ಳುವ ಮೂಲಕ ದೇಶದ ಸ್ವಾವಲಂಬನೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಡಾ.ಸಿಂಗ್ಗೆ ದೇಶ ಚಿರಋಣಿ
ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಡಾ.ಎಂ.ಶಂಕರ್, ಸರ್ದಾರ್ ಚಾಂದ್ ಪಾಷಾ, ಅಣ್ಣಮ್ಮ ಮತ್ತು ಸತೀಶ್ ರವರು ಡಾ.ಮನಮೋಹನ್ ಸಿಂಗ್ ಅವರ ವಿವಿಧ ಕ್ಷೇತ್ರಗಳ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸುತ್ತಾ ಅವರಿಗೆ ಇಡೀ ದೇಶ ಋಣಿಯಾಗಿರಬೇಕು, ಅಮೆರಿಕ ದೇಶದ ಆರ್ಥಿಕ ಸ್ಥಿತಿ ಕುಸಿದಾಗಲೂ ಕೂಡ ಅಗತ್ಯ ಮಾರ್ಗದರ್ಶನ ನೀಡಿ ಅಮೇರಿಕಾದ ಆರ್ಥಿಕ ಸ್ಥಿತಿಯನ್ನು ಸುಸ್ಥಿರಗೊಳಿಸಲು ನೆರವಾಗಿದ್ದನ್ನು ದೇಶ ಎಂದೆಂದಿಗೂ ಸ್ಮರಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಯಲವಹಳ್ಳಿ ಸೊಣ್ಣೆಗೌಡ, ಜಿಲ್ಲಾ ಘಟಕದ ಸದಸ್ಯರಾದ ಎಸ್ ಎನ್ ಅಮೃತ್ ಕುಮಾರ್, ಟಿವಿ ಚಂದ್ರಶೇಖರ್, ಶಿಡ್ಲಘಟ್ಟದ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ,ಎಸ್ ಸತೀಶ್, ಚಲಪತಿ ಗೌಡ, ಸರ್ದಾರ್ ಚಂದ್ ಪಾಷಾ, ಪ್ರೇಮ ಲೀಲಾ ವೆಂಕಟೇಶ್ ಹಾಗೂ ಅಣ್ಣಮ್ಮ, ಶಶಿಕಲಾ ಸುಜಾತ, ಮಹಮ್ಮದ್ ಬಿಲಾಲ್, ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.