ಅನಂತ್‌ ಸರ್‌, ನೀವು ಹುಂ ಅನ್ನಿ ಸಾಕು

| Published : Dec 25 2023, 01:31 AM IST

ಸಾರಾಂಶ

ರಾಮಜನ್ಮಭೂಮಿಯಲ್ಲಿ ಮಂದಿರ ಉದ್ಘಾಟನೆ ಬಳಿಕ ಅನಂತಕುಮಾರ ಹೆಗಡೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೇ ದೊರಯಲಿದೆ.

ಶಿರಸಿ:

ಸರ್, ನೀವು ಈ ಬಾರಿ ಲೋಕಸಭೆಗೆ ಮತ್ತೆ ಸ್ಪರ್ಧಿಸಬೇಕು. ನೀವು ಸ್ಪರ್ಧಿಸಿದರಷ್ಟೇ ಬಿಜೆಪಿಗೆ ಬಲ, ನಮಗೂ ಉತ್ಸಾಹ. ನೀವೇ ಸ್ಪರ್ಧೆಯ ಉತ್ಸಾಹ ತೋರದಿದ್ದರೆ ಕೇಂದ್ರದವರಾದರೂ ಹೇಗೆ ಟಿಕೆಟ್ ನೀಡಬೇಕು? ನೀವು ಹುಂ ಅನ್ನಿ ಸಾಕು.

ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಮನೆ ಮುಂದೆ ಭಾನುವಾರ ಐದು ನೂರಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ ಇಂಥದೊಂದು ಮನವಿ ಮಾಡಿದರು.

ಮುಂಬರುವ ಲೋಕಸಭೆಗೆ ಮತ್ತೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಅವರನ್ನು ಒಪ್ಪಿಸಲು ಹರಸಾಹಸ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿರದ ಅನಂತಕುಮಾರ ಹೆಗಡೆ ಈ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದರು. ಆದರೆ, ಅವರ ಅಭಿಮಾನಿಗಳು ಅವರ ನಿರ್ಧಾರ ಒಪ್ಪಿಕೊಂಡಿಲ್ಲ.

ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿಯಾಗಿರುವ ಅನಂತಕುಮಾರ ಹೆಗಡೆ ರಾಷ್ಟ್ರಾಭಿಮಾನದ ಖಡಕ್ ಮಾತು, ಚಿಂತನೆಗಳ ಮೂಲಕವೇ ಜಿಲ್ಲೆಯ ಮನೆ ಮಾತಾಗಿದ್ದಾರೆ. ಹೀಗಾಗಿ ಅವರೇ ಮತ್ತೆ ಸಕ್ರಿಯರಾಗಬೇಕು, ಅಭ್ಯರ್ಥಿಯಾಗಬೇಕು ಎಂಬುದು ಅಭಿಮಾನಿಗಳ ಆಶಯವಾಗಿತ್ತು.

ಆಗಮಿಸಿದ ಅಭಿಮಾನಿಗಳೊಂದಿಗೆ ಮಾತನಾಡಿದ ಅನಂತಕುಮಾರ ಹೆಗಡೆ, ಕಳೆದ ೧೫ ವರ್ಷದಿಂದ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಹೇಳುತ್ತಲೇ ಬಂದಿದ್ದೇನೆ. ನಾಲ್ಕೈದು ವರ್ಷದಿಂದ ಈ ತೀರ್ಮಾನ ಗಟ್ಟಿಗೊಳಿಸಿಕೊಂಡಿದ್ದೇನೆ. ಈಗ ಯು ಟರ್ನ್ ಮಾಡಿಬಿಟ್ರೆ ಗಾಡಿ ಪಲ್ಟಿ ಆಗುವ ಸಂಭವ ಇರುತ್ತದೆ. ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ. ನಾನು ರಾಜಕೀಯದಲ್ಲಿ ಇರಲಿ, ಇಲ್ಲದಿರಲಿ, ದೇಶದ ಕೆಲಸದಿಂದ ಹಿಂದೆ ಸರಿದಿಲ್ಲ. ರಾಜಕಾರಣವೊಂದೇ ದೇಶದ ಕೆಲಸ ಮಾಡಲು ದಾರಿ ಅಂದೇನಿಲ್ಲ. ಸಾಮಾಜಿಕ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ನನಗೆ ಈ ಬದುಕಿನಲ್ಲಿ ಸಾಧ್ಯವಿಲ್ಲ ಎಂದರು.ಆದರೆ, ಅನಂತಕುಮಾರ ಹೆಗಡೆ ಅವರ ಈ ನಿರ್ಧಾರಕ್ಕೆ ಒಪ್ಪಿಕೊಳ್ಳಲು ಅಭಿಮಾನಿಗಳು ಸಿದ್ಧರಿರಲಿಲ್ಲ. ಕೆ.ಜಿ. ನಾಯ್ಕ ಹಣಜಿಬೈಲ್ ಮಾತನಾಡಿ, ನೀವು ಸ್ಪರ್ಧೆಯಿಂದ ಹಿಂದೆ ಸರಿದರೆ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಬಲವಾಗುತ್ತದೆ. ನೀವು ಕಣಕ್ಕಿಳಿದರೆ ಕಾಂಗ್ರೆಸ್‌ ಗೆಲುವಿನ ಆಸೆ ಬಿಟ್ಟು ಅಭ್ಯರ್ಥಿಯನ್ನೇ ಬದಲಾಯಿಸುತ್ತದೆ. ಹೀಗಾಗಿ, ಕೊನೆಯ ಕ್ಷಣದವರೆಗೆ ಕಾಯುವುದು ಸೂಕ್ತವಲ್ಲ ಎಂದರು.

