ಸಾರಾಂಶ
ಭದ್ರಾವತಿ: ಹಿರಿಯ ಪತ್ರಕರ್ತ ಎಲ್.ಆನಂದರಾಮನ್ ಅವರು ಪತ್ರಕರ್ತರಿಗೆ ಒಂದು ಶಿಸ್ತು, ಬದ್ಧತೆ ಬೇಕೆಂಬ ನಿಲುವು ಹೊಂದಿದ್ದವರು. ಮಾದರಿಯಾಗಿ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ.ಆರ್.ಬದರಿನಾರಾಯಣ ಶ್ರೇಷ್ಠಿ ಸ್ಮರಿಸಿದರು.
ಭದ್ರಾವತಿ: ಹಿರಿಯ ಪತ್ರಕರ್ತ ಎಲ್.ಆನಂದರಾಮನ್ ಅವರು ಪತ್ರಕರ್ತರಿಗೆ ಒಂದು ಶಿಸ್ತು, ಬದ್ಧತೆ ಬೇಕೆಂಬ ನಿಲುವು ಹೊಂದಿದ್ದವರು. ಮಾದರಿಯಾಗಿ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ.ಆರ್.ಬದರಿನಾರಾಯಣ ಶ್ರೇಷ್ಠಿ ಸ್ಮರಿಸಿದರು.
ಅವರು ಆನಂದರಾಮನ್ ಅವರ ನಿಧನದ ಹಿನ್ನೆಲೆಯಲ್ಲಿ ಹಳೇನಗರದ ಸಂಘದ ಕಚೇರಿಯಲ್ಲಿ ಸೋಮವಾರ ಸಂಜೆ ಜರುಗಿದ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪತ್ರಕರ್ತರು ಎಂದರೆ ಯಾವುದೋ ಅಮಿಷಗಳಿಗೆ ಒಳಗಾದವರಲ್ಲ ಅಥವಾ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಸೀಮಿತರಾದವರಲ್ಲ. ಸಮಾಜದಲ್ಲಿ ಅವರದೇ ಆದ ಜವಾಬ್ದಾರಿ, ಕರ್ತವ್ಯಗಳಿವೆ ಎಂಬುದನ್ನು ತೋರಿಸಿಕೊಟ್ಟವರು. ಇಂತಹವರು ಇಂದು ಕಣ್ಮರೆಯಾಗಿರುವುದು ನೋವಿನ ಸಂಗತಿಯಾಗಿದೆ. ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು. ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ, ಆನಂದರಾಮನ್ರವರು ಒಬ್ಬ ಪತ್ರಕರ್ತ ಮಾತ್ರವಲ್ಲ ಸಂಘದ ಪ್ರತಿಯೊಬ್ಬರಿಗೂ ಅವರೊಬ್ಬ ಉತ್ತಮ ಸ್ನೇಹಿತರಾಗಿದ್ದರು. ಪ್ರತಿಯೊಂದು ಕೆಲಸದಲ್ಲೂ ಬದ್ಧತೆ ಹಾಗೂ ನಿಖರತೆಯನ್ನು ಹೊಂದಿದ್ದರು. ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾಭವನ ಟ್ರಸ್ಟ್ ಬೆಳವಣಿಗೆಯಲ್ಲಿ ಅವರ ಪಾತ್ರ ಹೆಚ್ಚಿನದ್ದಾಗಿದೆ. ಅವರ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ದೇವರು ಆವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಹೇಳಿದರು. ಉಳಿದಂತೆ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್, ಸಹ ಕಾರ್ಯದರ್ಶಿ ಫಿಲೋಮಿನಾ, ಖಜಾಂಚಿ ಅನಂತಕುಮಾರ್, ಹಿರಿಯ ಸದಸ್ಯರಾದ ಎಚ್.ಕೆ.ಶಿವಶಂಕರ್, ಸುದರ್ಶನ್, ಟಿ.ಎಸ್ ಆನಂದಕುಮಾರ್, ಸುಧೀಂದ್ರ, ಸೈಯದ್ ಖಾನ್, ಕೆ.ಆರ್.ಶಂಕರ್, ಕಿರಣ್ ಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿ, ಸಂತಾಪ ವ್ಯಕ್ತಪಡಿಸಿದರು. ಆರಂಭದಲ್ಲಿ ಆನಂದರಾಮನ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.ಶಾಸಕರ ಸಂತಾಪ:ಹಿರಿಯ ಪತ್ರಕರ್ತರಾದ ಎಲ್.ಆನಂದರಾಮನ್ ಅವರು ಮಾಧ್ಯಮ ಲೋಕದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು. ಸ್ನೇಹಜೀವಿಯಾಗಿದ್ದ ಇವರು ಕ್ರೀಡಾ ಲೋಕದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇವರ ನಿಧನದಿಂದ ಇವರ ಕುಟುಂಬಕ್ಕೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ.