ದಬ್ಬಾಳಿಕೆ ವಿರುದ್ದ ಸಂಘಟಿತ ಹೋರಾಟ ಅಗತ್ಯ

| Published : Oct 29 2025, 01:00 AM IST

ಸಾರಾಂಶ

ದೊಡ್ಡಬಳ್ಳಾಪುರ: ರಾಜ ಮಹಾರಾಜರ ಆಡಳಿತದಲ್ಲಿ ತಮಗೆ ಬೇಕಾದ ಭೂಮಿ, ಸಂಪತ್ತನ್ನು ದೋಚಿಕೊಂಡು ಹೋಗುವಂತೆ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲೂ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರ ದೋಚುತ್ತಿದೆ. ಈ ದಬ್ಬಾಳಿಕೆಯ ವಿರುದ್ಧ ರೈತರು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ದಲಿತ ಸಂಘಟನೆ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.

ದೊಡ್ಡಬಳ್ಳಾಪುರ: ರಾಜ ಮಹಾರಾಜರ ಆಡಳಿತದಲ್ಲಿ ತಮಗೆ ಬೇಕಾದ ಭೂಮಿ, ಸಂಪತ್ತನ್ನು ದೋಚಿಕೊಂಡು ಹೋಗುವಂತೆ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲೂ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರ ದೋಚುತ್ತಿದೆ. ಈ ದಬ್ಬಾಳಿಕೆಯ ವಿರುದ್ಧ ರೈತರು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ದಲಿತ ಸಂಘಟನೆ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.

ತಾಲೂಕಿನ ಮಧುರನ ಹೊಸಹಳ್ಳಿಯಲ್ಲಿನ ತಬರನತೋಟದಲ್ಲಿ ನಡೆದ ಹಿರಿಯ ರೈತ ಹೋರಾಟಗಾರ ದಿಂಗತ ಡಾ.ಎನ್.ವೆಂಕಟರೆಡ್ಡಿ ಅವರ 14ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು.

ಬೆಂಗಳೂರು ಬಕಾಸೂರನಂತೆ ಗ್ರಾಮಾಂತರ ಜಿಲ್ಲೆಯ ಜನರ ಬದುಕನ್ನು ನುಂಗುತ್ತಿದೆ. ಇಡೀ ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಜನರ ತಮ್ಮ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ರೈತರು ಭೂಮಿ ಉಳಿವಿಗಾಗಿ ನಡೆಸಿದ ಹೋರಾಟದ ಯಶಸ್ಸು ಸಾಮೂಹಿಕವಾದದ್ದು. ಈ ಹೋರಾಟದ ಗೆಲುವಿನಲ್ಲಿ ರಾಜ್ಯ ಹಾಗೂ ದೇಶದ ಪ್ರಮುಖರ ಪಾಲು ಇದೆ ಎಂದರು.

ತಾಲ್ಲೂಕನ್ನು ಕೇಂದ್ರವಾಗಿಸಿಕೊಂಡು ರೈತ, ದಲಿತ ಹಾಗೂ ಕನ್ನಡಪರ ಸಂಘಟನೆಗಳನ್ನು ಸಂಘಟಿಸಿದ ಡಾ.ವೆಂಕಟರೆಡ್ಡಿ ಅವರು ಇಂದಿಗೂ ಅವರ ಹೋರಾಟದ ಬದುಕು ಎಲ್ಲಾ ಚಳುವಳಿಗೆ ಚೈತನ್ಯವಾಗಿದೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನಂತರ ರಾಜ್ಯ ರೈತ ಸಂಘವನ್ನು ಇಡೀ ರಾಜ್ಯದಲ್ಲಿ ಮುನ್ನಡೆಸಿ ಹಲವಾರು ಹೋರಾಟಗಳನ್ನು ರೂಪಿಸಿದ್ದ ಡಾ.ವೆಂಕಟರೆಡ್ಡಿ ಹಲವಾರು ಜನ ಹೋರಾಟಗಾರರನ್ನು ಹುಟ್ಟುಹಾಕಿದ್ದಾರೆ. ಹೋರಾಟಗಾರರ ಚರಿತ್ರೆಯನ್ನು ನಾಶಮಾಡುವ ವ್ಯವಸ್ಥೆ ಇಂದು ವಿಜೃಂಭಿಸುತ್ತಿದೆ. ದೊಡ್ಡ ಕಾರುಗಳಲ್ಲಿ ಒಡಾಡುವ, ಬೃಹತ್ ಬ್ಯಾನರ್ಗಳನ್ನು ಹಾಕಿಸಿಕೊಳ್ಳುವವರನ್ನು ನಾಯಕರನ್ನಾಗಿ ಮೆರೆಸುತ್ತಿರುವುದು, ನಾಯಕರೆಂದು ಒಪ್ಪಿಕೊಳ್ಳುತ್ತಿರುವುದು ದುರಂತ ಬದುಕಿನ ಸಂಕೇತವಾಗಿದೆ ಎಂದರು.

ಸಭೆಯಲ್ಲಿ ಸಿಪಿಎಂ ಜಿಲ್ಲಾ ಮುಖಂಡ ಆರ್.ಚಂದ್ರತೇಜಸ್ವಿ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ನಾಯ್ಕ್, ತಾಲೂಕು ಅಧ್ಯಕ್ಷ ವೆಂಕಟೇಶ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಪ್ರಸನ್ನ, ತಾಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಕೆ.ಸುಲೋಚನಮ್ಮ, ಡಿ.ಪಿ.ಆಂಜನೇಯ, ಮುತ್ತೇಗೌಡ, ಸತೀಶ್ ಇದ್ದರು.

28ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕಿನ ಮಧುರನ ಹೊಸಹಳ್ಳಿಯಲ್ಲಿ ರೈತನಾಯಕ ಡಾ.ಎನ್.ವೆಂಕಟರೆಡ್ಡಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಪಿಎಂ ಜಿಲ್ಲಾ ಮುಖಂಡ ಆರ್.ಚಂದ್ರತೇಜಸ್ವಿ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ನಾಯ್ಕ್,

ರೈತ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಪ್ರಸನ್ನ, ತಾಲೂಕು ಅಧ್ಯಕ್ಷ ಹನುಮೇಗೌಡ ಇತರರು ಪಾಲ್ಗೊಂಡಿದ್ದರು.