ಎಂಟು ಕ್ಷೇತ್ರಗಳಲ್ಲಿ ಹೊಸಬರು ಬೇಕೆಂದ್ರೆ ಮುಖ ಪರಿಚಯ ಆದರೂ ಇರಬೇಕು. ಕಿತ್ತೂರು-ಖಾನಾಪುರದಲ್ಲಿ ಅನಂತಕುಮಾರ ಹೆಗಡೆ ಹೆಸರು ಕೇಳಿ ವೋಟ್ ಹಾಕುತ್ತಾರೆ ಎಂದು ಕಿತ್ತೂರು ಭಾಗದ ಅಭಿಮಾನಿಗಳು ಆಗ್ರಹ ವ್ಯಕ್ತಪಡಿಸಿದರು. ನಾವು ನಿಮ್ಮ ಜತೆ ರಕ್ತ ಹಂಚಿಕೊಂಡು ಬಂದವರು. ಆತ್ಮೀಯತೆಯಿಂದ ಕೇಳುತ್ತೇವೆ. ಕುಟುಂಬದ ಸದಸ್ಯನ್ನಾಗಿ ಜಿಲ್ಲೆ ನೋಡಿದೆ. ಮನೆ ಮಗನನ್ನಾಗಿ ನೋಡಿದೆ. ನೀವು ಸ್ಪರ್ಧಿಸಿದರಷ್ಟೇ ಬಿಜೆಪಿಗೆ ಶಕ್ತಿ ಬರಲಿದೆ ಎಂದು ಇನ್ನು ಕೆಲವು ಅಭಿಮಾನಿಗಳು ಆಗ್ರಹಿಸಿದರು.ಸುಮಾರು ಮುಕ್ಕಾಲು ತಾಸು ಚರ್ಚೆಯ ಬಳಿಕ ಮಾತನಾಡಿದ ಅನಂತಕುಮಾರ ಹೆಗಡೆ, ಚುನಾವಣೆಗೆ ಇನ್ನೂ ಸಮಯ ಇದೆ. ರಾಮಜನ್ಮ ಭೂಮಿಯಲ್ಲಿ ಮಂದಿರ ಉದ್ಘಾಟನೆ ಕಾರ್ಯಕ್ರಮಗಳೆಲ್ಲ ಮುಗಿಯಲಿ, ಎಲ್ಲ ಒಮ್ಮೆ ಕುಳಿತು ಮಾತಾಡೋಣ. ಎಲ್ಲರ ತೀರ್ಮಾನ ಹೇಗಿದೆ ಹಾಗೇ ಆಗಲಿ. ಕಾರ್ಯಕರ್ತರ ಅಭಿಪ್ರಾಯ ಕಡೆಗಣಿಸುವುದೂ ಮೂರ್ಖತನವಾಗುತ್ತದೆ ಎಂದರು.

ಈ ವೇಳೆ ಅಭಿಮಾನಿಗಳಾದ ಮಾರುತಿ ನಾಯ್ಕ, ಸುಬ್ರಾಯ ವಾಳ್ಕೆ, ಗಜು ನಾಯ್ಕ, ಸುಧೀರ ಕೊಂಡ್ಲಿ, ಬಲರಾಮ ನಾಮಧಾರಿ ಸೇರಿದಂತೆ ಹಲವರು ಇದ್ದರು.

ಹೊನ್ನಾವರ, ಕರ್ಕಿ, ಮಂಕಿ ಭಾಗದ ಅಭಿಮಾನಿಗಳು ಶ್ರೀಕುಮಾರ ಸಮೂಹ ಸಂಸ್ಥೆಗಳ ಮುಖ್ಯಸ್ಥ ವೆಂಕಟ್ರಮಣ ಹೆಗಡೆ ಅವರ ನೇತೃತ್ವದಲ್ಲಿ ಆಗಮಿಸಿ ಅನಂತಕುಮಾರ ಅವರನ್ನು ಭೇಟಿಯಾಗಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಳ್ಳುವಂತೆ ವಿನಂತಿಸಿದರು.