ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಇತಿಹಾಸ ಪ್ರಸಿದ್ಧ ಹೊಂಬುಜ ಅತಿಶಯ ಶ್ರೀಕ್ಷೇತ್ರ ಜಗನ್ಮಾತೆ ಪದ್ಮಾವತಿ ಅಮ್ಮನವರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.

ಗುರುವಾರ ಮಧ್ಯಾಹ್ನ 12.27ಕ್ಕೆ ಮೂಲನಕ್ಷತ್ರದಲ್ಲಿ ಜಗನ್ಮಾತೆ ಪದ್ಮಾವತಿ ದೇವಿಯು ರಥವೇರುತ್ತಿದ್ದಂತೆ ನೆರೆದ ಭಕ್ತರ ಹರ್ಷೋದ್ಗಾರದೊಂದಿಗೆ ಶ್ರೀ ಪಾರ್ಶ್ವನಾಥ ಕೀ ಜೈ, ಶ್ರೀ ಪದ್ಮಾವತಿ ದೇವಿ ಕೀ ಜೈ, ಅಹಿಂಸಾ ಪರಮೋಧರ್ಮ ಕೀ ಜೈ, ಜೈನ ಧರ್ಮಕೀ ಜೈ ಎಂಬ ಭಕ್ತಿಭಾವದ ಜಯಘೋಷಗಳು ಮೊಳಗಿದವು. ಭಕ್ತರು ಬಾಳೆಹಣ್ಣು ಹೂವುಗಳನ್ನು ರಥದತ್ತ ಎಸೆದು ಜಯ ಘೋಷಣೆ ಕೂಗಿ ಭಕ್ತಿಯ ಪಾರಾಕಾಷ್ಠತೆ ಸಮರ್ಪಿಸಿದರು.

ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸಿದ್ದಿ ಕ್ಷೇತ್ರ ಸಮೇದ ಶಿಖರ 24 ತೀರ್ಥಂಕರು ಆಸಂಖ್ಯಾತ ಮುನಿಗಳಿಂದ ಮೋಕ್ಷ ಹೊಂದಿದ ಪ್ರತೀಕವೇ ಅತಿಶಯ ಕ್ಷೇತ್ರದ ರಥೋತ್ಸವ ನಡೆದು ಬಂದಿದೆ. ಬೈರವ ಪದ್ಮಾವತಿ ಶಾಸನದ ಕ್ಷೇತ್ರ ಹೊಸದಾಗಿ ಮಾಡಿದ ಕಲ್ಲಿನಬಸದಿ ನಿರ್ಮಾಣ ಕಲಿಕಾಲದ ಪವಾಡ ಸದೃಶ್ಯವಾಗಿ ಅಮ್ಮನವರ ರಥೋತ್ಸವ ಭಕ್ತರಿಗೆ ಮೆರಗು ತಂದಿದೆ ಎಂದ ಅವರು, ಬರುವ ವರ್ಷದಲ್ಲಿ ಮಳೆ ಬೆಳೆ ಸಮೃದ್ಧವಾಗಿ ಬರಲೆಂದು ದೇವಿ ಕರುಣಿಸಲೆಂದು ಪ್ರಾರ್ಥಿಸಿದ ಶ್ರೀಗಳು, ಅತಿ ಎತ್ತರ, ಅತಿ ಸುಂದರ ದಶ ದಿಕ್ಕು ಪಾಲಕರಿಂದ ತಯಾರಿಸಲಾದ ಮರದ ತೇರಿನಲ್ಲಿ ಉತ್ಸವ ಮೂರ್ತಿಯು ರಥದಲ್ಲಿ ವಿರಜಮಾನವಾಗಿರಿಸಿ ಹೂವಿನ ಅಲಂಕಾರದೊಂದಿಗೆ ಆಭರಣದ ಅಲಂಕಾರದಲ್ಲಿ ಯಕ್ಷ ಯಕ್ಷಿಣಿ ಪದ್ಮಾವತಿ ಅಮ್ಮನವರ ತೇರನ್ನು ಭಕ್ತರು ಭಕ್ತಿಯಿಂದ ಎಳೆದರು.

ಕಂಬದಹಳ್ಳಿ ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಧಾರ್ಮಿಕ ವಿಧಿಗಳಲ್ಲಿ ಉಪಸ್ಥಿತರಿದ್ದರು.


ನಂತರ ರಥೋತ್ಸವವು ಅಜ್ಜಪ್ಪನ ಕಟ್ಟೆಯಿಂದ ಹೊರಟು ಅಡ್ಡಗೇರಿ ಮೂಲಕ ಊರ ಬಾಗಿಲ ಪ್ರವೇಶಿಸಿ ಪ್ರಮುಖ ರಾಜಬೀದಿಯ ಮೂಲಕ ದೇವಸ್ಥಾನದ ಬಳಿ ಬಂದು ನೆಲೆ ನಿಂತಿತು.

ಸೇವಾಕರ್ತರಾದ ಶ್ರೀ ವಿಜಯ ಪಾಟ್ನಿ, ಶ್ರೀಮತಿ ಸರಿತಾ ಪಾಟ್ನಿ, ಧನಲಕ್ಷ್ಮೀ ಪರಿವಾರ, ಇಂಫಾಲ್, ಮಣಿಪುರ ಬಳಗದವರನ್ನು ಮೈಸೂರಿನ ಜೈನ ಸಮಾಜದವರು ಮೈಸೂರು ಕಟ್ಟೆ ಕುಟುಂಬದವರು ಸಾಮೂಹಿಕ ಅನ್ನ ಸಂತರ್ಪಣೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಸುಡು ಬಿಸಿಲನಲ್ಲಿ ನಿಂತಿದ್ದ ಭಕ್ತರಿಗೆ ಹರಿಹರ ಜೈನ ಸಮಾಜದವರು ಉಚಿತ ಕುಡಿಯುವ ನೀರಿನ ಬಾಟೆಲ್‌ ವಿತರಣೆ ಮಾಡಿದರು. ಶ್ರೀ ಮಠದಲ್ಲಿ ಸಹ ಅನ್ನ ಸಂತರ್ಪಣೆ ನೆರೆವೇರಿತು.